ತೈಲ ಪೂರೈಕೆ ಟ್ಯಾಂಕರ್ ಚಾಲಕರ ಪ್ರತಿಭಟನೆ: ದೇವನಗುಂದಿ ರಸ್ತೆ ದುರಸ್ತಿ ಆರಂಭ
ಬೆಂಗಳೂರು, ಜನವರಿ30 : ದೇವನಗುಂದಿ ತೈಲ ಹಾಗೂ ಅಡುಗೆ ಅನಿಲ ದಾಸ್ತಾನು ಘಟಕದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಸುವ ಮಾರ್ಗದ ದುರಸ್ತಿ ಕಾರ್ಯ ಆರಂಭವಾಗಿದೆ.
ಬೆಂಗಳೂರು ಹೊರವಲಯದಲ್ಲಿರುವ ಹೊಸಕೋಟೆ ಬಳಿ ರಸ್ತೆ ಗುಂಡಿಗಳಿಂದ ಬೇಸತ್ತಿರುವ ಪೆಟ್ರೋಲ್ ಪೂರೈಕೆ ಚಾಲಕರು ಸುಮಾರು 2 ಸಾವಿರ ಪೆಟ್ರೋಲ್ ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸ ಕೋಟೆಯ ದೇವನಗುಂ ಐಓಸಿ ಕೇಂದ್ರದ ಬಳಿ ಲಾರಿಗಳನ್ನು ನಿಲ್ಲಿಸಿ ಪ್ರತಿಭಟಿಸಿದ್ದರು .
ಲಾರಿಗಳಲ್ಲಿ ಪೆಟ್ರೋಲ್ ಗಳನ್ನು ತುಂಬಿಸಿಕೊಂಡು ಈ ರಸ್ತೆಗಳಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ, 10 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ. ಮಾಲೂರು ಕ್ರಾಸ್-ದೇವನಗುಂಡಿ ಐಓಸಿ ಟರ್ಮಿನಲ್ ವರೆಗೂ ರಸ್ತೆ ಗುಂಡಿಗಳಿಂದಾಗಿ ತಿಂಗಳಿನಿಂದ ಪದೇ ಪದೇ ಲಾರಿ ಅಪಘಾತಗಳು ಹೆಚ್ಚಾಗುತ್ತಿದೆ ಇದರಿಂದ ಬೇಸತ್ತ ಪೆಟ್ರೋಲ್ ಸಾಗಾಣಿಕೆ ವಾಹನಗಳ ಚಾಲಕರ ಸಂಘದ ಸದಸ್ಯರು ದೂರಿದ್ದರು.

ಜೆಸಿಬಿ ಯಂತ್ರ ಹಾಗೂ ಕೆಲಸಗಾರರ ಸಮೇತ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದರು. 8 ಕಿ.ಮೀವರೆಗಿರುವ ರಸ್ತೆಯ ಹಲವೆಡೆ ತಗ್ಗುಗಳು ಬಿದ್ದಿವೆ. ಆ ಸ್ಥಳಕ್ಕೆ ಜಲ್ಲಿ ಕಲ್ಲು ಹಾಕಿ ಸಮತಟ್ಟು ಮಾಡಲಾಗುತ್ತಿದೆ.
ರಸ್ತೆಯ ಅಕ್ಕ-ಪಕ್ಕದಲ್ಲಿ ಜಮೀನುಗಳಿವೆ. ಬೆಳೆಗೆ ಹರಿಸುವ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅದೇ ಕಾರಣಕ್ಕೆ ರಸ್ತೆಯಲ್ಲಿ ತಗ್ಗುಗಳು ಬೀಳುತ್ತಿವೆ. ನೀರು ಹರಿದು ಬರುವ ಜಾಗದಲ್ಲಿ ಮಣ್ಣು ಸುರಿಯುತ್ತಿದ್ದೇವೆ. ಅದರಿಂದ ಹರಿಯುವಿಕೆ ಬಂದ್ ಆಗಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಟ್ಯಾಂಕರ್ ಗಳ ಓಡಾಟ ಹೆಚ್ಚಿರುವುದರಿಂದ, ರಸ್ತೆಯು ಪದೇ ಪದೇ ಹದಗೆಡುತ್ತಿದೆ. ಮೂರು ವರ್ಷದಲ್ಲಿ ಹಲವು ಬಾರಿ ದುರಸ್ತಿ ಕಾಮಗಾರಿ ಕೈಗೊಂಡಿದ್ದೇವೆ. ಪುನಃ ಸಮಸ್ಯೆ ಉದ್ಭವಿಸುತ್ತಿದೆ. ಶಾಶ್ವತ ಪರಿಹಾರಕ್ಕೆ ಯೋಚಿಸುತ್ತಿದ್ದೇವೆ ಎಂದರು.
ಡಾಂಬರೀಕರಣ ಮಾಡಲಿ: ಕೇವಲ ಜಲ್ಲಿ ಕಲ್ಲು ಹಾಕಿ, ರಸ್ತೆ ಸಮತಟ್ಟು ಮಾಡಿದರೆ ಸಾಲದು. ಡಾಂಬರೀಕರಣ ಮಾಡಿ ಟ್ಯಾಂಕರ್ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು. ಆ ರೀತಿಯಾದರೆ ಮಾತ್ರ ಚಾಲಕರು ನೆಮ್ಮದಿಯಿಂದ ಟ್ಯಾಂಕರ್ ಓಡಿಸಲಿದ್ದಾರೆ ಎಂದು ತೈಲ ಪೂರೈಕೆ ಟ್ಯಾಂಕರ್ ಗಳ ಚಾಲಕರ ಸಂಘದ ಅಧ್ಯಕ್ಷ ಶ್ರೀರಾಮ್ ಹೇಳಿದರು.












Click it and Unblock the Notifications