ಕಾಳಿ ದೇವತೆ ಅವಹೇಳನ ಮಾಡಿದ ಟ್ವಿಟ್ಟರ್ ಮತ್ತು ನಾಸ್ತಿಕ ಅರ್ಮಿನ್ ನವಾಬಿ ವಿರುದ್ಧ ಎಫ್ಐಆರ್ !
ಬೆಂಗಳೂರು, ಡಿಸೆಂಬರ್ 30: ಹಿಂದೂಗಳ ಆರಾಧ್ಯ ದೇವತೆ ಕಾಳಿಕಾ ದೇವಿ ಅರೆನಗ್ನ ಚಿತ್ರ ಪೋಸ್ಟ್ ತೆಗೆಯದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಜಾಲ ತಾಣ ಟ್ವಿಟ್ಟರ್ ಸಂಸ್ಥೆ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ.
ಅಶ್ಲೀಲ ಪೋಸ್ಟ್ ಹಾಕಿದ್ದ ಅರ್ಮಿನ್ ನವಾಬಿ, ಟ್ವಿಟ್ಟರ್ ಸಂಸ್ಥೆ, ಅದರ ಸಿಇಓ ಜಾಕ್ ಡೋರ್ಸಿ, ಭಾರತದ ನಿರ್ದೇಶಕರಾದ ಮಹೀಮ್ ಕೌಲ್, ಮನೀಷ್ ಮಹೇಶ್ವರಿ, ಮಾಯ ಹರಿ ಸೇರಿದಂತೆ ಏಳು ಮಂದಿಯ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ.
ಕೆ.ಆರ್. ಪುರಂ ಬಸವನಪುರ ನಿವಾಸಿ ಕಿರಣ್ ಆರಾಧ್ಯ ಎಂಬುವರು ಈ ಕುರಿತು ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಐಟಿ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸಲು ಆದೇಶಿಸಿದೆ. ಆರೋಪಿ ಅರ್ಮಿನ್ ನವಾಬಿ ಮತ್ತು ಟ್ವಿಟ್ಟರ್ ಸಂಸ್ಥೆ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ 67(a) ಹಾಗೂ ಐಪಿಸಿಯ 292a 295a, ಹಾಗೂ 298 ಕಾಯ್ದೆಯಡಿ ಎಫ್ ಐ ಆರ್ ದಾಖಲಾಗಿದೆ.
ಕಾಳಿಕಾ ದೇವಿಯ ಅಶ್ಲೀಲ ಚಿತ್ರಗಳನ್ನು ಹಾಕಿ ತ ಸೆಕ್ಸಿ ಗಾಡ್ಗಳು ಇರುವ ನಾನು ಹಿಂದೂಧರ್ಮವನ್ನು ಪ್ರೀತಿಸುತ್ತಿದ್ದೀನಿ ಎಂದು ಅರ್ಮಿನ್ ನವಾಬಿ ಎಂಬುವ ಅವಹೇಳನ ಮಾಡಿದ್ದ. ಹಿಂದೂ ದೇವತೆ ಅವಹೇಳನ ಪೋಸ್ಟ್ ತೆಗೆಯುವಂತೆ ಕಿರಣ್ ಆರಾಧ್ಯ ಟ್ವಿಟ್ಟರ್ ಸಂಸ್ಥೆಗೆ ಹಲವಾರು ಬಾರಿ ಮನವಿ ಮಾಡಿದ್ದರು. ಯಾವುದೇ ಕ್ರಮ ಜರುಗಿಸಿರಲಿಲ್ಲ.
ನಲವತ್ತು ದಿನಗಳ ಬಳಿಕ ಅರ್ಮಿನ್ ನವಾಬಿಯ ಟ್ವಿಟ್ಟರ್ ಖಾತೆ ರದ್ದು ಪಡಿಸಿ ಕೆಲವೇ ದಿನಕ್ಕೆ ಪುನಃ ಚಾಲ್ತಿ ನೀಡಿದ್ದರು. ಮತ್ತೆ ಹಿಂದೂ ದೇವತೆಗಳ ಬಗ್ಗೆ ಅವಹೇಳನ ಮಾಡಿ ಪೋಸ್ಟ್ ಗಳನ್ನು ಹಾಕಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ. ಈ ಕುರಿತು ಕಿರಣ್ ಆರಾಧ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಇದೀಗ ಟ್ವಿಟ್ಟರ್ ಸಂಸ್ಥೆ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.
ಅರ್ಮಿನ್ ನವಾಬಿ ಕೆನಡಾ ಮೂಲದ ನಾಸ್ತಿಕ. ಇವನು ಥೆಹರಾನ್ ಮೂಲದವ. ಮೊದಲು ದೇವರು, ಸ್ವರ್ಗ, ನರಕದ ಬಗ್ಗೆ ನಂಬಿಕೆ ಇಟ್ಟಿದ್ದ. ಚಿಕ್ಕಂದಿನಲ್ಲೇ ಶಾಲೆಯ ಕಿಟಕಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಥೆಹರಾನ್ ನ ವಿವಿಯಲ್ಲಿ ಪದವಿ ಪಡೆದಿದ್ದ. ದೇವರ ಮೇಲೆ ನಂಬಿಕೆ ಕಳೆದುಕೊಂಡು ನಾಸ್ತಿಕನಾಗಿ ಬದಲಾಗಿದ್ದ.ಕೆನಡಾದ ಪೌರತ್ವ ಪಡೆದ ಬಳಿಕ ಆತ 2014 ರಲ್ಲಿ ಯಾಕೆ ದೇವರು ಇಲ್ಲ ಎಂಬ ಪುಸ್ತಕವನ್ನು ಹೊರತಂದಿದ್ದ. ಇದಕ್ಕೂ ಮೊದಲು ಆರ್ಕುಟ್ ಮತ್ತು ಫೇಸ್ ಬುಕ್ ಪುಟಗಳಲ್ಲಿ ಇರಾನಿಯ ನಾಸ್ತಿಕರು ಎಂಬ ಗುಂಪು ರಚಿಸಿ ದೇವರುಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ. ಇದೀಗ ಬೆಂಗಳೂರಿನಲ್ಲೂ ಅರ್ಮಿನ್ ನವಾಬಿ ಹುಚ್ಚಾಟಕ್ಕೆ ಕೇಸು ದಾಖಲಾಗಿದೆ.