ಇಂಧನ ಕೊರತೆ: ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ- ಅಧಿಕಾರಿಗಳ ಸ್ಪಷ್ಟನೆ
ಬೆಂಗಳೂರು, ಜೂ.28: ತೈಲ ಕಂಪನಿಗಳಿಂದ ಬೃಹತ್ ಇಂಧನ ಪೂರೈಕೆ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಿಂತಿಸುತ್ತಿರುವಂತೆಯೇ, ಬಸ್ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಪ್ರಯಾಣಿಕರಿಗೆ ಭರವಸೆ ನೀಡಿದೆ.
ಇಂಧನ ಕೊರತೆಯ ಕುರಿತು ಪ್ರಯಾಣಿಕರು ಮತ್ತು ನಾಗರಿಕರ ಆತಂಕವನ್ನು ಪರಿಹರಿಸಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ, "ಇಂಧನಕ್ಕೆ ಕೊರತೆಯಾಗಿರುವುದು ನಿಜ, ಆದರೆ ಬಿಎಂಟಿಸಿ ಓಡಾಟದಲ್ಲಿ ಯಾವುದೇ ವ್ಯತಾಸ ಆಗುವುದಿಲ್ಲ, ಎಂದಿನಂತೆ ಬಸ್ಗಳು ಸಂಚರಿಸಲಿವೆ," ಎಂದು ಹೇಳಿದ್ದಾರೆ.
ಸೋಮವಾರ ಪೆಟ್ರೋಲಿಯಂ ಸಚಿವಾಲಯಕ್ಕೆ ಸಮಸ್ಯೆ ಬಗೆಹರಿಸುವಂತೆ ಪ್ರಸ್ತಾಪಿಸಿದ್ದಾರೆ ಮತ್ತು ಸಾರ್ವಜನಿಕ ಸಾರಿಗೆ ಸಂಸ್ಥೆಗೆ ಬೃಹತ್ ಇಂಧನ ಪೂರೈಕೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಐಒಸಿ, ಬಿಪಿಸಿಎಲ್, ಎಚ್ಪಿಸಿಎಲ್ ಮತ್ತು ಇತರ ಕಂಪನಿಗಳಿಂದ ಬಿಎಂಟಿಸಿ ಅಪಾರ ಪ್ರಮಾಣದ ಇಂಧನವನ್ನು ಪಡೆಯುತ್ತದೆ. ಚಿಲ್ಲರೆ ಮಾರಾಟ ದರ 89 ರುಪಾಯಿ ಇದ್ದರೆ ಸಗಟು ಮಾರಾಟ ದರ 119 ರುಪಾಯಿ ಇದೆ, ಬೃಹತ್ ಮತ್ತು ಚಿಲ್ಲರೆ ಪೂರೈಕೆಯ ನಡುವಿನ ವ್ಯತ್ಯಾಸವು 30 ರುಪಾಯಿ ಆಗಿದೆ ಮತ್ತು ಚಿಲ್ಲರೆ ಮಾರಾಟದಲ್ಲಿ ಡೀಸೆಲ್ ದರ ಅಗ್ಗವಾಗಿದೆ," ಎಂದರು.
ಕಳೆದ 4-5 ದಿನಗಳಿಂದ ಸಗಟು ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಇಂಧನ ತುಂಬಿಸಲು ಚಿಲ್ಲರೆ ಘಟಕಗಳಿಗೆ ತೆರಳುವಂತೆ ಚಾಲಕರಿಗೆ ಹೇಳಲಾಗಿದೆ. ಆದರೆ ಇದು ಸುಗಮ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ. ಪೆಟ್ರೋಲ್ ಬಂಕ್ಗಳಲ್ಲಿ ದೀರ್ಘ ಸರತಿಗೆ ಕಾರಣವಾಗುತ್ತದೆ. ಆದ್ದರಿಂದ ಈ ಬಗ್ಗೆ ಆದಷ್ಟು ಬೇಗ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಡಿಪೋಗಳಲ್ಲಿ ಸುಮಾರು 4-5 ದಿನಗಳವರೆಗೆ ಸ್ಟಾಕ್ ಅನ್ನು ಹೊಂದಿದ್ದೇವೆ ಮತ್ತು ಸೇವೆಗಳು ವೇಳಾಪಟ್ಟಿಯ ಪ್ರಕಾರ ಚಾಲನೆಯಲ್ಲಿವೆ ಎಂದು ಅವರು ಹೇಳಿದರು. ಆದರೆ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಈ ವಿಚಾರವನ್ನು ರಾಜ್ಯ ಸರ್ಕಾರದ ಬಳಿಯೂ ಪ್ರಸ್ತಾಪಿಸಲಾಗಿದೆ. ಆರ್ಥಿಕ ನಷ್ಟ ಮತ್ತು ವೇತನದ ಕ್ಕಾಗಿ ಸರ್ಕಾರ ಬಿಎಂಟಿಸಿ ನಿಗಮಕ್ಕೆ 50 ಕೋಟಿ ರು. ನೀಡಿದೆ ಎಂದು ತಿಳಿಸಿದರು.

ಯಾಕೆ ಸಮಸ್ಯೆ?
ಡೀಸೆಲ್ ಸಗಟು ಮಾರಾಟ 119 ರುಪಾಯಿಗಳಿದ್ದು ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ ದರ ಲೀಟರ್ ಗೆ 89 ರುಪಾಯಿ ಇದೆ. ಸಗಟು ದರ ಚಿಲ್ಲರೆ ದರದ ನಡುವೆ 30 ರುಪಾಯಿ ವ್ಯತ್ಯಾಸ ಇದ್ದದ್ದು ಬಿಎಂಟಿಸಿಗೆ ಹೊರೆಯಾಗಿತ್ತು. ಇದನ್ನು ತಪ್ಪಿಸಲು ಬಂಕ್ಗಳಿಂದ ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್ ಖರೀದಿಗೆ ಮುಂದಾಗಿತ್ತು. ಇದಕ್ಕೆ ಪೂರಕವಾಗಿ ಬಂಕ್ ಮಾಲಿಕರು ಬಿಎಂಟಿಸಿ ಡಿಪೋಗೆ ಇಂಧನ ಪೂರೈಸುತ್ತಿದ್ದರು.
ಇದೀಗ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಎಚ್ಪಿಸಿಎಲ್) ಚಿಲ್ಲರೆ ಬೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಖರೀದಿ ಮಾಡುವವರಿಗೆ ಪೂರೈಕೆ ಮಾಡದಂತೆ ನಿರ್ಬಂಧ ವಿಧಿಸಿದೆ. ಇದರಿಂದ ಮುಂದೆ ಎಲ್ಲ ಬಸ್ಗಳು ಬಂಕ್ಗಳಲ್ಲಿಯೇ ಡೀಸೆಲ್ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.











Click it and Unblock the Notifications