ಹೋರಾಟಗಾರ, ವಕೀಲ ಎ.ಕೆ. ಸುಬ್ಬಯ್ಯ ವಿಧಿವಶ
ಬೆಂಗಳೂರು, ಆಗಸ್ಟ್ 27 : ಹೋರಾಟಗಾರ, ವಕೀಲ ಎ. ಕೆ. ಸುಬ್ಬಯ್ಯ ವಿಧಿವಶರಾದರು. ಹಲವು ದಿನಗಳಿಂದ ವಯೋಹಸಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.
ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಎ. ಕೆ. ಸುಬ್ಬಯ್ಯ (85) ಕೊನೆಯುಸಿರೆಳೆದರು. ಸೋಮವಾರದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ, ವಕೀಲ, ಹೋರಾಟಗಾರರಾದ ಸುಬ್ಬಯ್ಯ ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ನಿವಾಸದಲ್ಲಿದ್ದ ಅವರು, ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.
Recommended Video
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಳ್ಳೂರಿನ ಅಜ್ಜಿ ಕುಟೀರ ಕಾರ್ಯಪ್ಪ ಮತ್ತು ಸೀತಮ್ಮ ದಂಪತಿಗಳ ಪುತ್ರ ಎ. ಕೆ. ಸುಬ್ಬಯ್ಯ 1934, ಆಗಸ್ಟ್ 8ರಂದು ಜನಿಸಿದರು. ರಾಜಕಾರಣಿಯಾಗಿ, ವಕೀಲರಾಗಿ, ಹೋರಾಟಗಾರರಾಗಿ ಸುಬ್ಬಯ್ಯ ಗುರುತಿಸಿಕೊಂಡಿದ್ದರು.
ನೇರ ನಡೆ ನುಡಿಯ ಸುಬ್ಬಯ್ಯ ರಾಜಕೀಯದಲ್ಲಿ ಭ್ರಷ್ಟಾಚಾರ, ಕೋಮುವಾದ, ಸಜ್ಜನ ಪಕ್ಷಪಾತಗಳನ್ನು ಸದಾ ವಿರೋಧಿಸಿಕೊಂಡು ಬಂದವರು. ಜನಸಂಘ ಮತ್ತು ಬಿಜೆಪಿಯಲ್ಲಿ ಹಲವು ವರ್ಷ ಸುಬ್ಬಯ್ಯ ಕೆಲಸ ಮಾಡಿದ್ದರು.
ಬಾಬರಿ ಮಸೀದಿ ಧ್ವಂಸಗೊಳಿಸಿದಾಗ ರಾಜ್ಯಾದ್ಯಂತ ಶಾಂತಿಯಾತ್ರೆ ನಡೆಸುವ ಮೂಲಕ ಸೌಹಾರ್ದತೆ ಮೂಡಿಸುವ ಕಾರ್ಯ ಮಾಡಿದ್ದರು. ನೇರವಾದ ಮಾತುಗಳಿಂದಾಗಿಯೇ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿತ್ತು.
2018ರ ಫೆಬ್ರವರಿಯಲ್ಲಿ ಎ. ಕೆ. ಸುಬ್ಬಯ್ಯ ಅವರಿಗೆ ಅಭಿನಂದನಾ ಸಮಾರಂಭ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದರಲ್ಲಿ ಪಾಲ್ಗೊಂಡಿದ್ದರು. ಸುಬ್ಬಯ್ಯ ಅವರ ಸಮಗ್ರ ಬರಹಗಳ 'ಸೌಹಾರ್ದ ಸೆಲೆ' ಕೃತಿಯನ್ನು ಬಿಡುಗಡೆ ಮಾಡಲಾಗಿತ್ತು. 'ನಿರ್ಭೀತಿಯ ಹೆಜ್ಜೆಗಳು' ಸುಬ್ಬಯ್ಯರ ಜೀವನ ಚರಿತ್ರೆಯ ಪುಸ್ತಕವಾಗಿದೆ.












Click it and Unblock the Notifications