ಮೇ. 31ರ ನಂತರ ಕಸ ಸುರಿಯಲು ಜಾಗವಿಲ್ಲ!
ಬೆಂಗಳೂರು. ಮೇ.28: ಮೇ. 31ರ ನಂತರ ಮಂಡೂರು ಘನತ್ಯಾಜ್ಯ ವಿಲೇವಾರಿ ಕೇಂದ್ರದಲ್ಲಿ ಕಸ ಸ್ವೀಕಾರ ಬಂದ್ ಆಗಲಿದ್ದು, ಬಿಬಿಎಂಪಿ ಪರ್ಯಾಯ ಮಾರ್ಗ ಹುಡುಕುವುದು ಅನಿವಾರ್ಯವಾಗಲಿದೆ.
ಬಿಬಿಎಂಪಿ ಮತ್ತು ಗ್ರಾಮಸ್ಥರ ಜತೆ ಕಸ ವಿಲೇವಾರಿ ಸಂಬಂಧ 2013 ಜುಲೈ ತಿಂಗಳಿನಲ್ಲಿ ನಡೆದ ಒಪ್ಪಂದ ಮೇ.31ಕ್ಕೆ ಮುಕ್ತಾಯವಾಗಲಿದೆ. ಮಂಡೂರು ಗ್ರಾಮಸ್ಥರು ಜೂನ್ 1 ರಿಂದ ಲಾರಿಗಳನ್ನು ತಡೆದು ಘಟಕದ ದ್ವಾರದ ಬಳಿಯೇ ಬಿಡಾರ ಹೂಡಿ ಆಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಮತ್ತೆ ಸೃಷ್ಟಿಯಾಗುವ ಸಾಧ್ಯತೆಯಿದೆ.
ತ್ಯಾಜ್ಯದ ಗುಡ್ಡದಿಂದ ದುರ್ನಾತ ಹರಡದಂತೆ ತಡೆಯಲು ಬಿಬಿಎಂಪಿ ವತಿಯಿಂದ ಬಯೊ ಡಿಗ್ರೇಡಬಲ್ ದ್ರಾವಣ ಸುರಿಯುತ್ತಿದ್ದರೂ ದುರ್ನಾತ ಹೆಚ್ಚಾಗಿದೆ. ಇದರಿಂದಾಗಿ ಊಟ ಮಾಡುವುದೇ ಕಷ್ಟವಾಗತ್ತಿದ್ದು, ವಾಂತಿಭೇದಿ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.[ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆಗೆ ವಿದೇಶಿ ತಜ್ಞರು]

ಮಂಡೂರಿನಲ್ಲಿ ಜನ ಪ್ರತಿಭನಟನೆ ಮಾಡಿ ತ್ಯಾಜ್ಯ ವಿಲೇವರಿ ಸ್ಥಗಿತಗೊಂಡರೆ ಕಸವನ್ನು ನಗರದಲ್ಲೇ ಉಳಿಸಿಕೊಳ್ಳಬೇಕಾಗುತ್ತದೆ. ಕಸ ವಿಲೇವಾರಿಗೆ ಹೊಸದಾಗಿ ಜಾಗ ಹುಡುಕುವವರೆಗೂ ಗ್ರಾಮಸ್ಥರು ತಾಳ್ಮೆಯಿಂದ ಇರಬೇಕೆಂದು ಮೇಯರ್ ಸತ್ಯನಾರಯಣ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಮೂರು ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಟೆಂಡರ್:
ನಗರದ ತ್ಯಾಜ್ಯ ಸಮಸ್ಯೆಯನ್ನು ಪರಿಹಾರ ಮಾಡಲು ಮೂರು ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಟೆಂಡರ್ ಕರೆದಿದೆ. ಮಂಡೂರು (ನಿತ್ಯ10 ಸಾವಿರ ಟನ್) ದೊಡ್ಡ ಬಳ್ಳಾಪುರ ನಿತ್ಯ 5 ಸಾವಿರ ಟನ್) ಮಾಗಡಿ ರಸ್ತೆಯ ಕನ್ನಹಳ್ಳಿ(6 ಸಾವಿರ ಟನ್) ಪ್ರದೇಶಗಳಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಯಾಗಲಿದೆ.
ನಗರದಲ್ಲಿ ನಿತ್ಯ 4000 ಟನ್ ಕಸ ಉತ್ಪಾದನೆ:
ನಗರದಲ್ಲಿ ನಿತ್ಯ 4000 ಟನ್ ಕಸ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 3000ಟನ್ ಮಂಡೂರಿನ ತಾಣ ಸೇರುತ್ತದೆ. ಇನ್ನುಳಿದ 1000ಟನ್ ದೊಡ್ಡಬಳ್ಳಾಪುರ ಸಮೀಪದ ಟೆರ್ರಾಫಾರಂ ಮತ್ತು ಮಾವಳ್ಳಿಪುರದ ಸಂಸ್ಕರಣಾ ಘಟಕಗಳಿಗೆ ಹೋಗುತ್ತದೆ.












Click it and Unblock the Notifications