ಗೌರಿ ಹತ್ಯೆ ಪ್ರಕರಣ: ಸನಾತನ ಸಂಸ್ಥೆ ಕಚೇರಿ ಮೇಲೆ ಎಸ್ಐಟಿ ದಾಳಿ
ಬೆಂಗಳೂರು, ಸೆಪ್ಟೆಂಬರ್ 15: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಬೆಂಗಳೂರಿನಲ್ಲಿನರುವ ಸನಾತನ ಸಂಸ್ಥೆಯ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಈ ಪರಿಶೀಲನೆಯ ವೇಳೆ, ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ತನಿಖಾಧಿಕಾರಿಗಳು, ''ಗೌರಿ ಹತ್ಯೆ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಸನಾತನ ಸಂಸ್ಥೆಯಲ್ಲಿ ದಾಳಿ ನಡೆಸಲಾಗಿದೆ'' ಎಂದು ತಿಳಿಸಿದ್ದಾರೆ.

ಏನತ್ಮಧ್ಯೆ, ಪ್ರೊಫೆಸರ್ ಎಂ.ಎಂ. ಕಲಬುರಗಿ ಹಾಗೂ ಗೌರಿ ಲಂಕೇಶ್ ಅವರನ್ನು ಕೊಲ್ಲಲು ಉಪಯೋಗಿಸಿರುವ ಪಿಸ್ತೂಲು ಒಂದೇ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ಕಲಬುರಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ ಸಿಕ್ಕಿದ್ದ ಗುಂಡುಗಳು ಒಂದೇ ಎಂದು ಹೇಳಲಾಗಿದೆ.
ಮತ್ತೊಂದು ವರದಿಯ ಪ್ರಕಾರ, ಗೌರಿ ಲಂಕೇಶ್ ಅವರು ಹತ್ಯೆಗೂ ಮುನ್ನ ಕೊಲೆಗಾರನನ್ನು ನೋಡಿದ್ದರು ಎಂಬುದು ತನಿಖೆಯ ವೇಳೆ ಖಚಿತವಾಗಿದೆ. ಈವರೆಗೆ, ಗೌರಿ ಲಂಕೇಶ್ ಅವರು ಕಚೇರಿಯಿಂದ ತಮ್ಮ ಮನೆಗೆ ಬಂದಾಗ, ಮನೆಯ ಮುಂದಿನ ಗೇಟ್ ತೆರೆಯುವ ವೇಳೆ ಅಪರಿಚಿತನೊಬ್ಬ ಹಿಂಬದಿಯಿಂದ ಬಂದು ಗೌರಿ ಅವರನ್ನು ಹೊಡೆದುರುಳಿಸಿದ್ದ ಎಂದು ಹೇಳಲಾಗುತ್ತಿತ್ತು.
ಇನ್ನೂ ಒಂದು ವಾದದ ಪ್ರಕಾರ, ಆತ ಮೊದಲು ಗೌರಿ ಅವರನ್ನು ಮಾತನಾಡಿಸಿ ಆನಂತರ ಅವರನ್ನು ಹೊಡೆದುರುಳಿಸಿದ್ದ ಎಂದೂ ಹೇಳಲಾಗಿತ್ತು.
ಆದರೆ, ಗೌರಿಯನ್ನು ಹೊಡೆದುರುಳಿಸಿದ್ದ ಹಂತಕ ಮೊದಲು ಅವರನ್ನು ಮಾತನಾಡಿದ ಆನಂತರವೇ ಗುಂಡಿನ ದಾಳಿ ನಡೆಸಿದ್ದಾನೆಂದು ತನಿಖೆ ವೇಳೆ ತಿಳಿದುಬಂದಿರುವುದಾಗಿ ಹೇಳಲಾಗಿದೆ.












Click it and Unblock the Notifications