ಎಎಪಿಗೆ ನಿರ್ದೇಶಕ, ನಿರ್ಮಾಪಕ ನಾರಿ ಶ್ರೀನಿವಾಸ್ ಸೇರ್ಪಡೆ
ಬೆಂಗಳೂರು ಸೆಪ್ಟಂಬರ್ 09: ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಹಾಗೂ ಜೋಹಾರ್ ಪಬ್ಲಿಕೇಷನ್ಸ್ ಪ್ರಕಾಶಕ ನಾರಿ ಶ್ರೀನಿವಾಸ್ರವರು ಶುಕ್ರವಾರ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.
ಬೆಂಗಳೂರಿನಲ್ಲಿ ನಡೆದ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ರವರು ನಾರಿ ಶ್ರೀನಿವಾಸ್ರವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, ಬಳ್ಳಾರಿ ಮೂಲದವರಾದ ನಾರಿ ಶ್ರೀನಿವಾಸ್ರವರು ಐದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಎರಡು ಸಿನಿಮಾಗಳಿಗೆ ನಿರ್ಮಾಪಕರಾಗಿ ಹಣ ಹೂಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಯುವಕರಿಗೆ ಫೋಟೋಗ್ರಫಿ ಕಲಿಸಿ ಅವರಿಗೆ ಜೀವನ ಕಟ್ಟಿಕೊಳ್ಳಲು ಶ್ರೀನಿವಾಸ್ ನೆರವಾಗಿದ್ದಾರೆ ಎಂದರು.

ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಆರ್ಥಿಕವಾಗಿ ನೆರವಾಗುವುದು, ಅವರಿಗೆ ಆಹಾರ ವಿತರಣೆ ಸೇರಿದಂತೆ ಅನೇಕ ರೀತಿಯಲ್ಲಿ ಅವರು ಸ್ಪಂದಿಸಿದ್ದಾರೆ. ಕೋವಿಡ್ ಲಾಕ್ಡೌನ್ ಸಮಯದಲ್ಲಿ ತಮ್ಮ ಮನೆಯಲ್ಲೇ ಆಹಾರ ತಯಾರಿಸಿ ಹಸಿದವರಿಗೆ ವಿತರಿಸಿದ್ದಾರೆ. ಇಂತಹ ಜನಪರ ಕಾಳಜಿಯುಳ್ಳವರು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ಸಂತಸದ ಸಂಗತಿ ಎಂದು ಅವರು ತಿಳಿಸಿದರು.
ಎಎಪಿಯಿಂದಲೇ ಸರ್ಕಾರಿ ಶಾಲೆ ಅಭಿವೃದ್ಧಿ:ನಾರಿ
ಪಕ್ಷಕ್ಕೆ ಸೇರ್ಪಡಯಾಗಿ ಮಾತನಾಡಿದ ನಾರಿ ಶ್ರೀನಿವಾಸ್, ''ರಾಜ್ಯವನ್ನಾಳಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಿವೆ. ಇದರ ಪರಿಣಾಮವಾಗಿ ಶ್ರೀಮಂತ ಕುಟುಂಬಗಳ ಮಕ್ಕಳಿಗೆ ಮಾತ್ರ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ'' ಎಂದು ಬೇಸರ ವ್ಯಕ್ತಪಡಿಸಿದರು.
''ಬಡ ಹಾಗೂ ಮಧ್ಯಮ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತು, ಇವರೂ ಕೂಡ ವೈದ್ಯರು ಹಾಗೂ ಎಂಜಿನಿಯರ್ ಆಗಬೇಕಾದರೆ ಆಮ್ ಆದ್ಮಿ ಪಾರ್ಟಿಯೇ ಅಧಿಕಾರಕ್ಕೆ ಬರಬೇಕು. ನಮ್ಮ ಪಕ್ಷ ಒಂದೇ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದೆ. ದೆಹಲಿಯಲ್ಲಿ ಎಎಪಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿ ತೋರಿಸಿದೆ'' ಎಂದು ಅವರು ತಿಳಿಸಿದರು.

ಹತ್ತು ಮಂದಿ ಎಎಪಿ ಸೇರ್ಪಡೆ
ಗುರುವಾರವಷ್ಟೇ ಆಮ್ ಆದ್ಮಿ ಪಕ್ಷಕ್ಕೆ ಸುಮಾರು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರ ಹತ್ತು ಮಂದಿ ನಾಯಕರ ಮೇಗಾ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಕುರುಬ ಸಮುದಾಯ ಕಾಂಗ್ರೆಸ್ ಮುಖಂಡ ಶಿವರಾಯಪ್ಪ ದೊಡ್ಡರಿಯಪ್ಪ ಜೋಗಿನ್, ಬಿಜೆಪಿಯ ಬಾಗಕೋಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಕೋಮರ್, ನಾಗರತ್ನ ಶಿಕ್ಷಣ ಮತ್ತು ಕಲ್ಯಾಣ ಸೇವೆಗಳ ಸಂಸ್ಥೆಯ ಮುಖ್ಯಸ್ಥ ಅನಿಲ್ ಕುಮಾರ್ ಬೇಗಾರ್, ಯುವ ಜನತಾದಳದ ಧಾರವಾಡ ಮಾಜಿ ಜಿಲ್ಲಾಧ್ಯಕ್ಷ ಸಂಜೀವ್ ಕುಮಾರ್ ಕುಲಕರ್ಣಿ, ಮಾಸ ಪತ್ರಿಕೆ ಪ್ರಧಾನ ಸಂಪಾದಕ ಸಾ.ಸಿ. ಬೆನಕನಳ್ಳಿ, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಗೀತಾ ಮಹಾಂತೇಶ್ ಯಾದಗಿ ಸೇರಿದಂತೆ ಹತ್ತಾರು ಮಂದಿ ಇತ್ತೀಚೆಗೆ ಎಎಪಿ ಸೇರಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.












Click it and Unblock the Notifications