ದೊಂಬಿ ಎಬ್ಬಿಸಿದವರ ಬೆಚ್ಚಿ ಬೀಳಿಸುವ ಬೇಡಿಕೆ ಏನಿತ್ತು ಗೊತ್ತಾ?
ಬೆಂಗಳೂರು, ಆ. 14: ಎಫ್ಐಆರ್ ದಾಖಲು ಮಾಡುವುದು ವಿಳಂಬ ಮಾಡಿದ್ದರಿಂದ ಕೆ.ಜಿ. ಹಳ್ಳಿ ಹಾಗೂ ಡಿ.ಜಿ. ಹಳ್ಳಿ ಗಲಭೆ ನಡೆಯಿತು ಎಂಬುದು ಶುದ್ಧ ಸುಳ್ಳು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಉನ್ನತ ಮಟ್ಟದ ಸಭೆಯ ಬಳಿಕ ಅವರು ಮಾತನಾಡಿದ್ದಾರೆ. ದೊಂಬಿ ನಡೆಸಿದವರು ಪೊಲೀಸರ ಎದುರು ಇಟ್ಟಿದ್ದ ಬೇಡಿಕೆ ಬೆಚ್ಚಿ ಬೀಳಿಸುವಂತಿದೆ.
ವಿಧಾನಸೌಧದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗೃಹ ಸಚಿವ ಬೊಮ್ಮಾಯಿ ಭೇಟಿ ಮಾಡಿದರು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಡಿಜಿ-ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಮುಂದಿನ ತನಿಖೆ ಹಾಗೂ ಈವರೆಗೆ ಆಗಿರುವ ತನಿಖೆಯ ಬಗ್ಗೆ ಕೆಲವು ವಿವರಗಳನ್ನು ಗೃಹಸಚಿವ ಬೊಮ್ಮಾಯಿ ತಿಳಿಸಿದ್ದಾರೆ. ಜೊತೆಗೆ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ವಿಚಾರಗಳನ್ನು ಮುಖ್ಯಮಂತ್ರಿಗಳಿಗೆ ಅವರು ಕೊಟ್ಟಿದ್ದಾರೆ.

ದಾರಿ ತಪ್ಪಿಸುವ ಕೆಲಸ
ಹಿರಿಯ ಪೊಲೀಸ್ ಅಧಿಕಾರಿಗಳು ಕೊಟ್ಟಿದ್ದ ಮಾಹಿತಿ ಆಧರಿಸಿ ಮಾತನಾಡಿದ ಬೊಮ್ಮಾಯಿ ಅವರು, ಪ್ರಕರಣ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆರಂಭದಲ್ಲಿ ಗುಂಪು ಸೇರಿದಾಗಲೂ ಅಲ್ಲಿನ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕೂಡಾ ನವೀನ್ ಎಂಬಾತನನ್ನು ಬಂಧನ ಮಾಡುತ್ತೇವೆ ಎಂದಿದ್ದಾರೆ. ಆದರೆ ಅಲ್ಲಿ ಸೇರಿದ್ದ ಗುಂಪು, ನವೀನನ್ನು ನಮಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ. ಒಂದು ವೇಳೆ ನವೀನ್ ಆ ಗುಂಪಿನ ಕೈಗೆ ಸಿಕ್ಕಿದ್ದರೆ ಏನಾಗುತ್ತಿತ್ತು ಎಂಬುದನ್ನು ನೀವು ಉಹಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಎಫ್ಐಆರ್ ಕಾರಣವಲ್ಲ
ಆ ಗುಂಪಿನ ದೊಂಬಿಯ ಮಧ್ಯೆಯೂ ಎಫ್ಐಆರ್ ಹಾಕಲಾಗಿದೆ. ಅಂದು ಸಂಜೆ 5.40ಕ್ಕೆ ನವೀನ್ ಎಂಬ ಹುಡುಗ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದನ್ನಾಧರಿಸಿ ಫಿರೋಜ್ ಪಾಷಾ ಎಂಬುವರು ಸಂಜೆ 7.30ಕ್ಕೆ ದೂರು ಕೊಟ್ಟಿದ್ದಾರೆ. ಅದಾದ ಬಳಿಕ ಹದಿನೈದು ನಿಮಿಷಗಳಲ್ಲಿ ಅಂದರೆ 7.45ಕ್ಕೆ ಎಫ್ಐಅರ್ ದಾಖಲಾಗಿದೆ.

ನಿರ್ಧಾಕ್ಷಿಣ್ಯ ಕ್ರಮ
ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ನ್ಯಾಯ ಸಮ್ಮತವಾದ ತನಿಖೆ ಮುಂದುವರೆಸಿ ಎಂದಿದ್ದಾರೆ. ಗಲಭೆಗೆ ಕಾರಣರಾದವರನ್ನು ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಿ ಎಂದು ಸೂಚಿಸಿದ್ದಾರೆ. ಯಾರು ದೊಂಬಿ ಮಾಡಿದ್ದಾರೊ ಅವರಿಂದಲೇ ನಷ್ಠ ವಸೂಲಿ ಮಾಡಿಯೇ ತಿರುತ್ತೇವೆ. ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ ಸ್ಥಳೀಯ ರಾಜಕಾರಣಿಗಳ ಪಾತ್ರ ಇದೆ ಎಂಬುದೂ ಗೊತ್ತಾಗಿದೆ, ಅವರನ್ನೂ ಬಂಧನ ಮಾಡಿದ್ದೇವೆ. ಅವರೊಂದಿಗೆ ದೊಡ್ಡ ರಾಜಕಾರಣಿಗಳ ಕೈವಾಡ ಇದೆಯಾ? ಇಲ್ಲವಾ? ಎಂಬುದು ತನಿಖೆಯಲ್ಲಿ ತಿಳಿಯಲಿದೆ.

ಗಲಭೆ ಹಿಂದೆ ರಾಜಕೀಯ
ಹಿಂದೆ ನಡೆದ ಚುನಾವಣೆಯಲ್ಲಿ ಸಂಭವಿಸಿದ ಬಿರುಕು, ಭಿನ್ನಾಭಿಪ್ರಾಯ ಹಾಗೂ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಗಲಭೆ ಮಾಡಿದ್ದಾರೆ. ಗಲಭೆ ಹಿಂದೆ ರಾಜಕೀಯ ಭಿನ್ನಾಭಿಪ್ರಾಯ ಇದೆ ಎಂಬುದೂ ಬೆಳಕಿಗೆ ಬಂದಿದೆ. ಜೊತೆಗೆ ಎಸ್ಡಿಪಿಐ ಕೂಡಾ ಗಲಭೆಗೆ ಕಾರಣವಾಗಿದೆ. ಈ ಗಲಭೆಯಲ್ಲಿ ಎಸ್ಡಿಪಿಐ ಪಾತ್ರ ಏನಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ವ್ಯಾಪ್ತಿಯಲ್ಲಿ ಪರಿಸ್ಥಿತಿ ಇದೀಗ ಶಾಂತವಾಗಿದ್ದು, ಸಂಪೂರ್ಣ ನಿಯಂತ್ರಣದಲ್ಲಿದೆ. ಈಗಾಗಲೇ ಅಲ್ಲಿ ಸಾಕಷ್ಟು ಭದ್ರತೆಯನ್ನೂ ಹಾಕಿದ್ದೇವೆ. ಸದ್ಯ ಜಾರಿಯಲ್ಲಿರುವ ಕರ್ಫ್ಯೂ ಅಗಸ್ಟ್ 15ವರಗೆ ವಿಸ್ತರಣೆ ಮಾಡಲಾಗಿದೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications