ಗೀತಂ ವಿವಿ ವಿದ್ಯಾರ್ಥಿನಿ ಸಾವಿನ ಕಿಡಿ, ಕಟ್ಟಡದ ಗ್ಲಾಸುಗಳು ಪುಡಿ ಪುಡಿ
ಬೆಂಗಳೂರು, ಏ. 28: ದೊಡ್ಡಬಳ್ಳಾಪುರದ ಗೀತಂ ವಿಶ್ವ ವಿದ್ಯಾಲಯದ ಹಾಸ್ಟೆಲ್ನಲ್ಲಿ ತಂಗಿದ್ದ ವಿದೇಶಿ ವಿದ್ಯಾರ್ಥಿನಿ ಆಯತಪ್ಪಿ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಾಲೇಜಿಗೆ ಕಲ್ಲು ತೂರಿ ಗ್ಲಾಸುಗಳನ್ನು ಪುಡಿ ಮಾಡಿದ್ದಾರೆ.
ದೊಡ್ಡಬಳ್ಳಾಪುರದ ನಾಗದೇವನಹಳ್ಳಿ ಸಮೀಪ ಇರುವ ಗೀತಂ ವಿಶ್ವ ವಿದ್ಯಾಲಯದಲ್ಲಿ ಉಗಾಂಡ ಮೂಲದ ಅಸೀನಾ ಅಗಷ (22) ಬಿಬಿಎ ಅಂತಿಮ ಪದವಿಯಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿನ ಹಾಸ್ಟೆಲ್ನಲ್ಲಿಯೇ ತಂಗಿದ್ದ ಅಸೀನಾ, ಹಾಸ್ಟೆಲ್ನ ಆರನೇ ಮಹಡಿಯಲ್ಲಿ ಒಣಗಾಕಿದ್ದ ಬಟ್ಟೆ ತರಲು ಹೋದಾಗ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಆಡಳಿತ ಮಂಡಳಿ ನಿರ್ಲಕ್ಷವೇ ಈ ಅವಘಡಕ್ಕೆ ಕಾರಣ ಎಂದು ರೊಚ್ಚಿಗೆದ್ದ ವಿದ್ಯಾರ್ಥಿಗಳು ಸಿಕ್ಕ ಸಿಕ್ಕ ವಸ್ತುಗಳನ್ನು ಹಿಡಿದು ಕಾಲೇಜಿನ ಮೇಲೆ ಕಲ್ಲು ತೂರಿದ್ದಾರೆ. ಕಾಲೇಜು ಹಾಗೂ ಹಾಸ್ಟೆಲ್ನ ಕೊಠಡಿಗಳು ಸಂಪುರ್ಣ ಪುಡಿ ಪುಡಿಯಾಗಿವೆ.
Gitam University : ಗೀತಂ ವಿವಿ ಕಟ್ಟಡದಿಂದ ಬಿದ್ದ ವಿದ್ಯಾರ್ಥಿನಿ ಹಸೀನಾ, ಸಾವಿನ ಬಗ್ಗೆ ಅನುಮಾನಾ?
ಘಟನಾ ಸ್ಥಳಕ್ಕೆ ಅಗಮಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದನ್ನು ಅರಿತ ಆಡಳಿತ ಮಂಡಳಿ ಕಾಲೇಜಿಗೆ ಒಂದು ದಿನ ಮಟ್ಟಿಗೆ ರಜೆ ಘೋಷಣೆ ಮಾಡಿದೆ.
ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ ಪೊಲೀಸರ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೃತ ವಿದ್ಯಾರ್ಥಿನಿಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಮೃತಳ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ವಿದ್ಯಾರ್ಥಿಗಳ ಗಲಾಟೆಗೆ ಸುದ್ದಿಯಾಗಿದ್ದ ಗೀತಂ ವಿಶ್ವ ವಿದ್ಯಾಲಯದಲ್ಲಿ ಯುವತಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹಾಸ್ಟೆಲ್ನ ಮಹಡಿಯಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಯೋ ಅಥವಾ ಕೊಲೆ ಎಂಬುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಾಲೇಜಿಗೆ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.