ವಿಮಾನದಲ್ಲಿ ಜಪಾನ್ಗೆ ಪ್ರಯಾಣ ಬೆಳೆಸಿದ ಬನ್ನೇರುಘಟ್ಟದ ನಾಲ್ಕು ಆನೆಗಳು
ಬೆಂಗಳೂರು, ಜುಲೈ 24: ಇದೇ ಮೊಟ್ಟ ಮೊದಲ ಬಾರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಅಂತಾರಾಷ್ಟ್ರೀಯ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲಾಗಿದೆ. ಇಲ್ಲಿನ ನಾಲ್ಕು ಆನೆಗಳಿಗೆ ಸಿಬ್ಬಂದಿ ಗುರುವಾರ (ಜುಲೈ 24) ಭಾವನಾತ್ಮಕ ವಿದಾಯ ಹೇಳಿದರು. ಹಾಗಾದ್ರೆವ ಇವುಗಳ ಹೆಸರೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬನ್ನೇರುಘಟ್ಟ ಜೈವಿಕ ಉದ್ಯಾನವದ ನಾಲ್ಕು ಆನೆಗಳನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರಕು ವಿಮಾನದ ಮೂಲಕ ಜಪಾನ್ನ ಹಿಮೇಜಿ ಸೆಂಟ್ರಲ್ ಸಫಾರಿ ಪಾರ್ಕ್ಗೆ ಕಳುಹಿಸಲಾಯಿತು.

ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮೋದನೆ ಹಾಗೂ ಇತರ ಇಲಾಖೆಗಳಿಂದ ಪಡೆದ ನಿರಾಕ್ಷೇಪಣಾ ಪ್ರಮಾಣಪತ್ರದ ಪ್ರಕಾರ, ಒಂದು ಗಂಡು ಮತ್ತು ಮೂರು ಹೆಣ್ಣಾನೆ ಸೇರಿದಂತೆ 4 ಏಷ್ಯಾದ ಆನೆಗಳನ್ನು ಜಪಾನ್ನ ಹಿಮೇಜಿ ಸೆಂಟ್ರಲ್ ಪಾರ್ಕ್ನ ಹಿಮೇಜಿ ಸಫಾರಿ ಪಾರ್ಕ್ಗೆ ಕಳುಹಿಸಲಾಯಿತು.
ಜಪಾನ್ಗೆ ತೆರಳಿದ ಆನೆಗಳು: ಬನ್ನೇರುಘಟ್ಟದ ಸುರೇಶ್ (8 ವರ್ಷ), ಗೌರಿ (9), ಶ್ರುತಿ (7) ಹಾಗೂ ತುಳಸಿ (5) ಎಂಬ ನಾಲ್ಕು ಆನೆಗಳನ್ನು ಜಪಾನ್ಗೆ ಸರಕು ವಿಮಾನದ ಮೂಲಕ ಕಳುಹಿಸಲಾಯಿತು. ಇವುಗಳ ಬದಲಿಗೆ, ಅಲ್ಲಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ 4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾಂಜಿ ಮತ್ತು 8 ಕ್ಯಾಪುಚಿನ್ ಕೋತಿಗಳು ಬರಲಿವೆ.
ಪೂಜೆಯ ನಂತರ, ಸುರೇಶ್ನೊಂದಿಗೆ ಇರುತ್ತಿದ್ದ ಬಸವ ಎಂಬ ಆನೆ ಕಣ್ಣೀರು ಸುರಿಸಿತ್ತು. ಮತ್ತೊಂದೆಡೆ ಸುರೇಶ್, ಶ್ರುತಿಯನ್ನು ಸಿಬ್ಬಂದಿ ಪಂಜರಗಳಿಗೆ ಕರೆತರಲು ಹರಸಾಹರಪಡಬೇಕಾಯಿತು. ಗುರುವಾ ಮಧ್ಯಾಹ್ನ 2:30 ಕ್ಕೆ ಶೃತಿಯನ್ನು ಪಂಜರಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಇನ್ನು ವಿಮಾನ ಪ್ರಯಾಣಕ್ಕಾಗಿ ಆನೆಗಳಿಗೆ ಮೂರು ತಿಂಗಳ ಕಾಲ ತರಬೇತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಏರ್ವೇಸ್ನ ಸರಕು ವಿಮಾನ B777-200F ದಲ್ಲಿ ಜಪಾನ್ ದೇಶದ ಒಸಾಕಾ ಕಾನ್ಸೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬ ಜೀವಶಾಸ್ತ್ರಜ್ಞೆ ಪ್ರಾಣಿಗಳೊಂದಿಗೆ ತೆರಳಿದ್ದು, ಇವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಆನೆಗಳಿಗೆ ತರಬೇತಿ ನೀಡಲಿದ್ದಾರೆ. ಎರಡು ವಾರಗಳ ಕಾಲ ಹಿಮೇಜಿ ಪಾರ್ಕ್ ಸಿಬ್ಬಂದಿಗೆ ತರಬೇತಿ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರು ಮೃಗಾಲಯದಿಂದ ಮೇ 2021ರಲ್ಲಿ ಜಪಾನ್ನ ಟೊಯೊಹಾಶಿ ಮೃಗಾಲಯಕ್ಕೆ 3 ಆನೆಗಳನ್ನು ಕಳುಹಿಸಿದ ಬಳಿಕ, ಇದು ಜಪಾನ್ಗೆ ಆನೆಗಳ ವಿನಿಮಯದ ಮೂಲಕ ತೆರಳುತ್ತಿರುವ ಎರಡನೇ ಬ್ಯಾಚ್ ಆಗಿದೆ.












Click it and Unblock the Notifications