ಮನ್ಸೂರ್ ವಿಡಿಯೋ ಬಗ್ಗೆ ತನಿಖಾಧಿಕಾರಿಯ ಮೊದಲ ಪ್ರತಿಕ್ರಿಯೆ
ಬೆಂಗಳೂರು, ಜೂನ್ 23: ಬಹುಕೋಟಿ ಐಎಂಎ ಹಗರಣದ ಮುಖ್ಯ ಆರೋಪಿ ಮನ್ಸೂರ್ ಖಾನ್ ಅವರು ದುಬೈನಿಂದ ಭಾನುವಾರದಂದು ವಿಡಿಯೋ ಬಿಡುಗಡೆ ಮಾಡಿ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾನೆ. ಈ ಬಗ್ಗೆ ತನಿಖಾಧಿಕಾರಿ ಡಿಸಿಪಿ ಗಿರೀಶ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಮನ್ಸೂರ್ ಖಾನ್ ಒಬ್ಬ ಆರೋಪಿ, ಆತನ ಮೇಲೆ ದೂರು ದಾಖಲಾಗಿದೆ, ಎಫ್ಐಆರ್ ಆಗಿದೆ, ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದೆ. ಆತ ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು.
ಆದರೆ, ಸಾಕ್ಷ್ಯಾಧಾರವಿಲ್ಲದೆ ಆತನ ಹೇಳಿಕೆ ನಂಬಲು ಆಗುವುದಿಲ್ಲ. ತನಿಖೆ ಪ್ರಗತಿಯಲ್ಲಿದೆ. ವಿಡಿಯೋ ಹಾಗೂ ಅದರಲ್ಲಿ ಹೇಳಿರುವ ಹೆಸರುಗಳ ಬಗ್ಗೆ ನಮ್ಮ ತಂಡ ಖಂಡಿತವಾಗಿ ಪರಿಶೀಲಿಸಲಿದೆ ಎಂದು ವಿಶೇಷ ತನಿಖಾ ತಂಡ(ಎಸ್ ಐಟಿ) ಡಿಸಿಪಿ ಎಸ್ ಗಿರೀಶ್ ಅವರು ಹೇಳಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಸೂಕ್ತ ಭದ್ರತೆ ಒದಗಿಸಿದರೆ ಭಾರತಕ್ಕೆ ಹಿಂತಿರುಗುವುದಾಗಿ ಮನ್ಸೂರ್ ಖಾನ್ ಹೇಳಿದ್ದಾನೆ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಖಾಸಗಿ ಮಾಧ್ಯಮದ ಪ್ರತಿನಿಧಿಗಳು ಗಿರೀಶ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಗಿರೀಶ್, ಒಳ್ಳೆಯದು, ಈ ಬಗ್ಗೆ ಅಲೋಕ್ ಕುಮಾರ್ ಅವರನ್ನು ಕೇಳಿ, ಮನ್ಸೂರ್ ಬಂಧಿಸಿ ವಿಚಾರಣೆ ನಡೆಸಲು ನಾವು ಸಿದ್ಧ ಎಂದಿದ್ದಾರೆ.
ರಾಸ್ ಅಲ್ ಖೈಮಾ ಎಂಬಲ್ಲಿರುವ ಮನ್ಸೂರ್ ಖಾನ್ ಇಂದು ಬಿಡುಗಡೆ ಮಾಡಿದ 18 ನಿಮಿಷಕ್ಕೂ ಹೆಚ್ಚು ಸಮಯದ ವಿಡಿಯೋದಲ್ಲಿ, ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಎಂಎಲ್ ಸಿ ಶರವಣ ಹಾಗೂ ಅವರ ಜ್ಯುವೆಲ್ಲರಿ ಅಸೋಸಿಯೇಷನ್, ಮಹಮದ್ ಉಬೇದುಲ್ಲಾ ಷರೀಫ್, ಟಾಡಾ ಕಾಯ್ದೆ ಅಡಿ ಜೈಲಿನಲ್ಲಿ ಇರುವ ಉಗ್ರಗಾಮಿ ಮುಖ್ತಾರ್ ಅಬ್ಬಾಸ್, ರಿಯಲ್ ಎಸ್ಟೇಟ್ ಉದ್ಯಮಿ ಫೈರೋಜ್ ಅಬ್ದುಲ್ಲಾ, ಪ್ರೆಸ್ಟೀಜ್ ಗ್ರೂಪ್ ನ ಇರ್ಫಾನ್ ಇವರೆಲ್ಲರಿಂದಾಗಿ ಐಎಂಎ ನಾಶವಾಯಿತು ಎಂದು ಆರೋಪಿಸಿದ್ದಾನೆ.












Click it and Unblock the Notifications