ಬೆಂಗಳೂರು; ಆಹಾರ ತಜ್ಞ ಡಾ. ಕೆ. ಸಿ. ರಘು ವಿಧಿವಶ
ಬೆಂಗಳೂರು, ಅಕ್ಟೋಬರ್ 15; ಪ್ರಸಿದ್ಧ ಆಹಾರ ತಜ್ಞ, ಚಿಂತಕ ಕೆ. ಸಿ. ರಘು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಆಹಾರದ ಕುರಿತು ಅಂಕಣ ಬರೆಯುತ್ತಿದ್ದ ರಘು ಅವರು, ಟಿವಿ ವಾಹಿನಿಗಳ ಚರ್ಚೆಗಳಲ್ಲಿ ಸಹ ಪಾಲ್ಗೊಳ್ಳುತ್ತಿದ್ದರು.
ಡಾ. ಕೆ. ಸಿ. ರಘು ಮೃತಪಟ್ಟಿರುವ ಬಗ್ಗೆ ಅವರ ಪತ್ನಿ ಆಶಾ ರಘು ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ. ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ರಘು ಮೃತಪಟ್ಟಿದ್ದಾರೆ. ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ.

ಆಶಾ ರಘು ಅವರು ಅಂತಿಮ ದರ್ಶನ ಪಡೆಯಲು ಇಚ್ಛಿಸುವವರು Raghu K.C A-403, 4th floor, Brigade Caladium, Dasarahalli Main Road, Amruthnagar, Dasarahalli, Bengaluru -560024, M- 98800 09140 ವಿಳಾಸಕ್ಕೆ ಬರಬಹುದು ಎಂದು ಪೋಸ್ಟ್ನಲ್ಲಿ ಹೇಳಿದ್ದಾರೆ.
ಕೆ. ಸಿ. ರಘು ಆಹಾರ ವಿಚಾರದಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿದ್ದರು. ವಿವಿಧ ಟಿವಿ ವಾಹಿನಿಗಳ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹಲವು ವಾಹಿನಿಗಳಿಗೆ ಸರಣಿ ಕಾರ್ಯಕ್ರಮಗಳನ್ನು ಮಾಡಿಕೊಟ್ಟಿದ್ದರು. ಪತ್ರಿಕೆಗಳಿಗೆ ಅಂಕಗಣಗಳನ್ನು ಬರೆಯುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಹಾರದ ಕುರಿತು ಅವರ ಹಲವು ವಿಡಿಯೋಗಳಿವೆ.
ಫುಡ್ ಎಂಡ್ ನ್ಯೂಟ್ರೇಷನ್ ವರ್ಡ್ ಎಂಬ ಆಂಗ್ಲ ನಿಯತಕಾಲಿಕೆಗೆ ಡಾ. ಕೆ. ಸಿ. ರಘು ಸಂಪಾದಕರಾಗಿದ್ದರು. ಸಾಮಾನ್ಯ ಜ್ಞಾನ, ಆರ್ಥಿಕತೆ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು. ಕೇಂದ್ರ ಮತ್ತು ರಾಜ್ಯ ಬಜೆಟ್ ಸಂದರ್ಭದಲ್ಲಿ ಟಿವಿ ವಾಹಿನಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.
ಡಾ. ಕೆ. ಸಿ. ರಘು ಲೇಖಕರಾಗಿದ್ದರು. 'ತುತ್ತು ತತ್ವ', 'ಆಹಾರ ರಾಜಕೀಯ', 'ರಸ ತತ್ವ' ಸೇರಿದಂತೆ ಅನೇಕ ಕೃತಿಗಳನ್ನು ಅವರು ಬರೆದಿದ್ದಾರೆ. ಪ್ರಿಸ್ಟೀನ್ ಅರ್ಗಾನಿಕ್ಸ್ ಎಂಬ ಸಂಸ್ಥೆಯನ್ನು ಅವರು ಮಕ್ಕಳಿಗೆ ಕಂಡುಬರುವ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಸಂಶೋಧನೆ ನಡೆಸಲು ಸ್ಥಾಪಿಸಿದ್ದರು.
ಸಚಿವರ ಸಂತಾಪ; ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೆ. ಸಿ. ರಘು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ನಾಡಿನ ಹೆಸರಾಂತ ಚಿಂತಕ, ಆಹಾರ ತಜ್ಞ ಕೆ.ಸಿ. ರಘು ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಕೆ. ಸಿ. ರಘು ಅವರು ನಾಡಿನ ಹೆಸರಾಂತ ಆಹಾರ ತಜ್ಞರಾಗಿ, ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೀಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ಹಾಗೂ ಆಪ್ತರಿಗೆ ದೊರೆಯಲಿ ಎಂದು ಈ ಮೂಲಕ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ' ಎಂದು ಹೇಳಿದ್ದಾರೆ.












Click it and Unblock the Notifications