ಎಸ್ಐಟಿಯಿಂದ ಗೌರಿ ಲಂಕೇಶ್ ಹಂತಕರ ಪತ್ತೆ: ಸಿಎಂ
ಬೆಂಗಳೂರು, ನವೆಂಬರ್ 13 : ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹಂತಕರನ್ನು ಪತ್ತೆಹಚ್ಚಲು ವಿಶೇಷ ತನಿಖಾ ದಳವನ್ನು ಈಗಾಗಲೇ ರಚಿಸಲಾಗಿದ್ದು, ಹಂತಕರ ಪತ್ತೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಇಂದು (ನ.13) ತಿಳಿಸಿದರು.
ಸದನದಲ್ಲಿ ಬೆಳಿಗ್ಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿಲುವಳಿ ಬೆಂಬಲಿಸಿ ಮಾತನಾಡಿದ ಅವರು, ಗೌರಿ ಲಂಕೇಶ್ ಅವರ ಹತ್ಯೆ ನ್ಯಾಯಕ್ಕಾಗಿ ಹೋರಾಟ ಮಾಡಿದವರ ಮೇಲಿನ ಪ್ರಹಾರ. ಹಿರಿಯ ಚಿಂತಕ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆಗಳು ಸಮಾಜದಲ್ಲಿ ಭಯದ ವಾತಾವರಣ ಮೂಡಿಸಲು ಸಮಾಜ ಘಾತುಕ ಶಕ್ತಿಗಳು ನಡೆಸಿರುವ ಪ್ರಯತ್ನಗಳಾಗಿವೆ ಎಂದು ಹೇಳಿದರು.

ಗೌರಿ ಲಂಕೇಶ್ ಯಾವತ್ತೂ ಅನ್ಯಾಯದೊಂದಿಗೆ ಯಾವ ಕಾರಣಕ್ಕೂ ರಾಜಿಯಾದವರಲ್ಲ. ಸಾಮಾಜಿಕ ಸಮಸ್ಯೆಗಳ ವಿರುದ್ಧ ತಮ್ಮ ಪತ್ರಿಕೆ ಹಾಗೂ ಹೋರಾಟಗಳ ಮೂಲಕ ನಿರಂತರ ಧ್ವನಿ ಎತ್ತಿದವರು. ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ವೈಯಕ್ತಿಕವಾಗಿಯೂ ಅವರು ನನ್ನೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಹತ್ಯೆಯಾಗುವ ವಾರದ ಮುನ್ನ ನನ್ನ ಮನೆಗೆ ಭೇಟಿ ನೀಡಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದರು ಎಂದರು.












Click it and Unblock the Notifications