ಹಣಕ್ಕಾಗಿ ತಂದೆಯಿಂದಲೇ ಮಗಳ ಕೊಲೆ, ಆರೋಪಿ ಬಂಧನ
ಬೆಂಗಳೂರು, ಜನವರಿ 23: ಹಣದ ಆಸೆಗೆ ಹೆತ್ತ ತಂದೆಯೇ ತನ್ನ ಗರ್ಭಿಣಿ ಮಗಳನ್ನು ಅಮಾನುಷವಾಗಿ ಕೊಂದಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ನಿವಾಸಿ ಚಿಕ್ಕಬ್ಯಾಟಪ್ಪ ತನ್ನ ಕೆಲವು ಅಪರಾಧಿ ಮನಸ್ಸಿನ ಗೆಳೆಯರ ಜೊತೆ ಸೇರಿಕೊಂಡು ಹಣಕ್ಕಾಗಿ ಮಗಳು ವೀಣಾ (24)ಳನ್ನು ಕೊಲೆ ಮಾಡಿದ್ದಾನೆ.
ಚಿಕ್ಕಬ್ಯಾಟಪ್ಪ ತನ್ನ ಮಗಳು ವೀಣಾಳನ್ನು ರಾಮನಗರದ ಪಾರ್ಥ ಎಂಬುವರಿಗೆ ಮದುವೆ ಮಾಡಿ ಕೊಟ್ಟಿದ್ದ, ಮಗಳು ನಾಲ್ಕು ತಿಂಗಳು ಗರ್ಭಿಣಿ ಆದ ಕಾರಣ ಬಾಣಂತನಕ್ಕೆಂದು ತವರಿಗೆ ಬಂದಿದ್ದಳು. ಚಿಕ್ಕಬ್ಯಾಟಪ್ಪ ಇತ್ತೀಚೆಗಷ್ಟೆ ಎರಡು ಕೋಟಿ ರೂಪಾಯಿಗೆ ತನ್ನ ಜಮೀನು ಮಾರಿದ್ದ. ಅದರಲ್ಲಿ ಒಂದು ಕೋಟಿಯನ್ನು ಮಗಳಿಗೆ ಕೊಟ್ಟಿದ್ದರು, ಉಳಿದ ಒಂದು ಕೋಟಿಯನ್ನು ತಾನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಲಕ್ಷ್ಮಿ ಎಂಬುವರಿಗೆ ಕೊಟ್ಟಿದ್ದ.

ಮಗಳಿಗೆ ನೀಡಿದ್ದ ಒಂದು ಕೋಟಿ ಹಣ ಹಾಗೂ ಆಕೆಯ ಹೆಸರಿನಲ್ಲಿ ಇದ್ದ ಉಳಿಕೆ ಜಮೀನನ್ನು ಲಪಟಾಯಿಸುವ ದುರಾಸೆಯಿಂದ ಇದೇ ತಿಂಗಳ 11ರಂದು ಮನೆಯಲ್ಲಿಯೇ ತನ್ನ ಸಹವರ್ತಿಗಳ ಜೊತೆ ಸೇರಿ ಮಗಳಿಗೆ ವಿಷ ಉಣಿಸಿ ಹಾಗೂ ಇಂಜೆಕ್ಷನ್ ನೀಡಿ ಕೊಂದಿದ್ದರು. ಬಳಿಕ ಆ ಪ್ರಕರಣವನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಕಗ್ಗಲೀಪುರ ಠಾಣಾ ಪೊಲೀಸರು ಅನುಮಾನಗೊಂಡು ಚಿಕ್ಕಬ್ಯಾಟಪ್ಪನನ್ನು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಂದಿದೆ. ಚಿಕ್ಕಬ್ಯಾಟಪ್ಪನ ಜೊತೆಗೆ ಕೊಲೆ ಮಾಡಲು ಆತನಿಗೆ ಸಹಾಯ ಮಾಡಿದ ಲಕ್ಷ್ಮಿ, ಇಸ್ಮಾಯಿಲ್ ಖಾನ್ ಹಾಗೂ ಮುನಿರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications