ಗೌರಿ ಹತ್ಯೆ ತನಿಖಾ ತಂಡದ ಅಧಿಕಾರಿಗಳ ಸಂಖ್ಯೆ ಹೆಚ್ಚಳ
ಬೆಂಗಳೂರು, ಸೆಪ್ಟೆಂಬರ್ 11: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಮತ್ತಷ್ಟು ಬಲಗೊಳಿಸಲಾಗಿದೆ.
ಗೌರಿ ಹತ್ಯೆಯಾದ ದಿನವೇ (ಸೆ. 5) ಇಪ್ಪತ್ತೊಂದು ಅಧಿಕಾರಿಗಳುಳ್ಳ ತನಿಖಾ ತಂಡವನ್ನು ರಾಜ್ಯ ಸರ್ಕಾರ ರಚಿಸಿತ್ತು. ಇದೀಗ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ತಂಡಕ್ಕೆ ಇನ್ನಷ್ಟು ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಹಾಗಾಗಿ, ಎಸ್ಐಟಿಯಲ್ಲಿನ ತನಿಖಾಧಿಕಾರಿಗಳ ಸಂಖ್ಯೆಯು 40ಕ್ಕೇರಿದೆ.

ಸೋಮವಾರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ನಾಲ್ವರು ಇನ್ಸ್ ಪೆಕ್ಟರ್ ಗಳು, 7 ಸಬ್ ಇನ್ಸ್ ಪೆಕ್ಟರ್ ಗಳು ಸೇರಿದಂತೆ 19 ಜನರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏತನ್ಮಧ್ಯೆ, ಸೋಮವಾರ (ಸೆ. 11) ತನ್ನ ತನಿಖೆ ಮುಂದುವರಿಸಿರುವ ಎಸ್ಐಟಿಯು, ಗೌರಿ ಲಂಕೇಶ್ ಮನೆಯ ಸುತ್ತಮುತ್ತ ಅವರ ಹತ್ಯೆಗೆ ಸಂಬಂಧಿಸಿದಂತೆ ಹಲವಾರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಮುಂದಾಗಿದೆ.












Click it and Unblock the Notifications