ಎಲ್ಲಾ ಬಡವರಿಗೆ ವಸತಿ ಕಲ್ಪಿಸಲು ಸರ್ಕಾರ ಬದ್ಧ: ಕೃಷ್ಣ ಬೈರೇಗೌಡ
ಬೆಂಗಳೂರು, ನವೆಂಬರ್ 10: ಎಲ್ಲಾ ವಸತಿ ರಹಿತ ಬಡವರಿಗೆ ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ಗುರಿಯನ್ನು ಸಾಧಿಸಲು ತಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ರಾಜ್ಯದ ವಸತಿ ರಹಿತ ಫಲಾನುಭವಿಗಳಿಗೆ ಮನೆ ಹಕ್ಕು ಪತ್ರಗಳನ್ನು ವಿತರಿಸಿದ ಅವರು, "ಎಲ್ಲಾ ವಸತಿ ರಹಿತರು ಮತ್ತು ಬಡವರಿಗೆ ವಸತಿ ಒದಗಿಸುವುದು ನಮ್ಮ ಸಂಕಲ್ಪವಾಗಿದೆ. ನಮ್ಮ ಸರ್ಕಾರ ಈ ಗುರಿಯತ್ತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಇಂದು ವಸತಿ ರಹಿತ ಫಲಾನುಭವಿಗಳಿಗೆ ಮನೆ ಹಕ್ಕು ಪತ್ರಗಳನ್ನು ಹಸ್ತಾಂತರಿಸುತ್ತಿರುವುದು ನನಗೆ ವೈಯಕ್ತಿಕವಾಗಿ ಅಪಾರ ಸಂತೋಷ ಮತ್ತು ತೃಪ್ತಿಯ ಕ್ಷಣವಾಗಿದೆ" ಎಂದು ಬೈರೇಗೌಡ ಹೇಳಿದರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸರ್ವೆ ನಂ-109 ರಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮೂಲಕ NURM-BSUP ಯೋಜನೆಯಡಿ 248 ಮನೆಗಳನ್ನು ನಿರ್ಮಿಸಿ ಅರ್ಹ ಬಡವರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೊಡ್ಡ ನಗರಗಳಲ್ಲಿ ವಾಸಿಸುವವರಿಗೆ ಮನೆ ಬಹುಮುಖ್ಯ ಅಗತ್ಯವಾಗಿದೆ. ಸ್ವಂತ ಮನೆಯು ಒಂದು ರೀತಿಯ ಭಾವನಾತ್ಮಕ ನೆಮ್ಮದಿಯನ್ನು ನೀಡುತ್ತದೆ ಮತ್ತು ಪ್ರತಿಯೊಬ್ಬರಿಗೂ ಆ ಸಮಾಧಾನ ಮತ್ತು ನೆಮ್ಮದಿಯ ಭಾವನೆ ಇರಬೇಕು ಎಂಬುದು ನಮ್ಮ ಆಶಯ. ಬೆಂಗಳೂರಿನಂತಹ ನಗರದಲ್ಲಿ ಬಡವರು ಆಸ್ತಿ ಹೊಂದುವುದು ಅಷ್ಟು ಸುಲಭವಲ್ಲ, ಆದ್ದರಿಂದ ನಮ್ಮಿಂದ ಸಾಧ್ಯವಾದಷ್ಟು ಜನರಿಗೆ ಮನೆಗಳನ್ನು ನಿರ್ಮಿಸುವುದು ತುಂಬಾ ಸಂತೋಷದ ವಿಷಯ ಎಂದರು.
ವಾಸ್ತವವಾಗಿ ಈ ಜಾಗವನ್ನು ಕೆಲವು ವರ್ಷಗಳ ಹಿಂದೆಯೇ ಒತ್ತುವರಿ ಮಾಡಲಾಗಿತ್ತು. ಅಲ್ಲಿಂದ ಅಕ್ರಮ ಒತ್ತುವರಿದಾರರನ್ನು ತೆರವು ಮಾಡಿ ಜಾಗಕ್ಕೆ ಬೇಲಿ ಹಾಕಿ ಜಮೀನು ರಕ್ಷಣೆ ಮಾಡಲಾಗಿತ್ತು. ನಂತರ ಬೋರ್ ವೆಲ್ ಅಳವಡಿಸಿ, ಶೆಡ್ ಕೂಡ ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು ಎಂದು ಅವರು ತಿಳಿಸಿದರು.
ಈ ಭೂಮಿಯನ್ನು ಅತಿಕ್ರಮಣಕಾರರಿಂದ ಎಚ್ಚರಿಕೆಯಿಂದ ರಕ್ಷಿಸಲಾಗಿದೆ. ಈಗ ಅದೇ ಜಾಗದಲ್ಲಿ 248 ಮನೆಗಳನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ನೆರವಿನಿಂದ ನಿರ್ಮಿಸಿ ಬಡವರಿಗೆ ಹಾಗೂ ಅರ್ಹರಿಗೆ ನೀಡಲಾಗುತ್ತಿದೆ. ಈ ಕೆಲಸ ನಿಜಕ್ಕೂ ತೃಪ್ತಿ ತಂದಿದೆ ಎಂದರು.












Click it and Unblock the Notifications