2020ರಲ್ಲಿ ಸಮ್ಮಿಶ್ರ ಸರ್ಕಾರ ಉರುಳುತ್ತದೆ ಎಂದ ಕಾಂಗ್ರೆಸ್ ಮುಖಂಡ
ಬೆಂಗಳೂರು, ಜೂನ್ 13: ಹುಟ್ಟಿದ ಆರಂಭದ ದಿನದಿಂದಲೂ ಕತ್ತಿಯ ಅಲುಗಿನ ಮೇಲೆಯೇ ಸಾಗಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಗೂ ಹೀಗೂ ಒಂದು ವರ್ಷ ಪೂರೈಸಿದೆ. ಪಕ್ಷಗಳ ಒಳಗಿನ ಅಸಮಾಧಾನ, ಬಂಡಾಯ, ಪರಸ್ಪರ ಆರೋಪ, ಆಪರೇಷನ್ ಕಮಲದ ಸದ್ದು, ಲೋಕಸಭೆ ಚುನಾವಣೆಯಲ್ಲಿನ ಸೋಲು, ಸಂಪುಟ ವಿಸ್ತರಣೆ ಹೀಗೆ ಅನೇಕ ಸಂಗತಿಗಳು ಸಮ್ಮಿಶ್ರ ಸರ್ಕಾರದ ಬುಡವನ್ನು ಅಲುಗಾಡಿಸುತ್ತಲೇ ಇದೆ. ಇದರ ನಡುವೆಯೇ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಲಾಗುತ್ತಿದೆ.
ಆದರೆ, ಈ ಸಾಹಸಗಳೇನೇ ಇದ್ದರೂ ಇನ್ನು ಕೆಲವೇ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಮುಂದಿನ ವರ್ಷ ಸಮ್ಮಿಶ್ರ ಸರ್ಕಾರ ಉರುಳುವುದು ಖಚಿತ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರೇ ಹೇಳಿದ್ದಾರೆ.
ಬಿಗ್ ಬ್ರೇಕಿಂಗ್ : ಕರ್ನಾಟಕ ಕಾಂಗ್ರೆಸ್ನಲ್ಲಿ ಮೂರು ಮಹತ್ವದ ಬದಲಾವಣೆ!
2020ರ ಆರಂಭದಲ್ಲಿ ಮೂರು ತಿಂಗಳ ಒಳಗೆ ಮೈತ್ರಿ ಸರ್ಕಾರ ಉರುಳುವುದು ಖಚಿತ. ಬಳಿಕ ಮಧ್ಯಂತರ ಚುನಾವಣೆ ನಡೆಯಲಿದೆ. ಆಗ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುವುದು ಸರಿ. ಈ ಮೈತ್ರಿಯಿಂದ ಕಾಂಗ್ರೆಸ್ಗೆ ಹೆಚ್ಚು ನಷ್ಟ ಎಂದು ಮಾಜಿ ಸ್ಪೀಕರ್ ಕೋಳಿವಾಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಉಳಿಸಿಕೊಳ್ಳಲು ನಡೆಸುವ ಕಸರತ್ತುಗಳು ಪ್ರಯೋಜನವಾಗುವುದಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ನಲ್ಲಿ ಭಾರಿ ಬದಲಾವಣೆ: ಸಿದ್ದರಾಮಯ್ಯಗೆ ಹಿಂಬಡ್ತಿ?
ಕ್ಷೇತ್ರದಲ್ಲಿ 40 ವರ್ಷಗಳಿಂದ ಪಕ್ಷ ಕಟ್ಟಿದ್ದು ನಾನು. ಈಗ ಬಂದವರಿಗೆ ಮಣೆ ಹಾಕಿದರೆ ನನ್ನ ಅಸ್ತಿತ್ವದ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಪಕ್ಷವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹೈಕಮಾಂಡ್ ಚರ್ಚಿಸಿ ಅನಿವಾರ್ಯವಾಗಿ ಪಕ್ಷೇತರ ಶಾಸಕರನ್ನು ಸಚಿವರನ್ನಾಗಿ ಮಾಡಲು ನಿರ್ಧರಿಸಿದೆ. ಈ ಕಾರಣಕ್ಕಾಗಿ ಇಲ್ಲಿನ ನಾಯಕರು ಅದಕ್ಕೆ ಒಪ್ಪಿ ಸಚಿವ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಮಾರ್ಚ್ ಒಳಗೆ ಮಧ್ಯಂತರ ಚುನಾವಣೆ
ಹೆಚ್ಚೆಂದರೆ 8-9 ತಿಂಗಳು ಮೈತ್ರಿ ಸರ್ಕಾರ ಉಳಿಯಬಹುದು. 2020ರ ಮಾರ್ಚ್ ಒಳಗೆ ಸರ್ಕಾರ ಪತನಗೊಂಡು ಮಧ್ಯಂತರ ಚುನಾವಣೆ ನಡೆಯಲಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು ನನಗೆ ಇಷ್ಟವಿರಲಿಲ್ಲ. ಜೆಡಿಎಸ್ ಜತೆಗೆ ಮಾಡಿಕೊಂಡ ಹೊಂದಾಣಿಕೆ ಸರಿ ಕಾಣಿಸುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಇನ್ನು ಮೈತ್ರಿ ಮುಂದುವರಿಯುವುದು ಕಷ್ಟ ಎಂದು ಕೋಳಿವಾಡ ಹೇಳಿದರು.
ಎಚ್ಡಿಕೆ 20 ತಿಂಗಳ ಮುಖ್ಯಮಂತ್ರಿ
ಸರ್ಕಾರವನ್ನು ಕೆಲವು ದಿನಗಳ ಕಾಲ ಉಳಿಸಿಕೊಳ್ಳಲು ಸಂಪುಟ ವಿಸ್ತರಣೆಯ ಕಸರತ್ತು ಮಾಡಲಾಗುತ್ತಿದೆ. ಅನೇಕ ಕಾರಣಗಳಿಂದಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ. ಹೀಗಾಗಿ ಹೆಚ್ಚು ದಿನಗಳ ಕಾಲ ಈ ಸಮ್ಮಿಶ್ರ ಸರ್ಕಾರ ಮುಂದುವರಿಯುವುದಿಲ್ಲ. ಕುಮಾರಸ್ವಾಮಿ ಅವರು ಮತ್ತೊಮ್ಮೆ 20 ತಿಂಗಳ ಮುಖ್ಯಮಂತ್ರಿ ಆಗುತ್ತಾರೆ. ಜೆಡಿಎಸ್ ಜತೆ ಮೈತ್ರಿ ಸರಿಯಲ್ಲ ಎಂದು ನಾನು ಧರಂ ಸಿಂಗ್ ಕಾಲದಲ್ಲಿಯೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಇದ್ದಿದ್ದರೆ ಪಕ್ಷ ಮತ್ತಷ್ಟು ಬೆಳೆಯುತ್ತಿತ್ತು ಎಂದರು.
ಮಾಜಿ ಸ್ಪೀಕರ್ ಕೋಳಿವಾಡಗೆ ಸಮ್ಮಿಶ್ರ ಸರ್ಕಾರದಿಂದ ಬಿಗ್ ಶಾಕ್
ಮಧ್ಯಂತರ ಚುನಾವಣೆಗೆ ಸಿದ್ಧರಾಮಯ್ಯ ರೆಡಿ
ಸಿದ್ದರಾಮಯ್ಯ ಅವರು ಮಧ್ಯಂತರ ಚುನಾವಣೆಗೆ ಹೋಗುವುದು ಸೂಕ್ತ ಎಂದು ಹೈಕಮಾಂಡ್ಗೆ ಹೇಳಿದ್ದರು. ಅವರು ಚುನಾವಣೆಗೆ ಸಿದ್ಧರಿದ್ದಾರೆ. ಆದರೆ ಕಾಲ ಬರಲಿ ಎಂದು ಕಾಯುತ್ತಿದ್ದಾರೆ. ನಾಳೆ ಚುನಾವಣೆ ನಡೆದರೆ ಸ್ಪರ್ಧೆಗೆ ನಾನೂ ಸಿದ್ಧ. ಆದರೆ, ಕೆಲವು ದಿನಗಳ ಕಾಲ ಕಾಯುವಂತೆ ಹೈಕಮಾಂಡ್ ಹೇಳಿದೆ. ಜನ ಸಂಪೂರ್ಣವಾಗಿ ಕಾಂಗ್ರೆಸ್ಗೆ ಬೆಂಬಲ ನೀಡಿಲ್ಲ. ಇದರಿಂದ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡಿದ್ದರೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದಾಗಿತ್ತು. ಮೈತ್ರಿಯಿಂದಾಗಿಯೇ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದರು.
ಯಡಿಯೂರಪ್ಪ ಮತ್ತೆ ಸಿಎಂ ಆಗೊಲ್ಲ
ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೂ ಬಿಎಸ್ ಯಡಿಯೂರಪ್ಪ ಅವರು ಪುನಃ ಮುಖ್ಯಮಂತ್ರಿಯಾಗುವ ಸಾಧ್ಯತೆ ಕಷ್ಟ. ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದರೂ ಅಚ್ಚರಿಯಿಲ್ಲ. ಬಿಜೆಪಿಯಲ್ಲಿಯೂ ನನ್ನ ಸ್ನೇಹಿತರು ಇದ್ದಾರೆ. ಅವರಿಂದ ಪಡೆದ ಮಾಹಿತಿ ಆಧಾರದಲ್ಲಿ ಈ ಮಾತು ಹೇಳುತ್ತಿದ್ದೇನೆ ಎಂದರು.
ಶಾಸಕ ಶಂಕರ್ ಅವಕಾಶವಾದಿ
ಪಕ್ಷೇತರ ಶಾಸಕ ಎ. ಶಂಕರ್ ಒಬ್ಬರ ಅವಕಾಶವಾದಿ. ತಮ್ಮ ಲಾಭಕ್ಕಾಗಿ ಅವರು ಯಾವಾಗ ಬೇಕಾದರೂ ಬದಲಾಗುತ್ತಾರೆ. ಅವರ ವಿರುದ್ಧ ಕ್ಷೇತ್ರದಲ್ಲಿ ತೀವ್ರ ಅಸಮಾಧಾನವಿದೆ. ಅವರ ಕಡೆಯ ಬೆಂಬಲಿಗರೆಲ್ಲ ಈಗ ನಮ್ಮ ಜತೆ ಬಂದಿದ್ದಾರೆ. ಸಿದ್ದರಾಮಯ್ಯ ನನ್ನ ಸಮಕಾಲೀನರು, ಅವರೊಂದಿಗೂ ನಾನು ಮಾತನಾಡಿದ್ದೇನೆ. ಈ ಹಿಂದೆ ಶಂಕರ್ ಅವರನ್ನು ಸಚಿವಸ್ಥಾನದಿಂದ ತೆಗೆಯಲು ಸಿದ್ದರಾಮಯ್ಯ ಕಾರಣರಾಗಿದ್ದರು. ಈಗ ಅವರೇ ಶಂಕರ್ ಅವರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.