ಬೆಂಗಳೂರಲ್ಲಿ 599 ಎಕರೆ ಭೂಮಿ ಅರಣ್ಯ ಇಲಾಖೆಯ ವಶಕ್ಕೆ
ಬೆಂಗಳೂರು, ಆಗಸ್ಟ್ 12: ಬೆಂಗಳೂರು ನಗರದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲಾಗುತ್ತಿದೆ. 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಮರಳಿ ಇಲಾಖೆಯ ವಶಕ್ಕೆ ಪಡೆಯಲು ಕ್ರಮ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಸದರಿ ಜಮೀನು ಇಂದಿಗೂ ಅರಣ್ಯ ಪ್ರದೇಶವೇ ಆಗಿರುತ್ತದೆ.
ಈ ಕುರಿತು ಈಶ್ವರ ಖಂಡ್ರೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವರು ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ ಬೆಂಗಳೂರು ನಗರದ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರಲ್ಲಿ ಸಾವಿರಾರು ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಮರಳಿ ಇಲಾಖೆಯ ವಶಕ್ಕೆ ಪಡೆಯಲು ಕ್ರಮ ವಹಿಸುವಂತೆ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಸಚಿವರ ಟಿಪ್ಪಣಿ: ಸಚಿವರು ಈ ಕುರಿತು ಅಪರ ಮುಖ್ಯ ಕಾರ್ಯದರ್ಶಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು ಇವರಿಗೆ ಟಿಪ್ಪಣಿಯನ್ನು ಕಳಿಸಿದ್ದಾರೆ.
ಬೆಂಗಳೂರು ನಗರದ ಪೀಣ್ಯ ಜಾಲಹಳ್ಳಿ ಸರ್ವೆ ನಂ.1 ಮತ್ತು 2ರಲ್ಲಿ ಪ್ಲಾಂಟೇಷನ್ನಲ್ಲಿ 599 ಎಕರೆ ಪ್ರದೇಶ ಅರಣ್ಯ ನಿಯಮಾವಳಿ 1878ರ ಸೆಕ್ಷನ್ 9ರಡಿಯಲ್ಲಿ ಅರಣ್ಯ ಎಂದು 11.06.1896ರಲ್ಲೇ ಗೆಜೆಟ್ ಅಧಿಸೂಚನೆ ಆಗಿರುತ್ತದೆ. ಆದರೆ ಸದರಿ ಭೂಮಿ ಅಂದಿನ ಜಿಲ್ಲಾಧಿಕಾರಿಗಳು ನೋಂದಾವಣೆ ಮಾಡಿಕೊಟ್ಟ ದಾನಪತ್ರದ ಮೂಲಕ ಕೇಂದ್ರ ಸರ್ಕಾರಿ ಸ್ವಾಮ್ಯದ ಹೆಚ್.ಎಂ.ಟಿ. ಕೈಗಾರಿಕೆಗೆ ವರ್ಗಾವಣೆಯಾಗಿರುತ್ತದೆ ಎನ್ನಲಾಗಿದೆ.
ಆದರೆ ಈ ದಾನಪತ್ರ ಅಥವಾ ಭೂ ಮಂಜೂರಾತಿ ಕುರಿತಂತೆ ಯಾವುದೇ ಗೆಜೆಟ್ ಅಧಿಸೂಚನೆಯೂ ಆಗಿರುವುದಿಲ್ಲ. ಅರಣ್ಯ ಭೂಮಿಯನ್ನು ದಾನವಾಗಿ ನೀಡಲು ಅವಕಾಶವೂ ಇರುವುದಿಲ್ಲ. ಮಿಗಿಲಾಗಿ ಸದರಿ ಭೂಮಿ ಅರಣ್ಯೇತರ ಉದ್ದೇಶಕ್ಕಾಗಿ ಈವರೆಗೆ ಡಿನೋಟಿಫಿಕೇಷನ್ ಕೂಡ ಆಗಿರುವುದಿಲ್ಲ ಎಂದು ಸಚಿವರು ಟಿಪ್ಪಣಿಯಲ್ಲಿ ಹೇಳದ್ದಾರೆ.
ಹೀಗಾಗಿ ಶರಾವತಿ ಸಂತ್ರಸ್ತರ ಪ್ರಕರಣದಲ್ಲಿ ಹಾಗೂ ಗೋದಾವರ್ಮನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮತ್ತು ಇತ್ತೀಚೆಗೆ Once a Forest is Always a Forest - Environment is more important than civil rights ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯ ಪಟ್ಟಿರುವ ಹಿನ್ನೆಲೆಯಲ್ಲಿ ಸದರಿ ಜಮೀನು ಇಂದಿಗೂ ಅರಣ್ಯ ಪ್ರದೇಶವೇ ಆಗಿರುತ್ತದೆ.
ಈ ಜಮೀನನ್ನು ಹೆಚ್.ಎಂ.ಟಿ. ಸಂಸ್ಥೆ ಸರ್ಕಾರಿ ಇಲಾಖೆ/ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿರುವುದು ಅಕ್ರಮವಾಗಿರುತ್ತದೆ. ಈ ಹಿಂದೆ 64ಎ ಪ್ರಕ್ರಿಯೆಯೂ ಆಗಿದ್ದು, ಈ ಆದೇಶದ ವಿರುದ್ಧ ಹೆಚ್.ಎಂ.ಟಿ. ಮೇಲ್ಮನವಿಯನ್ನೂ ಸಲ್ಲಿಸಿರುವುದಿಲ್ಲ.
ಆದಾಗ್ಯೂ ಅರಣ್ಯಾಧಿಕಾರಿಗಳು ಜಮೀನು ಮರು ವಶಕ್ಕೆ ಪ್ರಯತ್ನ ಮಾಡದಿರುವುದು ಮತ್ತು ಸಚಿವ ಸಂಪುಟದ ಗಮನಕ್ಕೂ ತಾರದೆ 2020ರಲ್ಲಿ ಡಿನೋಟಿಫೈ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ಈ ಮೇಲ್ಮನವಿ ಹಿಂಪಡೆಯಲು ಮತ್ತು ಈ ಕುರಿತು ಉನ್ನತಾಧಿಕಾರಿಗಳಿಂದ ತನಿಖೆಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮುಂದುವರಿದು ಸದರಿ 599 ಎಕರೆ ಜಮೀನಿನ ಪೈಕಿ ಯಾವುದೇ ಕಟ್ಟಡ ಇಲ್ಲದ 281 ಎಕರೆ ಖಾಲಿ ಜಮೀನನ್ನು ಕೂಡಲೇ ಅರಣ್ಯ ಇಲಾಖೆ ವಶಕ್ಕೆ ಪಡೆಯಲು ಕ್ರಮ ವಹಿಸುವಂತೆ ಈ ಮೂಲಕ ಸ್ಪಷ್ಟ ಸೂಚನೆ ನೀಡಲಾಗಿದೆ.












Click it and Unblock the Notifications