ಗೌರಿ ಹತ್ಯೆ : ಚಿಕ್ಕಮಗಳೂರಿನಲ್ಲಿ ಶಂಕಿತ ವ್ಯಕ್ತಿ ವಶಕ್ಕೆ
Recommended Video

ಬೆಂಗಳೂರು, ಸೆಪ್ಟೆಂಬರ್ 06 : ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಬೆಂಗಳೂರು ಪೊಲೀಸರು ಚುರುಕುಗೊಳಿಸಿದ್ದು, ಬುಧವಾರ ಓರ್ವ ಶಂಕಿತ ಹಂತಕನನ್ನು ಚಿಕ್ಕಮಗಳೂರಿನಲ್ಲಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಸಂಜೆ 8 ಗಂಟೆಯ ಹೊತ್ತಿನಲ್ಲಿ ಗೌರಿ ಲಂಕೇಶ್ ಅವರ ಮೇಲೆ ಗುಂಡಿನ ಸುರಿಮಳೆಗರೆದು ಹತ್ಯೆಗೈಯಲಾಗಿತ್ತು. ರಾಜರಾಜೇಶ್ವರಿ ನಗರದ ಅವರ ಮನೆ ಎದುರಿನಲ್ಲಿಯೇ ದುಷ್ಕರ್ಮಿಗಳು ಗೌರಿಯವರನ್ನು ಹತ್ಯೆ ಮಾಡಿದ್ದಾರೆ.

ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದ ಕೆಲವರನ್ನು ಪೊಲೀಸರು ಗುರುತುಹಾಕಿದ್ದು, ಅವರಲ್ಲೊಬ್ಬನಾದ ಚಿಕ್ಕಮಗಳೂರು ಮೂಲದ ಅಶೋಕ್ ಎಂಬುವವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ವಶಕ್ಕೆ ತೆಗೆದುಕೊಂಡಿರುವ ಅಶೋಕ್ ಗೂ ಹತ್ಯೆಯಾದ ಗೌರಿಗೂ ಸಂಪರ್ಕವೇನಾದರೂ ಇತ್ತಾ ಎಂಬ ಬಗ್ಗೆ ಪೊಲೀಸರು ವಿಚಾರಿಸುತ್ತಿದ್ದಾರೆ. ಒಂದು ಮಾಹಿತಿಯ ಪ್ರಕಾರ, ಶಂಕಿತ ಹಂತಕ ಗೌರಿ ಲಂಕೇಶ್ ಅವರನ್ನು ಬಸವನಗುಡಿಯಿಂದಲೇ ರಾಜರಾಜೇಶ್ವರಿ ನಗರದವರೆಗೆ ಹಿಂಬಾಲಿಸಿದ್ದ.

ಪೊಲೀಸರು ಗೌರಿ ಲಂಕೇಶ್ ಅವರ ಮನೆಯಲ್ಲಿದ್ದ ಸಿಸಿಟಿವಿ ಸೇರಿದಂತೆ ಒಟ್ಟು 33 ಸಿಸಿಟಿವಿಗಳ ಫುಟೇಜನ್ನು ಪರಿಶೀಲಿಸುತ್ತಿದ್ದು, ಶಂಕಿತ ವ್ಯಕ್ತಿಗಳನ್ನು ಕರೆದು ವಿಚಾರಿಸುತ್ತಿದ್ದಾರೆ. ಗೌರಿ ಅವರ ಮನೆಯಲ್ಲಿನ ಸಿಸಿಟಿವಿಗೆ ಪಾಸ್ವರ್ಡ್ ಇರುವುದರಿಂದ ಅದನ್ನು ಇನ್ನೂ ಪರಿಶೀಲಿಸಲಾಗಿಲ್ಲ.
ಜೊತೆಗೆ ಗೌರಿಯವರ ಮೊಬೈಲ್ ಗೆ ಬಂದ ಕರೆಗಳು, ಅವರು ಇತರರಿಗೆ ಮಾಡಿರುವ ಕರೆಗಳ ವಿವರಗಳನ್ನು ಕೂಡ ಸಂಗ್ರಹಿಸುತ್ತಿದ್ದಾರೆ. ಈ ನಡುವೆ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹಗಳು ಕೂಡ ಕೇಳಿಬರುತ್ತಿವೆ. ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಕೇರಳದಲ್ಲಿಯೂ ಜನರು ಈ ಭೀಕರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications