ಬೆಂಗಳೂರು ಲಾಲ್ಬಾಗ್: ಗುತ್ತಿಗೆ ಜಮೀನಿನ ನವೀಕರಣ ತಿರಸ್ಕರಿಸಿ ಸರ್ಕಾರ ಆದೇಶ
ಬೆಂಗಳೂರು, ಅಕ್ಟೋಬರ್ 26: ಮೈಸೂರಿನ ಉದ್ಯಾನ ಕಲಾಸಂಘ ಮತ್ತು ದಿ ನರ್ಸರಿಮನ್ ಕೋ ಆಪರೇಟಿವ್ ಸೊಸೈಟಿಗೆ ಬೆಂಗಳೂರು ಲಾಲ್ಬಾಗ್ ಉದ್ಯಾನದಲ್ಲಿ ನೀಡಿದ್ದ ಜಮೀನಿನ ಗುತ್ತಿಗೆಯನ್ನು ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಲಾಲ್ಬಾಗ್ ಉದ್ಯಾನದಲ್ಲಿ ಮೈಸೂರು ಉದ್ಯಾನ ಕಲಾಸಂಘ 28 ಗುಂಟೆ ಜಮೀನು ಹಾಗೂ ನರ್ಸರಿಮೆನ್ ಕೋ ಆಪ್ರೇಟಿವ್ ಸೊಸೈಟಿ 1.65 ಎಕರೆ ಪ್ರದೇಶವನ್ನು ಗುತ್ತಿಗೆ ಪಡೆದುಕೊಂಡಿದ್ದವು. ಗುತ್ತಿಗೆ ಅವಧಿ ಈಗಾಗಲೇ ಮುಗಿದಿದ್ದು, ನವೀಕರಣಕ್ಕೆಂದು ಪುನಃ ಅರ್ಜಿ ಸಲ್ಲಿಸಿದ್ದವು.
ನವೀಕರಣ ಮಾಡದ ರಾಜ್ಯ ಸರ್ಕಾರ ಈ ಸಂಬಂಧ ಅಕ್ಟೋಬರ್ 18ರಂದು ಆದೇಶ ಹೊರಡಿಸಿದೆ. ಅದರಲ್ಲಿ ನರ್ಸರಿಗಳಲ್ಲಿ ಕಸಿ, ಸಸಿಗಳ ಉತ್ಪಾದನೆ, ತಾರಸಿ ತೋಟ ನಿರ್ಮಾಣ, ಕೈತೋಟಗಳು ಮತ್ತು ಫಲಪುಷ್ಟ ಪ್ರದರ್ಶನ ಹಾಗೂ ರೈತರಿಗೆ ಅನುಕೂಲವಾಗುವ ಕೆಲಸ ಕೈಗೊಳ್ಳಲು ಉದ್ಯಾನದ ಜಮೀನನ್ನು ಈ ಎರಡು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿತ್ತು.
ಆದರೆ ಸರ್ಕಾರ ಯಾವ ಉದ್ದೇಶದಿಂದ ಜಮೀನು ನೀಡಿದಿಯೋ ಆ ಉದ್ದೇಶ ಅಷ್ಟಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಈಡೇರಲಿಲ್ಲ. ಹೀಗಾಗಿ ನವೀಕರಣಕ್ಕೆ ಸಲ್ಲಿಕೆಯಾಗಿದ್ದ ಈ ಸಂಸ್ಥೆಗಳ ಅರ್ಜಿಗಳನ್ನು ಸ್ವೀಕರಿಸಿಲ್ಲ. ಅರ್ಜಿ ರದ್ದು ಮಾಡಿ ಆದೇಶಿಸಿತು.
ಸರ್ಕಾರಿ ಅಧಿಕಾರಿಗಳಿಂದಲೇ 'ಫಲಪುಷ್ಪ' ಪ್ರದರ್ಶನ ನಿರ್ವಹಣೆ
ಉದ್ಯಾನದಲ್ಲಿ ಈ ಎರಡು ಸಂಸ್ಥೆಗಳಿಗೆ ನೀಡಲಾಗಿದ್ದ ಜಮೀನನಲ್ಲಿರುವ ಕಟ್ಟಡಗಳಲ್ಲಿ ತೋಟಗಾರಿಕೆ ಇಲಾಖೆಯ ಕಚೇರಿ ಆರಂಭಿಸಬೇಕು. ಅಲ್ಲದೇ ಈ ಸೊಸೈಟಿಗಳಲ್ಲಿ ನಿಯೋಜನೆಗೊಂಡಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು. ಜೊತೆಗೆ ಪ್ರತಿ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನದ ಶೇ. 95ರಷ್ಟು ಭಾಗವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳೇ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಫಲಪುಷ್ಪ ಪ್ರದರ್ಶನವನ್ನು ಈ ಎರಡು ಸಂಸ್ಥೆಗಳ ಸಹಕಾರ ಇಲ್ಲದೇ ನಡೆಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದೇಶದ ಅಂಶಗಳನ್ನು ಪಾಲಿಸಲು ಸೂಚನೆ
ಆದೇಶದಲ್ಲಿ ತಿಳಿಸಲಾದ ಎಲ್ಲ ಅಂಶಗಳನ್ನು ಪಾಲಿಸುವಂತೆ ಸರ್ಕಾರ ವಾರದ ಹಿಂದೆ ತೋಟಗಾರಿಕೆ ಇಲಾಖೆ ಪ್ರದಾನ ಕಾರ್ಯದರ್ಶಿ, ನಿರ್ದೇಶಕರಿಗೆ ಪತ್ರ ಬರೆದಿದೆ. ಜೊತೆಗೆ ಗುತ್ತಿಗೆಯ ಬಾಕಿ ಹಣ ಬರುವವರೆಗೆ ಆ ಎರಡು ಸಂಸ್ಥೆಗಳ ವಹಿವಾಟು ಸ್ಥಗಿತಗೊಳಿಸಿ ಎಂದು ಸರ್ಕಾರ ಸೂಚನೆ ನೀಡಿದೆ.
ವಿವಿಧ ಟೆಂಡರ್ ಪಡೆದು ಅಧಿಕ ಲಾಭ ಗಳಿಕೆ
ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಸೆಕ್ಷನ್ 4(ಜಿ) ಅಡಿಯಲ್ಲಿ ಹಲವಾರು ಟೆಂಡರ್ ಪಡೆದಿದೆ. ಈ 4ಜಿ ವಿನಾಯಿತಿಯನ್ನು ಸರ್ಕಾರ ಮೊನ್ನೆಯಷ್ಟೆ ರದ್ದು ಮಾಡಿದೆ. ಇನ್ನೂ ಮೈಸೂರು ಉದ್ಯಾನ ಕಲಾಸಂಘ ಸೇರಿದಂತೆ ಈ ಎರಡು ಸಂಸ್ಥೆಗಳು ಸರ್ಕಾರದ ಸಂಸ್ಥೆಗಳೆಂದು ಟೆಂಡರ್ ಪಡೆದು ಅಧಿಕ ಲಾಭ ಮಾಡಿಕೊಂಡಿರುವುದು ಗೊತ್ತಾಗಿದೆ. ಬೆಂಗಳೂರಲ್ಲಿ ಸಾವಿರಾರು ನರ್ಸರಿಗಳಿದ್ದು, ಇವುಗಳಿಗೆ ಗುತ್ತಿಗೆ ನೀಡಿ ಉದ್ದೇಶ ಮುಂದುವರೆಸುವಲ್ಲಿ ಯಾವ ಪ್ರಯೋಜನವಿಲ್ಲ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಐದು ವರ್ಷದ ಗುತ್ತಿಗೆ ಅವಧಿ 2016ರಲ್ಲೆ ಮುಕ್ತಾಯ
ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಗೆ ಹಾಗೂ ಮೈಸೂರು ಉದ್ಯಾನ ಕಲಾಸಂಘವು ಲಾಲ್ ಬಾಗ್ ಉದ್ಯಾನದಲ್ಲಿ ಪಡೆದಿದ್ದ ಗುತ್ತಿಗೆ ಅವಧಿಯು 2016ರ ಮಾರ್ಚ್ ಹಾಗೂ ಏಪ್ರಿಲ್ ನಲ್ಲೇ ಕೊನೆಗೊಂಡಿತ್ತು. ಪ್ರತಿ ವರ್ಷ 25,000ರೂ.ನಂತೆ ಐದು ವರ್ಷ ಗುತ್ತಿಗೆ ನೀಡಲಾಗಿತ್ತು. ಕೊನೆಗೊಂಡಿದ್ದ ಈ ಗುತ್ತಿಗೆಯನ್ನು ನವೀಕರಿಸಿ ಪುನಃ ಮುಂದುವರಿಸುವಂತೆ ಅವುಗಳ ಪ್ರಸ್ತಾವನೆ ಸಲ್ಲಿಸಿದ್ದವು. ಈ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಬಹುತೇಕರು ಖಾಸಗಿ ವ್ಯಕ್ತಿಗಳೇ ಆಗಿದ್ದಾರೆ ಎಂದು ತಿಳಿದು ಬಂದಿದೆ.