ಗಣೇಶ ಚತುರ್ಥಿ : ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು
ಬೆಂಗಳೂರು, ಆಗಸ್ಟ್ 29 : ಗಣೇಶ ಚತುರ್ಥಿಗೆ ಉಂಟಾಗುವ ಜನರ ದಟ್ಟಣೆ ತಪ್ಪಿಸಲು ನೈಋತ್ಯ ರೈಲ್ವೆ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು ಓಡಿಸಲಿದೆ. ಬೆಂಗಳೂರು-ಬೆಳಗಾವಿ, ಮೈಸೂರು-ವಿಜಯಪುರ ನಡುವೆಯೂ ವಿಶೇಷ ರೈಲು ಸಂಚಾರ ನಡೆಸಲಿದೆ.
ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಸೂಚನೆಯಂತೆ ವಿಶೇಷ ರೈಲನ್ನು ಓಡಿಸಲಾಗುತ್ತಿದೆ. ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಿಂದ ರೈಲು ಕಲಬುರಗಿಗೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಆಗಸ್ಟ್ 30ರಂದು ಯಲಹಂಕ ರೈಲು ನಿಲ್ದಾಣದಿಂದ ಸಂಜೆ 5 ಗಂಟೆಗೆ ವಿಶೇಷ ರೈಲು ಹೊರಡಲಿದೆ. ಆಗಸ್ಟ್ 31ರ ಶನಿವಾರ ಬೆಳಗ್ಗೆ 4.20ಕ್ಕೆ ಕಲಬುರಗಿಗೆ ತಲುಪಲಿದೆ. ಸೆಪ್ಟೆಂಬರ್ 2ರ ಸೋಮವಾರ ರಾತ್ರಿ 8.30ಕ್ಕೆ ಕಲಬುರಗಿಯಿಂದ ಹೊರಡುವ ರೈಲು ಮಂಗಳವಾರ ಬೆಳಗ್ಗೆ 7.25ಕ್ಕೆ ಯಲಹಂಕಕ್ಕೆ ತಲುಪಲಿದೆ.

ಯಲಹಂಕದಿಂದ ಹೊರಡುವ ರೈಲು ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯಂ ರೋಡ್, ರಾಯಚೂರು, ಯಾದಗೀರ, ವಾಡಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ವಿಶೇಷ ರೈಲಿನಲ್ಲಿ ಎರಡು ತೃತೀಯ ಎಸಿ, 12 ಸ್ಲೀಪರ್ ಮತ್ತು 2 ಸಾಮಾನ್ಯ/ಲಗೇಜ್ ಸೇರಿ ಒಟ್ಟು 16 ಕೋಚ್ಗಳು ಇರಲಿವೆ. ಸಾರ್ವಜನಿಕರು ಈ ರೈಲಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಈಗಾಗಲೇ ನೈಋತ್ಯ ರೈಲ್ವೆ ಬೆಂಗಳೂರು-ಬೆಳಗಾವಿ, ಮೈಸೂರು-ವಿಜಯಪುರ ನಡುವೆ ವಿಶೇಷ ರೈಲನ್ನು ಗಣೇಶ ಚತುರ್ಥಿ ಅಂಗವಾಗಿ ಓಡಿಸುತ್ತಿದೆ.












Click it and Unblock the Notifications