ಬಿಜೆಪಿಯ ಆರ್.ಅಶೋಕ್ ಮೇಲೆ ಸರ್ಕಾರದಿಂದ ಸಿಐಡಿ ಅಸ್ತ್ರ
ಬೆಂಗಳೂರು, ಮಾರ್ಚ್ 06: ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಒಕ್ಕಲಿಗ ನಾಯಕ ಆರ್.ಅಶೋಕ್ ಮೇಲೆ ರಾಜ್ಯ ಸರ್ಕಾರ ಸಿಐಡಿ ತನಿಖೆಯ ಅಸ್ತ್ರ ಪ್ರಯೋಗಿಸಲು ತಯಾರಾಗಿದೆ.
ಆರ್.ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ಮಾಡಿದ್ದಾರೆನ್ನಲಾಗಿರುವ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಲಿದೆ. ಹಗರಣ ಕುರಿತು ಈಗಾಗಲೇ ಸದನ ಸಮಿತಿ ತನಿಖೆ ಮಾಡಿದ್ದು ಗೃಹ ಇಲಾಖೆಯು ಸಿಐಡಿ ತನಿಖೆಗೆ ಆದೇಶ ಹೊರಡಿಸಲಿದೆ.
ಮಾರ್ಕೊಪೋಲೊ ಬಸ್ ಖರೀದಿ ಹಗರಣ, ಸಿಐಡಿ ತನಿಖೆಗೆ ಆದೇಶ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ 98 ಮಾರ್ಕೊಪೊಲೋ ಬಸ್ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿತ್ತು ಎಂದು ಪ್ರಸ್ತುತ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸೊರುವ ಸದನ ಸಮಿತಿಯು ತಾಂತ್ರಿಕವಾಗಿ ಸೂಕ್ತವಲ್ಲದ ಬಸ್ ಖರೀದಿಸಲಾಗಿದೆ ಎಂದು ವರದಿ ನೀಡಿತ್ತು. ಇದನ್ನು ಆಧರಿಸಿ ಸಿಐಡಿ ತನಿಖೆ ನಡೆಸಲು ಶಿಫಾರಸು ಮಾಡಲಾಗಿದೆ ಎಂದು ಅವರು ಹೇಳಿದರು.
30.49 ಲಕ್ಷ ಪ್ರತಿ ಬಸ್ಗೆ
2008 ರಲ್ಲಿ ಸಾರಿಗೆ ಸಚಿವ ಆರ್. ಅಶೋಕ್ ರಾಜ್ಯೋತ್ಸವ ಕೊಡುಗೆ ಎಂದು ಮಾರ್ಕೊಪೊಲೋ ಬಸ್ಗಳನ್ನು ಬೆಂಗಳೂರಿಗೆ ಪರಿಚಯಿಸಿದ್ದರು. ಪ್ರತಿ ಬಸ್ಗೆ 30.49 ಲಕ್ಷ ರೂ. ಕೊಟ್ಟು ಖರೀದಿಸುತ್ತಿದ್ದೇವೆ ಎಂದು ಆ ಸಂದರ್ಭದಲ್ಲಿ ಅಶೋಕ್ ತಿಳಿಸಿದ್ದರು. ಬಸ್ ಖರೀದಿಗೆ ಜೆನರ್ಮ್(ಜವಾಹರಲಾಲ್ ನೆಹರೂ ನ್ಯಾಷನಲ್ ಅರ್ಬನ್ ರಿನೀವಲ್ ಮಿಷನ್) ಯೋಜನೆಯಡಿ ಕೇಂದ್ರ ಸರ್ಕಾರ 16 ಕೋಟಿ ರೂಪಾಯಿ ಅನುದಾನ ನೀಡಿತ್ತು. ರಾಜ್ಯ ಸರ್ಕಾರ 14 ಕೋಟಿ ನೀಡಿತ್ತು.
ಕರ್ಕಶ ಶಬ್ದ
ಈ ಬಸ್ಸುಗಳ ನಿರ್ವಹಣೆ ಬಗ್ಗೆ ಪ್ರಯಾಣಿಕರು ಮತ್ತು ಚಾಲಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಅವುಗಳೆಂದರೆ, ಕರ್ಕಶ ಸದ್ದು, ಕಡಿಮೆ ವೇಗ, ಕಳಪೆ ಗುಣಮಟ್ಟದ ಹವಾನಿಯಂತ್ರಿತ ವ್ಯವಸ್ಥೆ, ಪ್ರತಿ ಕಿ.ಮೀಗೆ 1.4 ಲೀಟರ್ ಇಂಧನ ಬಳಕೆ ಮತ್ತು ಅಧಿಕ ಪ್ರಮಾಣದ ಮಾಲಿನ್ಯ. ಆನಂತರ ವೇಗ ಹೆಚ್ಚಿಸಲು ಬಸ್ಗಳಿಂದ ಹವಾನಿಯಂತ್ರಣ ವ್ಯವಸ್ಥೆಯನ್ನು ತೆಗೆದು ಹಾಕಲಾಯಿತು.
ಹಣ ಮರು ಪಾವತಿಗೆ ಮನವಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಈ ಹಿಂದಿನ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಬಸ್ಸುಗಳನ್ನು ಪೂರೈಕೆ ಮಾಡಿದ್ದ ಟಾಟಾ ಮೋಟಾರ್ಸ್ ಮತ್ತು ಬ್ರೆಜಿಲ್ನ ಮಾರ್ಕೊಪೊಲೋಗೆ ಪತ್ರ ಬರೆದು, ಕಳಪೆ ಬಸ್ಸುಗಳನ್ನು ಪೂರೈಕೆ ಮಾಡಿದ್ದಕ್ಕೆ ರೂ. 30 ಕೋಟಿ ಮರುಪಾವತಿ ಮಾಡಬೇಕೆಂದು ಆಗ್ರಹಿಸಿದ್ದರು.
ಎಲ್ಲಾ ಬಸ್ಸುಗಳನ್ನು ಗುಜರಿಗೆ
ಕಳಪೆ ಬಸ್ಸುಗಳನ್ನು ಐದು ವರ್ಷ ಓಡಿಸಿದ್ದರಿಂದ ಸಾರಿಗೆ ಸಂಸ್ಥೆಗೆ 70 ಕೋಟಿ ರೂಪಾಯಿ ನಷ್ಟವಾಗಿದೆ. ಪ್ರತಿ ಬಸ್ಸಿಗೆ ಕಿ.ಮೀಗೆ ರೂ. 27 ರಷ್ಟು ನಷ್ಟ ಉಂಟಾಗುತ್ತಿದೆ. ಇನ್ನಷ್ಟು ನಷ್ಟ ಆಗುವುದನ್ನು ತಪ್ಪಿಸಲು 98 ಬಸ್ಸುಗಳನ್ನು ಗುಜರಿಗೆ ಹಾಕಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದರು. ಬಳಿಕ ಬಸ್ಸುಗಳ ಖರೀದಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆ(ವೆಚ್ಚ) ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.
'ರಾಜಕೀಯ ಷಡ್ಯಂತ್ರ'
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆರ್.ಅಶೋಕ್ 'ಇದೊಂದು ರಾಜಕೀಯ ಷಡ್ಯಂತ್ರವಷ್ಟೆ, 10 ವರ್ಷದ ಹಿಂದೆ ನಡೆದ ಖರೀದಿ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ಸರ್ಕಾರ ಬೇಕೆಂದೇ ಈಗ ಕೆದಕುತ್ತಿದೆ' ಎಂದಿದ್ದಾರೆ. ಆ ಖರೀದಿಯಲ್ಲಿ ರಾಜ್ಯದ ಪಾತ್ರ ಕಡಿಮೆ ಬಹುತೇಕ ಖರೀದಿ ವ್ಯವಹಾರ ನಡೆಸಿದ್ದು ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.