ಮಗಳಿಗೆ ದೆವ್ವ ಹಿಡಿದಿದೆ ಎಂದು ಕೂಡಿಟ್ಟ ಪಿಶಾಚಿಗಳು
ಬೆಂಗಳೂರು, ನ. 5: ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿರುವ ಬಾಲಕಿಗೆ ದೆವ್ವ ಹಿಡಿದಿದೆ ಎಂದು ಭಾವಿಸಿ ಪಾಲಕರೇ ಆಕೆಯನ್ನು ತಿಂಗಳುಗಳ ಕಾಲ ಕೋಣೆಯಲ್ಲಿ ಕೂಡಿಹಾಕಿದ ಕರುಣಾಜನಕ ಪ್ರಕರಣ ತುಮಕೂರಿನಲ್ಲಿ ನಡೆದಿದೆ. ವಿಷಯ ಬಯಲಾದ ತಕ್ಷಣ ಬಾಧಿತೆ ಸೀಮಾಳನ್ನು ನಿಮ್ಹಾನ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕಿ ತಲೆ ಹಿಡಿದುಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದಳು. ಇದರಿಂದ ಮಗಳ ಮೈಮೇಲೆ ದೆವ್ವ ಬಂದಿದೆ ಎಂದು ಭಾವಿಸಿದೆವು. ಆದ್ದರಿಂದ ಕೋಣೆಯಲ್ಲಿ ಕೂಡಿಹಾಕಿದ್ದೆವು ಎಂದು ಪಾಲಕರು ಹೇಳಿಕೊಂಡಿದ್ದಾರೆ. ತಿಂಗಳುಗಳ ಕಾಲ ಕೋಣೆಯೊಳಗೆ ಬಂಧಿಯಾಗಿದ್ದ ಸೀಮಾ ಸಹಿಸಲಸಾಧ್ಯವಾದ ತಲೆನೋವಿನ ಜತೆಗೆ ಮಾನಸಿಕ ಯಾತನೆಯನ್ನೂ ಅನುಭವಿಸಿದ್ದಾಳೆ. ಇದರಿಂದ ಬಾಲಕಿಯ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಪಾಲಕರು ಭಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ವಿವರಣೆ ನೀಡಿರುವ ನಿಮ್ಹಾನ್ಸ್ ನಿರ್ದೇಶಕ ಡಾ. ಸತೀಶ ಚಂದ್ರ, "ಬಾಲಕಿಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಸರ್ಜರಿ ಮಾಡುವುದು ಅನಿವಾರ್ಯ" ಎಂದು ತಿಳಿಸಿದ್ದಾರೆ.
"ಬಾಲಕಿಯನ್ನು ಈ ಮೊದಲೇ ಆಸ್ಪತ್ರೆಗೆ ಕರೆತರಬೇಕಿತ್ತು. ಟ್ಯೂಮರ್ ಕೊನೇ ಹಂತದಲ್ಲಿದ್ದು, ಬಾಲಕಿಯನ್ನು 24 ಗಂಟೆಗಳ ಕಾಲ ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಪಾಲಕರು ಈಗಾಗಲೇ ಶಸ್ತ್ರಕ್ರಿಯೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಗುರುವಾರ ಸರ್ಜರಿ ನಡೆಸಲಾಗುವುದು" ಎಂದು ವೈದ್ಯರು ವಿವರಿಸಿದ್ದಾರೆ. ಬಾಲಕಿಗೆ ಪ್ರಸ್ತುತ ನೋವು ನಿವಾರಕ ಔಷಧಿ ನೀಡಲಾಗಿದೆ.
ಸಹಾಯದ ಭರವಸೆ: ಆಸ್ಪತ್ರೆಗೆ ಭೇಟಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ಬಾಲಕಿಯ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಸರ್ಕಾರದಿಂದ ಬಾಲಕಿಯ ಚಿಕಿತ್ಸೆಗೆ ಎಲ್ಲ ರೀತಿಯ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.