Chandru Murder Case : ಗೋರಿಪಾಳ್ಯದ ಕೊಲೆಗೆ ಗೃಹ ಸಚಿವ, ಪೊಲೀಸರಿಂದ ದ್ವಂದ್ವ ಹೇಳಿಕೆ: ಗಲಭೆ ಸೃಷ್ಟಿಸುವ ಹುನ್ನಾರ?
ಬೆಂಗಳೂರು ಏಪ್ರಿಲ್ 6: ಚುನಾವಣೆ ವರ್ಷದಲ್ಲಿ ಹೆಣವೊಂದು ಬಿದ್ದರೆ ವಾರಸುದಾರರಾಗಿ ಮನೆಯವರಷ್ಟೇ ಅಲ್ಲ, ಎಲ್ಲ ರಾಜಕೀಯ ಪಕ್ಷಗಳೂ ಸಹ ಇದು ನಂದು ನಂದು ಎಂದು ಬಡಿದಾಡಿಕೊಳ್ಳುವ ಪರಿಸ್ಥಿತಿ ಕರ್ನಾಟಕ ಬಂದು ತಲುಪಿದಂತೆ ಕಾಣುತ್ತಿದೆ.
ಗೋರಿಪಾಳ್ಯದಲ್ಲಿ ನಡೆದ ಕೊಲೆಯೊಂದು ನಡೆದಿದ್ದು, ಮುಸ್ಲಿಮರ ಪ್ರಾಭಲ್ಯ ಇರುವ ಪ್ರದೇಶದಲ್ಲಿ ನಡೆದ ಘಟನೆಗೆ ರಾಜಕೀಯದ ನಂಟು ಬಹುಬೇಗ ಬೆಸೆದಿದೆ. ಕೊಲೆಯಾದ ಚಂದ್ರು ಎಂಬ ಯುವಕನ ಅಂತ್ಯಕ್ರಿಯೆ ನೆರವೇರುವ ಮೊದಲೇ ಎಲ್ಲ ರಾಜಕೀಯ ನಾಯಕರುಗಳೂ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳಲು ಹಂಬಲಿಸುತ್ತಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು ಎಂಬ ಯುವಕ ತಡರಾತ್ರಿ ಹೋಟೆಲ್ನಲ್ಲಿ ಊಟ ಮಾಡಿ ಮನೆಗೆ ಬರುತ್ತಿದ್ದ ವೇಳೆ ಕೊಲೆ ನಡೆದಿದೆ. ಜಗಜೀವನ್ರಾಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಶಾಹಿದ್ ಪಾಷಾ (21 ವರ್ಷ), ಶಾಹಿದ್ ಗೋಲಿ (22 ವರ್ಷ) ಎಂಬ ಚಂದ್ರುನನ್ನು ಹೊಡೆದು ಕೊಂದ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಚಂದ್ರು ಅಸುನೀಗಿದ್ದಾನೆ. ಸ್ನೇಹಿತನ ಮೇಲೆ ಕೂಡ ಹಲ್ಲೆ ಮಾಡಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯಗಳನ್ನು ಆಧರಿಸಿ ಮೂವರನ್ನು ಬಂದಿಸಲಾಗಿದೆ.

ಬೈಕ್ ತಗುಲಿದ್ದೇ ಕಾರಣ ಎಂದ ಪೊಲೀಸ್:
ಡಿಸಿಪಿ ಅನುಚೇತ್ ಮಾತನಾಡಿ, ಹಳೆಗುಡ್ಡದಳ್ಳಿ ಬಳಿ ಕಬಾಬ್ ಸೆಂಟರ್ ಗೆ ಹೋಗಿರುತ್ತಾರೆ. ಸೈಯದ್ ಬೈಕ್ ತಗುಲಿದೆ. ಇದರಿಂದ ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ 22 ವರ್ಷ ಚಂದ್ರುವಿಗೆ ತೊಡೆಗೆ ಚಾಕುವಿನಿಂದ ಹಿರಿಯಲಾಗಿದೆ. ರಕ್ತಸ್ರಾವದಿಂದ ಚಂದ್ರು ಅಸುನೀಗಿದ್ದಾನೆ' ಎಂದು ಹೇಳಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್,''ಏಪ್ರಿಲ್ 5ರ ಮಧ್ಯ ರಾತ್ರಿ ಸ್ನೇಹಿತನೊಂದಿಗೆ ಚಂದ್ರು ಮೈಸೂರು ರಸ್ತೆ ಕಡೆಗೆ ಹೋಗಿದ್ದರು. ವಾಪಸ್ಸು ಮರಳುತ್ತಿದ್ದಾಗ ಅವರ ಬೈಕ್ ಮತ್ತೊಂದು ಬೈಕ್ಗೆ ತಗುಲಿದೆ. ಈ ವೇಳೆ ಗಲಾಟೆ ನಡೆದಿದೆ. ಗಲಾಟೆಗೆ ಸ್ಥಳೀಯ ಗುಂಪು ಸೇರಿಕೊಂಡಿದೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಚಂದ್ರು ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಗಾಯಗೊಂಡಿದ್ದ ಚಂದ್ರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಧಿಕ ರಕ್ತ ಸ್ರಾವದಿಂದಾಗಿ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಉರ್ದು ಬಾರದ್ದಕ್ಕೆ ಕೊಲೆ ಎಂದ ಗೃಹ ಸಚಿವ:
ಬೆಂಗಳೂರಿನಲ್ಲಿ ಚಂದ್ರು ಎಂಬಾತನ ಹತ್ಯೆ ನಡೆದಿದೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ ಎಂದಿದ್ದಕ್ಕೆ ಚೂರಿಯಿಂದ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಘಟನೆಗೆ ಬೈಕ್ ಡಿಕ್ಕಿಯೇ ಕಾರಣ ಎಂದು ಹೇಳಿದರೆ, ಗೃಹ ಸಚಿವರು ಮಾತ್ರ ಅದನ್ನು ಕೋಮುವಾದಕ್ಕೆ ತಿರುಗಿಸುವ ಪ್ರಯತ್ನ ನಡೆಸಿರುವುದು ಇದರಿಂದ ಸ್ಪಷ್ಟವಾಗಿ ಕಂಡುಬರುತ್ತಿದೆ.
ಗೃಹ ಸಚಿವರಿಂದ ಶಾಂತಿ ಹಾಳು ಮಾಡುವ ಹೇಳಿಕೆ:
ಆರಗ ಜ್ಞಾನೇಂದ್ರ ಅವರಿಗೆ ತಾವು ಗೃಹ ಸಚಿವ ಎಂಬ ಅರಿವು ಇಲ್ಲ. ಸಮಾಜದಲ್ಲಿ ಶಾಂತಿ ಹಾಳು ಮಾಡುವಂತಹ ಹೇಳಿಕೆಗಳನ್ನು ನಿಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಘಟನೆ ನಡೆದು 24 ತಾಸು ಕಳೆದ ನಂತರ ಪೊಲೀಸರು ಒಂದು, ಗೃಹ ಸಚಿವರು ಒಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.












Click it and Unblock the Notifications