ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದರೆ ಎಫ್ಐಆರ್
ಬೆಂಗಳೂರು, ಜುಲೈ 23 : ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ನೌಕರಿ ಪಡೆದ ಅಧಿಕಾರಿ ಮತ್ತು ಸಿಬ್ಬಂದಿಗಳು 569 ಜನ ಆಗಿದ್ದು, ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಿ, ಅವರನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಎಚ್. ಆಂಜನೇಯ ಎಚ್ಚರಿಕೆ ನೀಡಿದ್ದಾರೆ.
ಅವರು ವಿಧಾನಸಭೆಯಲ್ಲಿ ಗುರುವಾರ ಮಹಾಲಕ್ಷ್ಮೀಲೇಔಟ್ ಶಾಸಕ ಕೆ. ಗೋಪಾಲಯ್ಯ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರವಿದು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಪಡೆದವರ ವಿರುದ್ಧ ದೂರು ಮಾಹಿತಿ ಸಿಕ್ಕ ತಕ್ಷಣವೇ ವಿಚಾರಣೆ ಕೈಗೊಳ್ಳಲಾಗುವುದು. ವಿಚಾರಣೆ ಸಾಬೀತಾದಲ್ಲಿ ಆರೋಪಿತರನ್ನು ಬಂಧಿಸಿ, ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಂಡು ಅವರ ಆರ್ಥಿಕ ಸೌಲಭ್ಯವನ್ನು ಹಿಂಪಡೆಯಲಾಗುವುದು ಎಂದು ಉತ್ತರಿಸಿದರು.

220 ನ್ಯಾಯಬೆಲೆ ಅಂಗಡಿ ರದ್ದು : ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ವಿತರಿಸುತ್ತಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿದೆ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ರಾಜ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶ್ನೋತ್ತರ ವೇಳೆಯಲ್ಲಿ ಪುಲಿಕೇಶಿನಗರ ಶಾಸಕ ಆರ್. ಅಖಂಡ ಶ್ರೀನಿವಾಸಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದರು.
ಅನ್ನಭಾಗ್ಯ ಯೋಜನೆಯ ಜಾರಿಯಾದ 2013ರ ಜೂನ್ನಿಂದ ಪಡಿತರ ಪದಾರ್ಥಗಳನ್ನು ಸಮರ್ಪಕವಾಗಿ ಪಡಿತರ ಚೀಟಿದಾರರಿಗೆ ವಿತರಿಸದ ನ್ಯಾಯಬೆಲೆ ಅಂಗಡಿ, ಚಿಲ್ಲರೆ ಸೀಮೆಎಣ್ಣೆ ವಿತರಕರ ಮೇಲೆ ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, 220 ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಲಾಗಿದೆ. 10 ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಕರಿಗಾಗಿ ಕಮ್ಮಟ : ಬೆಂಗಳೂರು ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ವರ್ಣಗಳಿಗೆ ಸಂಬಂಧಪಟ್ಟ ವೈಜ್ಞಾನಿಕ ವಿಷಯಗಳನ್ನು ಕ್ರಮಬದ್ದವಾಗಿ ತಿಳಿಸಿಕೊಡುವುದು ಹಾಗೂ ಪ್ರೌಢಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳನ್ನೊಳಗೊಂಡ ಚಟುವಟಿಕೆ ಮತ್ತು ಪ್ರಯೋಗಗಳ ಮೂಲಕ ವರ್ಣಗಳ ಬಗ್ಗೆ ತಿಳಿಸುವುದಕ್ಕಾಗಿ ಶಿಕ್ಷಕರಿಗಾಗಿ ಕಮ್ಮಟ, ವರ್ಣಗಳು ಕಾರ್ಯಾಗಾರದ ಉದ್ದೇಶ.
ಕಾರ್ಯಾಗಾರದಲ್ಲಿ ಎಂಟರಿಂದ ಹತ್ತನೆಯ ತರಗತಿಯ ವಿಜ್ಞಾನ ಶಿಕ್ಷಕರು ಅರ್ಹರಾಗಿದ್ದು, ಜುಲೈ 23ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30 ಗಂಟೆವರೆಗೆ ನಗರದ ಹೈಗ್ರೌಂಡ್ಸ್ನ ಟಿ. ಚೌಡಯ್ಯ ರಸ್ತೆಯ ಜವಾಹರ್ಲಾಲ್ ನೆಹರು ತಾರಾಲಯದಲ್ಲಿ ಹಮ್ಮಿಕೊಂಡಿದೆ.












Click it and Unblock the Notifications