ರಂಗ ಶಂಕರದಲ್ಲಿ ತುಘಲಕ್ - ನಾಟಕ ದರ್ಬಾರ್ !
ಬೆಂಗಳೂರು, ಏ.29: ಸಮುದಾಯ ಬೆಂಗಳೂರು ತನ್ನ ಇತ್ತೀಚಿನ ಪ್ರಖ್ಯಾತ ನಾಟಕವಾದ 'ತುಘಲಕ್' ಅನ್ನು, ಇದೇ ಮಂಗಳವಾರ ಮತ್ತು ಬುಧವಾರದಂದು ಜೆಪಿ ನಗರದಲ್ಲಿರುವ ರಂಗಶಂಕರ ದಲ್ಲಿ ಮರು ಪ್ರದರ್ಶಿಸಲಿದೆ.
ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡರ 'ತುಘಲಕ್' ಭಾರತದ ಶ್ರೇಷ್ಠ ನಾಟಕಗಳಲ್ಲೊಂದು. ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ತನ್ನ ಒಡಲೊಳಗಿರಿಸಿಕೊಂಡಿದೆ. ಈ ನಾಟಕದ ಮಹತ್ವಾಕಾಂಕ್ಷೆಯ ಪ್ರಯೋಗಗಳನ್ನು ಕನ್ನಡವೂ ಸೇರಿದಂತೆ ನಾಡಿನ ಅನೇಕ ಭಾಷೆಗಳು ಕಂಡಿವೆ.
'ಸಮುದಾಯ' ಬೆಂಗಳೂರು ಸಾಂಸ್ಕೃತಿಕ ಹಾಗೂ ರಾಜಕೀಯ ಪ್ರಜ್ಞೆಯ ಹಲವು ನೆಲೆಗಳನ್ನು ರಂಗದಲ್ಲಿ ಕಂಡರಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇಬಂದಿದೆ. 'ಸಮುದಾಯ'ದ ಚಿಂತನಾ ಕ್ರಮಗಳಿಗೆ ಸೂಕ್ತವಾಗಿ ಒದಗುವ 'ತುಘಲಕ್' ನಾಟಕದ ಪ್ರಯೋಗವೂ ಇಂತಹ ಮಹತ್ವಾಕಾಂಕ್ಷೆಯ ಪ್ರಯೋಗಗಳಲ್ಲೊಂದಾಗಲಿದೆ. 'ಸಮುದಾಯ' ಪ್ರಯೋಗಿಸುತ್ತಿರುವ 'ತುಘಲಕ್' ನಾಟಕದ ಈ ಓದು ತುಘಲಕ್ ನ್ನು ಒಂದು ಐತಿಹಾಸಿಕ ವ್ಯಕ್ತಿಯ ಕಥೆಯ ಓದನ್ನಾಗಿಸದೇ ಸಮಕಾಲೀನ ರಾಜಕೀಯದ ಹಲವು ಅರ್ಥ ಪರಂಪರೆಯ ಓದನ್ನಾಗಿಸಲು ಪ್ರಯತ್ನಿಸಿದೆ.
ಮಂಗಳವಾರ ಹಾಗೂ ಬುಧವಾರ ಸರಿಯಾಗಿ ಸಮಯ 7.30ಕ್ಕೆ ನಾಟಕ ಪ್ರದರ್ಶನವಿರುತ್ತದೆ. ನಾಟಕ ಪ್ರಿಯರು 7 ಗಂಟೆಯೊಳಗೆ ರಂಗ ಶಂಕರಕ್ಕೆ ಬಂದರೆ ಒಳಿತು. ಜೆಪಿ ನಗರ ಎರಡನೇ ಹಂತದಲ್ಲಿರುವ ರಂಗಶಂಕರದಲ್ಲಿ 120 ನಿಮಿಷಗಳ ನಾಟಕ ನೋಡಲು 100 ರು ಟಿಕೆಟ್ ಮುಂಚಿತವಾಗಿ ಪಡೆದುಕೊಳ್ಳಿ. ಟಿಕೆಟ್ ಗಾಗಿ ಸಂಪರ್ಕಿಸಿ ಸಂಖ್ಯೆ: 99001 82400. ವೆಬ್ ಸೈಟ್ ನಲ್ಲಿ ಬುಕ್ ಮಾಡಲು ಇಂಡಿಯಾ ಸ್ಟೇಜ್.ಇನ್ ಕ್ಲಿಕ್ ಮಾಡಿ.. ನಾಟಕದ ಕುರಿತ ವಿವರ ಮುಂದೆ ಓದಿ...

ರಾಜಕಾರಣದ ಮೇಲಿನ ಧರ್ಮದ ಹಿಡಿತ
ಮೇಲ್ನೋಟಕ್ಕೆ 'ತುಘಲಕ್' ಐತಿಹಾಸಿಕ ನಾಟಕವೆನ್ನಿಸಿದರೂ, ಇಂದಿಗೂ ನಾವು ಕಾಣುವ ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುತ್ತದೆ.
ಧರ್ಮ ದ್ವೇಷದಿಂದ ಒಡೆದು ಚೂರಾದ ತನ್ನ ರಾಜ್ಯವನ್ನು ಶಾಂತಿ ಮತ್ತು ಸಾಮರಸ್ಯದ ತಳಹದಿಯ ಮೇಲೆ ಕಟ್ಟ ಬಯಸುವ ತುಘಲಕ್ ನಿಗೆ ಎದುರಾಗುವುದು, ಧರ್ಮಾಂಧರ ವಿರೋಧ ಮತ್ತು ರಾಜಕಾರಣವನ್ನು ತಮ್ಮ ಹತೋಟಿಯಲ್ಲಿರಿಸಲು ಹುನ್ನಾರ ನಡೆಸುವ ಅಂದಿನ ವ್ಯಾಪಾರಿ ವರ್ಗವಾದ ಅಮೀರರು.
ರಾಜಕೀಯದ ಮೇಲಿರುವ ಧರ್ಮದ ಹಿಡಿತ, ತನ್ನ ರಾಜ್ಯದ ಭವ್ಯ ಭವಿತವ್ಯದ ಕನಸು ಕಂಡ 'ತುಘಲಕ್' ನಿಗೆ ಅಡ್ಡಿ ಎನಿಸುತ್ತದೆ. ಧರ್ಮಕ್ಕೂ ರಾಜಕಾರಣಕ್ಕೂ ಏನು ಸಂಬಂಧ ಎಂದು ಪ್ರಶ್ನಿಸುತ್ತಾ, ಧರ್ಮದ ಮೂಲಕ ತನ್ನ ಆಡಳಿತದ ಮೇಲೆ ಹಿಡಿತ ಸಾಧಿಸಲು ಹುನ್ನಾರ ನಡೆಸುವ ಪ್ರತಿ ಧರ್ಮಾಂಧರನ್ನೂ ಧಿಕ್ಕರಿಸುತ್ತಾ ಹೊರಡುವ 'ತುಘಲಕ್' 'ನನಗೆ ರಾಜ್ಯದಲ್ಲಿ ಸಮತೆ ಬೇಕು. ಪ್ರಗತಿ ಬೇಕು. ತರ್ಕಶುಧ್ಧ ನ್ಯಾಯ ಬೇಕು. ಶಾಂತಿಯಿದ್ದರೆ ಸಾಲದು, ಜೀವಕಳೆ ಬೇಕು. ಎಂದು ಕನಸು ಕಾಣುತ್ತಾನೆ.
ಮನುಷ್ಯ ಮಾಡಿದ ಕೊಳೆಯನ್ನು ತೊಳೆಯಲು ದೇವರನ್ನೇಕೆ ಕರೆಯಲಿ ಎಂದು ಪ್ರಶ್ನಿಸುವ ತುಘಲಕ್, ತನ್ನ ಭವ್ಯ ಭವಿತವ್ಯದ ಕನಸುಗಳನ್ನು ತನ್ನ ಪ್ರಜೆಗಳಲ್ಲಿ ಹಂಚಿಕೊಳ್ಳುತ್ತಾನೆ.
ಪ್ರಗತಿಪರನಾದ ಜನನಾಯಕನಿಗೆ ತೊಡಕುಗಳು
ಧರ್ಮಾಂಧತೆಯನ್ನು ಅಲ್ಲಗಳೆಯುವ ರಾಜನಿಂದ ಧರ್ಮಕ್ಕೆ ಕೇಡುಂಟಾಗುತ್ತದೆ ಎಂದು ನಂಬಿ ಪ್ರಚಾರ ಮಾಡುವ ಧರ್ಮಾಧಿಕಾರಿಗಳೂ, ಮತ್ತು, ಜನಪರವಾಗಿ, ವ್ಯಾಪಾರ ವಹಿವಾಟುಗಳ ಮೇಲೆ ತೆರಿಗೆ ವಿಧಿಸಿ, ಒಂದು ಧರ್ಮೀಯರ ಮೇಲೆ ವಿಧಿಸಿದ್ದ ತೆರಿಗೆಯನ್ನು ಮನ್ನಾ ಮಾಡಿದ ಸುಲ್ತಾನನಿಂದ ತಮ್ಮ ಬೊಕ್ಕಸ ತುಂಬುವುದಿಲ್ಲ ಎಂದು ಮನಗಂಡ ಅಮೀರರು, ತುಘಲಕ್ ವಿರುದ್ಧ ನಡೆಸುವ ಸಂಚು ಹುನ್ನಾರಗಳು, ಪ್ರಗತಿಪರನಾದ ಜನನಾಯಕ ಎದುರಿಸಬಹುದಾದ ಎಲ್ಲ ತೊಡಕುಗಳನ್ನು ಬಿಂಬಿಸುವ ನಾಟಕ, 'ತುಘಲಕ್'
ತನ್ನ ರಾಜ್ಯದ ಉಜ್ವಲ ಭವಿಷ್ಯದ ಕನಸು ಕಂಡ ತುಘಲಕ್ ನ ಸಾಮ್ರಾಜ್ಯದ ಅವನತಿಯ ರಾಜಕಾರಣ ಮತ್ತು ಧರ್ಮಕಾರಣಗಳನ್ನು ಎತ್ತಿ ಹಿಡಿವ ಈ ನಾಟಕ, ಒಂದು ಅಪ್ಪಟ ರಾಜಕೀಯ ನಾಟಕವಾಗಿ ರೂಪುಗೊಂಡಿದೆ. 'ತುಘಲಕ್' ನಾಟಕದ ಹಲವು ಸಾಧ್ಯತೆಗಳಲ್ಲಿ ಇದೂ ಒಂದು ಸಾಧ್ಯತೆ. ಇಂದಿನ ಸಮಕಾಲೀನ ವಸ್ತು ಸ್ಥಿತಿಯ ಆಶಯವನ್ನು ಆಕೃತಿಗೊಳಿಸುವ ಪ್ರಮುಖ ಸಾಧ್ಯತೆ. ಹೊಸಕಾಲದ ಹೊಸ ಅಗತ್ಯಗಳಿಗೆ ಸ್ಪಂದಿಸುವ ಇಂಥ ಬಹುಮುಖಿ ನೆಲೆಯ ನಾಟಕವೊಂದನ್ನು ಪ್ರಯೋಗಿಸುವದಕ್ಕೆ 'ಸಮುದಾಯ' ಹೆಮ್ಮೆ ಪಡುತ್ತಿದೆ.

ಬೆಂಗಳೂರಿನ ಸಮುದಾಯ ತಂಡದ ಬಗ್ಗೆ
ಸಾಮಾಜಿಕ ಚಳವಳಿ ಮತ್ತು ಹೋರಾಟಗಳಿಗೆ ಸಾಂಸ್ಕೃತಿಕ ಆಯಾಮದ ಬದಲಾದ ಮಾದರಿಗಳನ್ನು ಕಟ್ಟಿಕೊಟ್ಟ ಸಂಘಟನೆಯೇ ಸಮುದಾಯ. ತುರ್ತು ಪರಿಸ್ಥಿತಿಯ ಸಾಮಾಜಿಕ ತುರ್ತಿನಲ್ಲಿ ಜನಪರ ಹಾಗೂ ಪ್ರಜಾಪ್ರಭುತ್ವವಾದೀ ಚಿಂತಕರು ನಿರಂತರ ಚಳವಳಿಗಳ ಮೂಲಕ ಹೋರಾಟದ ಬೇರನ್ನು ಗಟ್ಟಿಗೊಳಿಸಿದ್ದಾರೆ.
1975ರಿಂದ ಸತತವಾಗಿ ಹಲವು ಪ್ರಮುಖ ನಾಟಕಗಳಾದ 'ತಾಯಿ', 'ಕುರಿ', 'ಸಂಕ್ರಾಂತಿ', 'ಮಹಾಚೈತ್ರ', 'ಕತ್ತಲೆದಾರಿದೂರ', 'ರುಡಾಲಿ', 'ಪಂಪಭಾರತ', 'ಜುಗಾರಿಕ್ರಾಸ್' ಹಾಗೂ ಇನ್ನು ಹತ್ತು ಹಲವು ವಿನೂತನ ನಾಟಕಗಳನ್ನು ಪ್ರಯೋಗಿಸಿರುವ ಸಮುದಾಯ ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ನಿರಂತರವಾದ ಜನ ಸಂಸ್ಕೃತಿ ಜಾಥಾಗಳು, ವಿಚಾರ ಸಂಕಿರಣಗಳು, ಬೀದಿನಾಟಕಗಳು, ರಂಗ ತರಬೇತಿ ಕಾರ್ಯಾಗಾರಗಳು ಹಾಗೂ ಇತರೆ ಸಾಮಾಜಿಕ ಚಿಂತನೆಗಳುಳ್ಳ ಚಟುವಟಿಕೆಗಳು ಮುಖ್ಯ ಹೋರಾಟವನ್ನು ಶಕ್ತಗೊಳಿಸಿವೆ.

ತುಘಲಕ್ ನಾಟಕ ತಂಡ ವಿವರ
ರಚನೆ: ಗಿರೀಶ ಕಾರ್ನಾಡ್
ಅಭಿನಯ: ‘ಸಮುದಾಯ' ಬೆಂಗಳೂರು
ವಿನ್ಯಾಸ ಮತ್ತು ನಿರ್ದೇಶನ: ಡಾ. ಸ್ಯಾಮ್ ಕುಟ್ಟಿ ಪಟ್ಟಂಕಾರಿ
ಸಹ ನಿರ್ದೇಶನ : ಡಾ. ಶ್ರೀಪಾದ ಭಟ್
ಸ್ಥಳ: ರಂಗಶಂಕರ
ದಿನಾಂಕ ಮತ್ತು ಸಮಯ: 29/04/2014; ಸಂಜೆ 7:30ಕ್ಕೆ, 30/04/2014; ಸಂಜೆ 7:30ಕ್ಕೆ
ಟಿಕೆಟ್ ದರ: ರೂ. 100/-
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 99001 82400
ವೆಬ್ ಸೈಟ್ : www.indianstage.in, bookmyshow.com
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications