ಗೌರಿ ಹತ್ಯೆ ಹಿಂದೆ ಯಾರು? ಅಕ್ಕ ಏರಿಗೆ, ತಮ್ಮ ನೀರಿಗೆ!
ಗೌರಿ ಲಂಕೇಶ್ ಅವರಿಗೆ ಕೆಲ ದಿನಗಳ ಹಿಂದೆ ತಮ್ಮನ್ನು ಯಾರೋ ಫಾಲೋ ಮಾಡುತ್ತಿರುವುದರ ಬಗ್ಗೆ ಶಂಕೆ. ಈ ಅನುಮಾನವನ್ನು ಹಿಂದೆಯೇ ವ್ಯಕ್ತಪಡಿಸಿದ್ದ ಗೌರಿ ಲಂಕೇಶ್.
Recommended Video

ಬೆಂಗಳೂರು, ಸೆಪ್ಟೆಂಬರ್ 7: ಇತ್ತೀಚೆಗೆ ಹತ್ಯೆಗೊಳಗಾದ ಗೌರಿ ಲಂಕೇಶ್ ಅವರು ಒಂದು ತಿಂಗಳ ಹಿಂದೆ ತಮ್ಮ ತಾಯಿಗೆ ಯಾರೋ ಅಪರಿಚಿತನೊಬ್ಬ ತನ್ನ ಕಾರನ್ನು ಹಿಂಬಾಲಿಸುತ್ತಿರುವುದಾಗಿ ತಿಳಿಸಿದ್ದರೆಂದು ಅವರ ತಂಗಿ ಹಾಗೂ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನನ್ನ ಅಕ್ಕನಿಗೆ (ಗೌರಿ) ತಮ್ಮನ್ನು ಯಾರೋ ಅಪರಿಚಿತರು ಫಾಲೋ ಮಾಡುತ್ತಿದ್ದಾರೆಂಬ ಅನುಮಾನ ಬಂದಿತ್ತು. ಒಂದೊಮ್ಮೆ ಕಾರಿನಲ್ಲಿ ಅವರು ಪ್ರಯಾಣ ಮಾಡುವಾಗ ತನ್ನ ತಾಯಿಯ ಫೋನ್ ಕರೆಯನ್ನು ಸ್ವೀಕರಿಸಿ ಮಾತನಾಡಿದ್ದರು. ಆಗ, ಯಾರೋ ಅಪರಿಚಿತನೊಬ್ಬ ತನ್ನ ಕಾರನ್ನು ಹಿಂಬಾಲಿಸುತ್ತಿರುವುದಾಗಿ ಅವರು ತಿಳಿಸಿದ್ದರು'' ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಗೌರಿ ಲಂಕೇಶ್ ಅವರ ಸಹೋದರ, ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ''ನಮ್ಮ ಅಕ್ಕನಿಗೆ ಯಾರೂ ಶತ್ರುಗಳೇ ಇರಲಿಲ್ಲ. ಆದರೆ ಅವರ ಹತ್ಯೆಯಾಗಿರುವುದು ಆತಂಕ ಹುಟ್ಟಿಸಿದೆ. ರಾಜ್ಯ ಸರ್ಕಾರವು ಸದ್ಯಕ್ಕೆ ಈ ತನಿಖೆಯನ್ನು ಎಸ್ಐಟಿಗೆ ವಹಿಸಿದೆ. ನಾವೂ ಅದರ ತನಿಖಾ ವರದಿಗಾಗಿ ಕಾಯುತ್ತೇವೆ. ಅದರ ತನಿಖಾ ವರದಿಯು ನಮಗೆ ಸಮಾಧಾನ ತರದಿದ್ದರೆ ನಾವು ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸುತ್ತೇವೆ'' ಎಂದರು.
ಹತ್ಯೆ ಹಿಂದಿರುವ ವ್ಯಕ್ತಿಗಳ ಬಗ್ಗೆ ತಮಗಿರುವ ಅನುಮಾನಗಳ ಬಗ್ಗೆ ಹೇಳಿಕೊಂಡ ಇಂದ್ರಜಿತ್, ನಮಗೆ ಬಲಪಂಥೀಯರು ಹಾಗೂ ನಕ್ಸಲರ ಮೇಲೆ ಅನುಮಾನವಿದೆ. ಆದರೆ, ಸೂಕ್ತ ತನಿಖೆಯಿಂದಷ್ಟೇ ಸತ್ಯಾಂಶ ಹೊರಬೀಳಬೇಕಿದೆ ಎಂದರು.
ಎರಡು ವರ್ಷಗಳ ಹಿಂದೆ ಚಿಂತಕ ಎಂ.ಎಂ. ಕಲಬುರಗಿಯವರ ಹತ್ಯೆಯಾಗಿತ್ತು. ಆದರೆ, ಅವರ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ನನ್ನ ಅಕ್ಕನ ಪ್ರಕರಣವೂ ಆ ರೀತಿ ಆಗಬಾರದು ಎಂದು ಅವರು ಆಗ್ರಹಿಸಿದರು.












Click it and Unblock the Notifications