ಬೆಂಗಳೂರು ರಸ್ತೆ ಗುಂಡಿ ಫೋಟೋ ಶೂಟ್ ವೈರಲ್
ಬೆಂಗಳೂರು, ನವೆಂಬರ್ 18 : ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಯನ್ನು ಮುಚ್ಚುತ್ತೇವೆ ಎಂದು ಬಿಬಿಎಂಪಿ ಭರವಸೆಯನ್ನು ನೀಡುತ್ತಿದೆ. ಆದರೆ, ಒಂದಲ್ಲ ಒಂದು ಏರಿಯಾದಲ್ಲಿ ರಸ್ತೆ ಗುಂಡಿ ಬಾಯಿ ತೆರೆದುಕೊಂಡು ಅಪಘಾತಕ್ಕೆ ಆಹ್ವಾನ ನೀಡುತ್ತವೆ.
ಬೆಳ್ಳಂದೂರು ಸಮೀಪದ ಕಸವನಹಳ್ಳಿ ಮತ್ತು ಸುತ್ತಮುತ್ತಲಿನ ಬಡಾವಣೆ ಜನರು ಗುಂಡಿ ತುಂಬಿದ ರಸ್ತೆಗಳಿಂದಾಗಿ ಸಂಕಷ್ಟ ಅನುಭಿಸುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ದೆಹಲಿಯ ಸಂಸತ್ ಭವನದ ತನಕ ರಸ್ತೆ ಗುಂಡಿ ಮುಚ್ಚಿ ಎಂದು ಮನವಿ ಸಲ್ಲಿಸಿದ್ದಾರೆ.
ಗುಂಡಿ ಬಿದ್ದ ರಸ್ತೆಯಿಂದಾಗಿ ವಾಹನ ಸವಾರರು ಬಿದ್ದು ಗಾಯಗೊಂಡರು. ಇದರಿಂದಾಗಿ ಆಕ್ರೋಶಗೊಂಡು The Bellandur Development Forum ಗುಂಡಿ ಬಿದ್ದ ರಸ್ತೆಗಳಲ್ಲಿಯೇ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕಜಾಲತಾಣದಲ್ಲಿ ಹಾಕಿದ್ದಾರೆ.

ಬೆಳ್ಳಂದೂರು ಸಮೀಪದ ಕಸವನಹಳ್ಳಿ ಸುತ್ತಮುತ್ತಲಿನ ಕೆಪಿಸಿಎಲ್ ಲೇಔಟ್, ತುಳಸಿ ಲೇಔಟ್ ಸೇರಿದಂತೆ ಹಲವು ಬಡಾವಣೆಗಳಿವೆ. ಈ ಏರಿಯಾದ ಜನರು ರಸ್ತೆ ಗುಂಡಿಗಳ ಕಾಟದಿಂದ ಬೇಸತ್ತು ಪ್ರಧಾನಿ ಕಚೇರಿಗೂ ಪತ್ರ ಬರೆದರು. ಸ್ಥಳೀಯ ಆಡಳಿತದ ಜೊತೆ ಸಂಪರ್ಕದಲ್ಲಿರಿ ಎಂಬ ಪ್ರತಿಕ್ರಿಯೆ ಬಂತು.
ಈ ಬಡಾವಣೆ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದು ಜನರ ಆರೋಪವಾಗಿದೆ. ಬಿಬಿಎಂಪಿಯೂ ಇತ್ತ ಗಮನಹರಿಸಿಲ್ಲ. ಆದ್ದರಿಂದ ಪ್ರಧಾನಿ ಕಚೇರಿಗೆ ದೂರು ನೀಡಲಾಯಿತು ಎನ್ನುತ್ತಾರೆ ಸ್ಥಳೀಯರು.

ಮೊದಲು ಒಳಚರಂಡಿ ಪೈಪುಗಳನ್ನು ಬದಲಾಯಿಸಲು ಜಲಮಂಡಳಿಯವರು ಪೈಪ್ಗಳನ್ನು ಅಗೆದರು. ಆಗ ಗ್ಯಾಸ್ ಪೈಪ್ ಲೈನ್ ಸಿಕ್ಕ ಕಾರಣ ಅದನ್ನು ಸ್ಥಳಾಂತರ ಮಾಡಬೇಕು ಎಂದು ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು.
ಇದರಿಂದಾಗಿ 150 ಮೀಟರ್ ಉದ್ದದ ಕಾಮಗಾರಿ ಮುಗಿಸಲು ಜಲಮಂಡಳಿ 1 ತಿಂಗಳು ತೆಗೆದುಕೊಂಡಿತು. ಜಲಮಂಡಳಿ ಕಾಮಗಾರಿ ಮುಗಿಯುತ್ತಿದ್ದಂತೆ ಒಎಫ್ಸಿ ಕೇಬಲ್ಗಳು ರಸ್ತೆಯಲ್ಲಿ ಕಾಣಲು ಆರಂಭವಾದವು. ಆಗಸ್ಟ್ 20ರಂದು ಜನರು ರಸ್ತೆ ರಿಪೇರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಆದರೂ ಸಹ ರಸ್ತೆ ಗುಂಡಿ ಮುಕ್ತವಾಗಲಿಲ್ಲ, ಕಿತ್ತುಹೋದ ರಸ್ತೆಗಳು ಡಾಂಬರು ಕಾಣಲಿಲ್ಲ. ಇದರಿಂದಾಗಿ ಫನ್ನಿ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಣದಲ್ಲಿ ಹಾಕಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿವೆ.
ಬೆಂಗಳೂರು ನಗರಾಭಿವೃದ್ಧಿ ಖಾತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೈಯಲ್ಲಿಯೇ ಇದೆ. ಬಿಬಿಎಂಪಿ ನವೆಂಬರ್ 10ರೊಳಗೆ ಎಲ್ಲಾ ಗುಂಡಿ ಮುಚ್ಚುತ್ತೇವೆ ಎಂದು ಗಡುವು ನೀಡಿತ್ತು. ಗುಡುವು ಮುಗಿದು 8 ದಿನ ಕಳೆದಿದೆ. ನಗರದ ರಸ್ತೆ ಯಾವಾಗ ಗುಂಡಿ ಮುಕ್ತವಾಗಲಿದೆ? ಎಂದು ಪಾಲಿಕೆಯೇ ಹೇಳಬೇಕು.












Click it and Unblock the Notifications