ಅನಾಥಾಶ್ರಮದ ಹೆಸರಿನಲ್ಲಿ ಹಳೇ ಬಟ್ಟೆ ಸಂಗ್ರಹಿಸಿ ಬಿಸಾಡ್ತಾರೆ ! ಏನಿದರ ಮರ್ಮ?
ಬೆಂಗಳೂರು, ಡಿಸೆಂಬರ್ 03: ಅನಾಥಾಶ್ರಮಕ್ಕೆ ಬಟ್ಟೆ ದಾನ ಮಾಡಿ ಎಂದು ಮನೆ ಬಾಗಿಲಿಗೆ ಬೆಂದು ಕೇಳುವ ಸಾಕಷ್ಟು ಮಂದಿಯನ್ನು ಕಣ್ಣಾರೆ ನೋಡಿರುತ್ತೀರಿ. ಅಯ್ಯೋ ಪಾಪ ಅನಾಥ ಮಕ್ಕಳು ಎಂದು ಬಟ್ಟೆ ಜತೆಗೆ ದುಡ್ಡು ಕೊಟ್ಟು ಕಳಿಸುವ ಮಂದಿ ಇದ್ದಾರೆ. ಹೀಗೆ ಜನರ ಮನೆ ಬಾಗಿಲಿಗೆ ಹೋಗಿ ಸಂಗ್ರಹಿಸುವ ಬಟ್ಟೆ ಏನಾಗುತ್ತದೆ ಗೊತ್ತಾ ? ಇದರ ಬಗ್ಗೆ ನಡೆದಿರುವ ಒಂದು ಘಟನೆ ತಿಳಿದು ಕೊಂಡರೆ ಸಾಕಷ್ಟು ಭಯವಾಗುತ್ತದೆ. ಅಂತದ್ದೊಂದು ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅನಾಥಾಶ್ರಮ ಹೆಸರಿನಲ್ಲಿ ಬ್ಯಾನರ್ ಕಟ್ಟಿಕೊಂಡಿರುವ ಆಟೋವೊಂದು ನಗರದಲ್ಲಿ ಸುತ್ತಾಡಿ ಬಟ್ಟೆಗಳನ್ನು ಸಂಗ್ರಹಿಸಿದೆ. ಮೂರ್ನಾಲ್ಕು ಮಂದಿ ಮನೆ ಮನೆಗೂ ಹೋಗಿ ಸಂಗ್ರಹಿಸಿದ ಬಟ್ಟೆಗಳನ್ನು ಅನಾಥಾಶ್ರಮಕ್ಕೆ ತೆಗೆದುಕೊಂಡು ಹೋಗಿಲ್ಲ. ಬದಲಿಗೆ ಆ ಬಟ್ಟೆಗಳನ್ನು ನಾಗರಭಾವಿಯ ಎನ್ಜಿಎಫ್ ಬಡಾವಣೆಯ ನಿರ್ಜನ ಪ್ರದೇಶದ ಖಾಲಿ ನಿವೇಶನದಲ್ಲಿ ಬಿಸಾಕುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನವೆಂಬರ್ 25 ರಂದು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ಬಟ್ಟೆ ಬಿಸಾಡಿ ಹೋಗಿದ್ದಾರೆ. ಅದೇ ಆಟೋ ಮತ್ತೆ ನವೆಂಬರ್ 30 ರಂದು ಮನೆಗಳಲ್ಲಿ ಸಂಗ್ರಹಿಸಿದ ಬಟ್ಟೆ ಮೂಟೆಗಳಲ್ಲಿ ತಂದುಅದೇ ಜಾಗದಲ್ಲಿ ಬಿಸಾಡಿ ಹೋಗಿರುವ ದೃಶ್ಯ ಸಿಸಿ ಸೆರೆಯಾಗಿದೆ. ಹಾಗಾದರೆ ಅನಾಥಾಶ್ರಮ ಹೆಸರಿನಲ್ಲಿ ಬಟ್ಟೆ ಸಂಗ್ರಹಿಸಿ ಬಿಸಾಡುವ ಈ ಗ್ಯಾಂಗ್ ನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

ಇದನ್ನು ಗಮನಿಸಿರುವ ಶ್ರದ್ಧಾ ಎಂಬುವರು, ಅನಾಥಾಶ್ರಮದವರು ನಮ್ಮ ಮನೆಗಳಿಗೆ ಬಂದು ಬಟ್ಟೆ ಸಂಗ್ರಹಿಸುತ್ತಿದ್ದಾರೆ. ಮಕ್ಕಳಿಗೆ ಒಳ್ಳೆಯದಾಗಲಿ ಎಂದು ನಾವು ಕೊಟ್ಟು ಕಳಿಸುತ್ತಿದ್ದೇವೆ. ಆದರೆ ಅವನ್ನು ತೆಗೆದುಕೊಂಡು ಹೋಗುವರು ಖಾಲಿ ಜಾಗದಲ್ಲಿ ಹಾಕಿ ಹೋಗುತ್ತಿದ್ದಾರೆ. ಅವರ ಉದ್ದೇಶ ನಮಗೆ ಅರ್ಥ ವಾಗುತ್ತಿಲ್ಲ. ಸುತ್ತಮುತ್ತಲಿನ ಜನ ಮಾತಾಡಿಕೊಂಡಿದ್ದೇವೆ. ಎಲ್ಲರನ್ನೂ ಸೇರಿಸಿ ಇದರ ಉದ್ದೇಶ ಏನು ಅಂತ ಪತ್ತೆ ಮಾಡಲು ಮುಂದಾಗಿದ್ದೇವೆ. ಅಲ್ಲಿ ಕಸ ಬಿದ್ದು ನಾನಾ ಕಾಯಿಲೆಗಳು ಬರುತ್ತಿವೆ. ಸಹಾಯ ಕೇಳಿ ಬಂದವರು ಯಾಕೆ ಇಲ್ಲಿ ಬಟ್ಟೆ ಬಿಸಾಡಿ ಹೋಗುತ್ತಿರುವ ಮರ್ಮ ಗೊತ್ತಿಲ್ಲ ಎಂದು ಸಂಶಯ ವ್ಯಕ್ತಪಡಿಸುತ್ತಾರೆ.

ದುಡ್ಡಿಗಾಗಿ ಮಾತ್ರವೇ ? : ಸ್ವಯಂ ಸೇವಾ ಸಂಸ್ಥೆ ಹೆಸರಿನಲ್ಲಿ ಮನೆಗಳಲ್ಲಿ ಹಳೇ ಬಟ್ಟಿಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಸಂಗ್ರಹಿಸುವುದು ಸರ್ವೆ ಸಾಮಾನ್ಯ. ಅದರೆ ನಿಜವಾಗಿಯೂ ಕೆಲವು ಸಂಘಟನೆಗಳು ಬಟ್ಟೆಗಳನ್ನು ಅನಾಥಾಶ್ರಮಗಳಿಗೆ ನೀಡುತ್ತಿರಬಹುದು. ಆದರೆ ಇಲ್ಲಿ ಸಂಗ್ರಹಿಸಿದ ಬಟ್ಟೆಗಳನ್ನು ಬಿಸಾಡಿ ಹೋಗುವರ ಉದ್ದೇಶ ಗೊತ್ತಿಲ್ಲ. ಯಾರೂ ಇಲ್ಲದ ಮನೆಗಳನ್ನು ಪತ್ತೆ ಮಾಡುವ ಸಲುವಾಗಿ ಕ್ರಿಮಿನಲ್ ಗ್ಯಾಂಗ್ ಗಳು ಇಂತಹ ಕಾರ್ಯದಲ್ಲಿ ತೊಡಗಿವೆಯೇ ಎಂಬ ಅನುಮಾನ ಮೂಡಿಸುತ್ತದೆ. ಬೆಂಗಳೂರಿನಲ್ಲಿ ದಂಡು ಪಾಳ್ಯದ ಗ್ಯಾಂಗ್ ಸದಸ್ಯರು ಇದೇ ಒಂಟಿ ಮನೆಗಳನ್ನು ಗುರುತಿಸಲು ನೀರು ಕೇಳುವ ನೆಪದಲ್ಲಿ ಹೋಗುತ್ತಿದ್ದರು. ಇದರ ಜತೆಗೆ ತಮಿಳುನಾಡಿನ ಕಳ್ಳ ಗ್ಯಾಂಗ್ ಕೂಡ ಮನೆಗಳ ಮುಂದೆ ದಿನ ಪತ್ರಿಕೆ ಬಿದ್ದಿರುವುದನ್ನು ಗಮನಿಸಿ ಕಳ್ಳತನ ಮಾಡುತ್ತಿದ್ದ ಎಷ್ಟೋ ಪ್ರಕರಣಗಳು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದವು. ಅದೇ ರೀತಿ ಅನಾಥಾಶ್ರಮಕ್ಕೆ ಬಟ್ಟೆ ಸಂಗ್ರಹಿಸುವ ಸೋಗಿನಲ್ಲಿ ಮನೆಗಳಿಗೆ ಬಂದು ಬಟ್ಟೆ ಸಂಗ್ರಹಿಸಿ ಅವನ್ನು ಸಮೀಪದಲ್ಲಿ ಬಿಸಾಡಿ ಹೋಗುತ್ತಿರುವುದು ನೋಡಿದರೆ ಇಂತಹ ಅನುಮಾನ ಹುಟ್ಟುತ್ತದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಎಚ್ಚರಿಕೆ ವಹಿಸುವುದು ಸೂಕ್ತ.












Click it and Unblock the Notifications