ದೇವರ ಬಗ್ಗೆ ಕಲಬುರ್ಗಿ ಏನೆಂದು ಅಪ್ಪಣೆ ಕೊಡ್ಸಿದ್ದಾರೆ ಕೇಳಿ
ಬೆಂಗಳೂರು, ಜೂನ್ 10: ಸೋ ಕಾಲ್ಡ್ ವಿಚಾರವಂತರು/ಜ್ಞಾನವೃದ್ಧರು ಮತ್ತೊಮ್ಮೆ ತಮ್ಮ ಅಸಲೀ ಮುಖವನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಆದರೆ ಇವರಿಗೆ ಸಿಗುವುದು ಶತಶತಮಾನಗಳ ಹಿಂದೂಗಳು, ಹಿಂದೂಗಳ ದೇವರುಗಳು, ಹಿಂದೂಗಳ ಬಗೆಗಿನ ತಾತ್ಸಾರದ ಮಾತುಗಳು ಇವೇ ಆಗಿವೆ!
ಬೆಂಗಳೂರಿನ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ 'ಮೌಢ್ಯಮುಕ್ತ ಸಮಾಜದತ್ತ' ಎಂಬ ಸದುದ್ದೇಶದ/ಸದಭಿರುಚಿಯ ಗೋಷ್ಠಿಯಲ್ಲಿ ನಾಡಿನ ಹಿರಿಯ ಸಂಶೋಧಕರಾದ ಪ್ರೊಫೆಸರ್ ಕಲುಬುರ್ಗಿ ಅವರು ಮೌಢ್ಯದ ಹೆಸರಿನಲ್ಲಿ ಹಿಂದೂ ದೇವತೆಗಳನ್ನು ಢಾಳಾಗಿ ಅವಹೇಳನ ಮಾಡಿದ್ದು, ಹಿಂದೂಗಳ ಭಾವನೆಗಳನ್ನು ಕೆರಳಿಸಿದ್ದಾರೆ.
ಬನ್ನಿ, ಹಂಪಿ ಕನ್ನಡ ವಿಶ್ವವಿದ್ಯಾಯದ ವಿಶ್ರಾಂತ ಕುಲಪತಿ ಪ್ರೊಫೆಸರ್ ಕಲುಬುರ್ಗಿ ಅವರ ವಿವಾದಾತ್ಮಕ ಹೇಳಿಕೆಗಳು ಅಥವಾ ಅವರ ವೈಯಕ್ತಿಕ ಅಭಿಪ್ರಾಯಗಳು ಏನು ಎಂಬುದನ್ನು ಅವರ ಮಾತುಗಳಲ್ಲೇ ಕೇಳೋಣ:

ಡಾ. ಕಲಬುರ್ಗಿ ಏನೆಂದು ಅಪ್ಪಣೆ ಕೊಡಿಸಿದ್ದಾರೆ?:
'ಹಿಂದೂ ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗೋಲ್ಲ. ಕಾಡುವ ಕಾಪಾಡುವ ಶಕ್ತಿ ಅದರಲಿಲ್ಲ, ಇದರಿಂದ ತಪ್ಪೇನೂ ಆಗಲ್ಲ, ಪೂಜೆ ನಿಲ್ಲಿಸಿದ್ರೆ ಅಪಾಯವಿಲ್ಲ. ಅದು ಕೇವಲ ಕಲ್ಲಿನಿಂದ ರಚನೆಯಾದ ಕಾರಣ ಅದರಲ್ಲಿ ಕಾಪಾಡುವ, ಕಾಡುವ ಶಕ್ತಿಯೂ ಇಲ್ಲ ಎಂಬುದು ಯುಆರ್ ಅನಂತಮೂರ್ತಿ ಅವರ ಪ್ರಯೋಗದಿಂದ ಸಾಬೀತಾಗಿದೆ ಎಂದು ಡಾ. ಎಂಎಂ ಕಲಬುರ್ಗಿ ಅವರು ಅಪ್ಪಣೆ ಕೊಡಿಸಿದ್ದಾರೆ.

ಅನಾಥ ಮೂರ್ತಿ ಮೇಲೆ ಮೂತ್ರ ಮಾಡಿದ್ದ ಅನಂತಮೂರ್ತಿ
ಒಮ್ಮೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯುಆರ್ ಅನಂತಮೂರ್ತಿ ಅವರು ಹಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಸ್ಥಳೀಯರೊಬ್ಬರು 'ಆ ಕಲ್ಲಿನ ದೇವತೆ ಹತ್ತಿರ ತೆರಳಬೇಡಿ, ಅದನ್ನ ಕೆರಳಿಸಿದರೆ ದೆವ್ವದ ಸ್ವರೂಪ ಪಡೆದುಕೊಂಡು ನಿಮ್ಮನ್ನು ಕಾಡುತ್ತದೆ' ಎಂದು ಹೇಳಿದ್ದರಂತೆ. ಅದಕ್ಕೆ ಪ್ರತಿಕ್ರಿಯೆಯಾಗಿ ಅನಂತಮೂರ್ತಿ ಅವರು ಅಂದೇ ರಾತ್ರಿ ಆ ಜಾಗಕ್ಕೆ ತೆರಳಿ ಕಲ್ಲಿನ ಮೇಲೆ ಮೂತ್ರ ಮಾಡಿದರಂತೆ. ಆದರೆ ಇಲ್ಲಿಯವರೆಗೂ ಆ ಕಲ್ಲಿನಿಂದ ಅವರಿಗೆ ಯಾವ ತೊಂದರೆಯೂ ಆಗಿಲ್ಲವಂತೆ. ಹಾಗಂತ ಅವರೇ ಒಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ' ಎಂದು ಹೇಳಿದ ಡಾ. ಕಲುಬುರ್ಗಿ ಅವರು ಅದನ್ನು ಆಧಾರವಾಗಿಸಿಕೊಂಡು ತಮ್ಮ ಮಾತನ್ನು ಮುಂದುವರಿಸಿ, 'ದೇವತೆಗೆ ಶಕ್ತಿಯೇ ಇಲ್ಲದ ಕಾರಣ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ' ಎಂದು ತಮ್ಮ ವಾದ ಮಂಡಿಸಿದ್ದಾರೆ.

ದೇವಾಲಯ ನಾಶ ಆಗುವರೆಗೂ ಮೂಢನಂಬಿಕೆ ಜೀವಂತ
ದೇವತೆಗಳು ಮತ್ತು ದೇವಾಲಯ ನಾಶ ಆಗುವರೆಗೂ ಮೂಢನಂಬಿಕೆ ಜೀವಂತ. ದೇವರು ಬಂದ ಕೂಡಲೇ ಪುರೋಹಿತ ಯುಗ ಆರಂಭವಾಗಿ ಕಲ್ಲು ಮಣ್ಣು ಹಾಗೂ ಲೋಹದ ದೇವತೆ ಸೃಷ್ಟಿಯಾದವು. ಭಕ್ತರನ್ನು ದೈಹಿಕ, ಮಾನಸಿಕವಾಗಿ ಶೋಷಿಸುವ ಪುರೋಹಿತರ ಸ್ವರೂಪ ಅರ್ಚಕ, ಸ್ವಾಮಿ, ಜೋಯೀಸರು ನಾಶವಾದರೆ ಮೂಢನಂಬಿಕೆ ಬಲುಪಾಲು ನಾಶವಾದಂತೆ. (ಚಿತ್ರ ಕೃಪೆ: ದಿ ಹಿಂದೂ ಪತ್ರಿಕೆ)

'ಕಲುಬುರ್ಗಿಯ ಮೇಲೂ ಸಮರೋಪಾದಿಯಲ್ಲಿ ಮೂತ್ರ ಮಾಡೋಣ'
ಇದನ್ನು ಕೇಳಿದ ಮಂದಿ 'ಎಲವೋ ಮೂಢ! ಏನಿದು ನಿನ್ನ ಅಹಂಕಾರದ ಮಾತು?' ಎಂದು ಘರ್ಜಿಸಿದ್ದಾರೆ. 'ಸುಮ್ಮನಿದ್ರೆ ಕಲುಬುರ್ಗಿ ಅಂತಹವರು ಕಂಡವರ ತಲೆಯ ಮೇಲೂ ಉಚ್ಚೆ ಹೊಯ್ತಾರೆನೋ?' ಎಂದು ಕನ್ನಡ ಪ್ರಭ ಪತ್ರಿಕೆಯ ಕಾಂಮೆಂಟ್ ತಿರುಗೇಟು ನೀಡಿದೆ.
ಮತ್ಯಾರೋ 'ದೇವರ ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ತಪ್ಪಲ್ಲ' ಎಂದ ಪ್ರೊ. ಕಲುಬುರ್ಗಿಯ ಹೇಳಿಕೆಯನ್ನು ಅವರಿಗೇ ತಿರುಗುಬಾಣವಾಗಿಸಿ 'ಬನ್ನಿ ಸಮಸ್ತ ಹಿಂದೂಗಳೇ, ಇದೇ ಕಲುಬುರ್ಗಿಯ ಮೇಲೂ ಸಮರೋಪಾದಿಯಲ್ಲಿ ಹೋಗಿ ಮೂತ್ರ ಮಾಡಿ ಬರೋಣ, ಅದೇನೂ ತಪ್ಪಲ್ಲ. ಆಗಲಾದರೂ ಆ ಮೂಢನಿಗೆ ಬುದ್ಧಿ ಬಂದೀತು! ಎಂದಿದ್ದಾರೆ.

ವಿಧಾನಸೌಧದಲ್ಲಿರುವ ದೇವತೆಗಳ ಫೋಟೋ ತೆಗೆದುಹಾಕಬೇಕು
ಶಕ್ತಿ ಕೇಂದ್ರ ವಿಧಾನ ಸೌಧವನ್ನು ಪ್ರವೇಶಿಸುವ ಮುನ್ನ ಹೋಮಹವನ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಒಳಗಿರುವ ದೇವತೆಗಳ ಫೋಟೋಗಳನ್ನು ತೆಗೆದುಹಾಕಬೇಕು. ತನ್ಮೂಲಕ ಮುಖ್ಯಮಂತ್ರಿಗಳು ವಿಧಾನಸೌಧವನ್ನು ಸ್ವಚ್ಛ ಮಾಡುವಂತಾಗಬೇಕು.

ಮೋದಿ ಪೂಜೆ ಮಾಡದಿದ್ದರೆ ಗಂಗೆ ಹರಿಯುವುದಿಲ್ವಂತಾ?
ನರೇಂದ್ರ ಮೋದಿ ಪ್ರಧಾನಿ ಆದ ನಂತರ ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿ, ಗಂಗೆಗೆ ಆರತಿ ಬೆಳಗಿ, ಶುದ್ಧೀಕರಣ ಮಾಡುವುದಾಗಿ ಹೇಳಿದ್ದಾರೆ. ಯಾಕೆ, ಪೂಜೆ ಮಾಡದಿದ್ದರೆ ಗಂಗೆ ಹರಿಯುವುದಿಲ್ಲವೇ? ಎಂದೂ ಕಲಬುರ್ಗಿ ಅವರು ಉದ್ಧಟತನದಿಂದ ಮಾತನಾಡಿದ್ದಾರೆ.

ಧನ್ಯೋಸ್ಮಿ! ಪ್ರೊಫೆಸರ್ ಕಲುಬುರ್ಗಿ ಇದಕ್ಕೂ ಏನಂತಾರೋ?
ಹಾಗಾದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸುವಾಗ ಸಂಸತ್ ಭವನಕ್ಕೆ ತಮ್ಮ ಹಣೆಯೊತ್ತಿ ನಮಸ್ಕರಿಸುತ್ತಾರೆ. ಅದನ್ನು ಟಿವಿಗಳಲ್ಲಿ ಕಂಡ ಜನ 'ಧನ್ಯೋಸ್ಮಿ! ಇದು ಭಾರತದ ಸಂಸ್ಕೃತಿ' ಎಂದು ಉದ್ಘಾರ ತೆಗೆಯುತ್ತಾರೆ. ಅದನ್ನೂ ಈ ಪ್ರೊಫೆಸರ್ ಕಲುಬುರ್ಗಿ ಅದನ್ನು ಮೂರ್ಖತನ/ಮೂಢನಂಬಿಕೆಯ ಪರಮಾವಧಿ ಅನ್ನುತ್ತಾರಾ? ಎಂದು ಜನ ಬೆಳಗ್ಗೆಯಿಂದ ಮಾತನಾಡಿಕೊಳ್ಳುತ್ತಿದ್ದಾರೆ.

ವಿಧಾನಸೌಧದಲ್ಲಿ ಮೂಢನಂಬಿಕೆಗೆ ನಾಂದಿ ಹಾಡಿದ್ದು ಗೌಡರಂತೆ!
ಹಿಂದೆ ಕೆಂಗಲ್ ಹನುಮಂತಯ್ಯ, ಬಿಡಿ ಜತ್ತಿ, ರಾಮಕೃಷ್ಣ ಹೆಗಡೆ ಕಾಲದವರೆಗೂ ಮೂಢನಂಬಿಕೆ ಅಷ್ಟಾಗಿ ಗೋಚರಿಸಿರಲಿಲ್ಲ. ಆದರೆ ಎಚ್ ಡಿ ದೇವೇಗೌಡರು ಮುಖ್ಯಮಂತ್ರಿ ಗಾದಿ ಅಲಂಕರಿಸಿದ ನಂತರ ಮೂಢನಂಬಿಕೆಗೆ ನಾಂದಿ ಹಾಡಿದರು. ನಂತರ ಬಿಜೆಪಿ ಅಧಿಕಾರಾವಧಿಯಲ್ಲಿ ಮೂಢನಂಬಿಕೆಯ ದರ್ಬಾರೇ ಯಥೇಚ್ಛವಾಗಿ ನಡೆಯಿತು.

ಸಚಿನ್ ತೆಂಡೂಲ್ಕರ್ ಅವರನ್ನೂ ಬಿಡದ ಕಲುಬುರ್ಗಿ!
ಕಲುಬುರ್ಗಿ ಮಹಾಶಯರು ನಿವೃತ್ತ ಕ್ರಿಕಟ್ಟಿಗ ಸಚಿನ್ ತೆಂಡೂಲ್ಕರ್ ಅವರ ಬಗ್ಗೆಯೂ ಲೇವಡಿ ಮಾಡಿದ್ದಾರೆ. ಒಳಗೆ ಕೆಂಪುಚಡ್ಡಿ ಹಾಕಿಕೊಂಡರೆ ಗೆಲ್ಲುತ್ತೇನೆ ಎಂಬ ಮೂಢನಂಬಿಕೆ ಅವರಿಗೆ (ಸಚಿನ್ ತೆಂಡೂಲ್ಕರ್) ಇದೆ. ಮೂಢನಂಬಿಕೆ ಎಂಬುದು ಸುಶಿಕ್ಷತರನ್ನೂ ಬಿಟ್ಟಿಲ್ಲ ಎಂದಿದ್ದಾರೆ.












Click it and Unblock the Notifications