ಆಂಬಿಡೆಂಟ್ ಮಾದರಿಯಲ್ಲೇ ಅಜ್ಮೀರಾ ಚಿಟ್ಫಂಡ್ನಿಂದ ವಂಚನೆ: ಪ್ರತಿಭಟನೆ
ಬೆಂಗಳೂರು, ನವೆಂಬರ್ 17: ಆಂಬಿಡೆಂಟ್ ವಂಚನೆ ಪ್ರಕರಣ ಹಸಿಯಾಗಿರುವಂತೆ ಬೆಂಗಳೂರಿನಲ್ಲೇ ಅದೇ ಮಾದರಿಯ ಮತ್ತೊಂದು ವಂಚನೆ ಬೆಳಕಿಗೆ ಬಂದಿದೆ.
ಅಜ್ಮೀರಾ ಎಂಬ ಚಿಟ್ಫಂಡ್ ಸಂಸ್ಥೆಯು 500 ಕೋಟಿ ರೂಪಾಯಿ ವಂಚಿಸಿದೆ ಎಂದು ಆರೋಪಿಸಿ ಸಂಸ್ಥೆಯ ಗ್ರಾಹಕರು ಇಂದು ಅಜ್ಮೀರಾ ಸಂಸ್ಥೆ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.
ಅಜ್ಮೀರಾ ಕಂಪೆನಿಯು ಸುಮಾರು ಮೂರು ಸಾವಿರ ಜನಕ್ಕೆ 500 ಕೋಟಿಗೂ ಹೆಚ್ಚು ಹಣ ವಂಚಿಸಿದೆ ಎಂದು ಆರೋಪಿಸಲಾಗಿದೆ. ಇದು ಸಹ ಆಂಬಿಡೆಂಟ್ ಸಂಸ್ಥೆಯಂತೆಯೇ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಹೆಚ್ಚು ಬಡ್ಡಿ ನೀಡುವ ಆಸೆ ತೋರಿಸಿತ್ತು.
ಅಜ್ಮೀರಾ ಸಂಸ್ಥೆಯು ಗ್ರಾಹಕರಿಗೆ ಮೋಸ ಮಾಡಿದೆ ಎಂದು ಮಾಲೀಕರಾದ ತಬ್ರೇಜ್ ಪಾಷಾ ಮತ್ತು ಅಬ್ದುಲ್ ದಸ್ತಗಿರ್ ಎಂಬುವರ ವಿರುದ್ಧ ಏಪ್ರಿಲ್ನಲ್ಲಿಯೇ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ದಾಖಲಾದ ನಂತರ ಜನರೇ ತಬ್ರೇಜ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು, ಮತ್ತೊಬ್ಬ ಮಾಲೀಕ ಅಬ್ದುಲ್ ಸಹ ಪೊಲೀಸರಿಗೆ ಶರಣಾಗಿದ್ದ, ಆರು ತಿಂಗಳಲ್ಲಿ ಜನರ ಹಣ ವಾಪಸ್ ಮಾಡುತ್ತೇನೆ ಎಂದು ಹೇಳಿ ಜಾಮೀನು ಪಡೆದು ಇಬ್ಬರೂ ಹೊರಬಂದಿದ್ದರು.
ಈಗ ಅವರು ಹೇಳಿದ್ದ ಅವಧಿಯು ಮುಗಿದಿದ್ದು ಈಗ ಮತ್ತೆ ಇಬ್ಬರೂ ಮಾಲೀಕರು ತಲೆಮರೆಸಿಕೊಂಡಿದ್ದಾರೆ ಎಂದು ಗ್ರಾಹಕರು ಪ್ರತಿಭಟನೆ ಮಾಡಿದ್ದಾರೆ. ಪ್ರಸ್ತುತ ಈ ಪ್ರಕರಣ ಸಿಸಿಬಿ ತನಿಖೆಯಲ್ಲಿದ್ದು, ಆದಷ್ಟು ಬೇಗ ತನಿಖೆ ನಡೆಸಿ ಹಣ ವಾಪಸ್ ಕೊಡಿಸಬೇಕು ಎಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ.
ತಬ್ರೇಜ್ ಮತ್ತು ಅಬ್ದುಲ್ ಅವರುಗಳಿಗೆ ರಾಜಕಾರಣಿಗಳ ಬೆಂಬಲವಿದ್ದು, ಅದೇ ಕಾರಣದಿಂದ ಈ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾ ನಿರತ ಗ್ರಾಹಕರು ಒತ್ತಾಯಿಸಿದ್ದಾರೆ.












Click it and Unblock the Notifications