ಸಾಲದ ಬಗ್ಗೆ ಶ್ವೇತ ಪತ್ರ ಹೊರಡಿಸಿ: ಬಿಬಿಎಂಪಿಗೆ ಸರ್ಕಾರ ಆದೇಶ
ಬೆಂಗಳೂರು, ಫೆಬ್ರವರಿ 04: ಬಿಬಿಎಂಪಿಯ ಸಾಲದ ಬಗ್ಗೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಾಲದ ಬಗ್ಗೆ ಶ್ವೇತ ಪತ್ರ ಹೊರಡಿಸಲು ಬಿಬಿಎಂಪಿ ಆಯುಕ್ತರಿಗೆ ಆದೇಶ ನೀಡಿದೆ.
ಬಿಬಿಎಂಪಿಯು ಸಾಲದಲ್ಲಿ ಸಿಲುಕಿರುವ ಬಗ್ಗೆ ಆಡಳಿತ ಪಕ್ಷ ಕಾಂಗ್ರೆಸ್-ಜೆಡಿಎಸ್ ಹಾಗೂ ವಿರೋಧ ಪಕ್ಷ ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿದ್ದು, ಪರಸ್ಪರರು ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು.
ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, 1989 ರಿಂದ ಈ ವರೆಗೆ ಬಿಬಿಎಂಪಿ ಪಡೆದಿರುವ ಸಾಲ, ತೀರಿಸಿರುವ ಸಾಲದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸರ್ಕಾರವು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ಗೆ ಆದೇಶ ನೀಡಿದೆ.

2010 ರಿಂದ 2015 ರವರೆಗೆ ಬಿಬಿಎಂಪಿಯು ಬಿಜೆಪಿ ಆಡಳಿತದಲ್ಲಿತ್ತು ಆಗ ನಗರದ ಪಾರಂಪರಿಕ ಕಟ್ಟಡಗಳನ್ನು ಟಡಮಾನ ಇಟ್ಟು ಸಾಲ ತರಲಾಗಿತ್ತು. ಆದರೆ ನಂತರ ಅದನ್ನು ನಮ್ಮ ಆಡಳಿತದ ಅವಧಿಯಲ್ಲಿ ಬಿಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ಹೇಳುತ್ತಿದೆ. ಇದನ್ನು ಬಿಜೆಪಿ ಒಪ್ಪುತ್ತಿಲ್ಲ.
ಕಾಂಗ್ರೆಸ್ ಅವಧಿಯಲ್ಲಿ ಮಾಡಿದ್ದ ಸಾಲವನ್ನು ತೀರಿಸುವ ಕಾರಣಕ್ಕೆ ನಾವು ಕಟ್ಟಡಗಳನ್ನು ಅಡಮಾನ ಇಡುವ ಪರಿಸ್ಥಿತಿ ಬಂತು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ದೂರಿದ್ದಾರೆ. ಕೌನ್ಸಿಲ್ ಸಭೆಯಲ್ಲಿ ಸಹ ಈ ವಿಷಯ ಚರ್ಚೆ ನಡೆದು ಸಾಲಕ್ಕೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಲಿ ಎಂದು ಪದ್ಮನಾಭ ರೆಡ್ಡಿ ಸವಾಲೆಸೆದಿದ್ದರು. ಸುದ್ದಿಗೋಷ್ಠಿ ಸಹ ನಡೆಸಿ ಒತ್ತಡ ಹೇರಿದ್ದರು.
ಪದ್ಮನಾಭ ರೆಡ್ಡಿ ಸವಾಲು ಸ್ವೀಕರಿಸಿರುವ ಸರ್ಕಾರ ಶ್ವೇತಪತ್ರ ಹೊರಡಿಸಲು ಸೂಚಿಸಿದೆ. ನಗರಾಭಿವೃದ್ಧಿ ಇಲಾಖೆ ವತಿಯಿಂದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ಗೆ ಆದೇಶ ನೀಡಲಾಗಿದ್ದು, ಶ್ವೇತಪತ್ರ ಹೊರಡಿಸಿದ ಬಳಿಕ ಬಿಬಿಎಂಪಿ ಸಾಲದ ಬಗ್ಗೆ ಪೂರ್ಣ ಮಾಹಿತಿ ದೊರೆಯಲಿದೆ ಮತ್ತು ಸಾಲಕ್ಕೆ ಕಾರಣ ಯಾರು ಎಂಬುದು ಸಹ ತಿಳಿಯಲಿದೆ.












Click it and Unblock the Notifications