Get Updates
Get notified of breaking news, exclusive insights, and must-see stories!

ಪುನೀತ್ ಅಂತಿಮ ದರ್ಶನ ವೇಳೆ ಅಭಿಮಾನಿಗಳ ನೂಕು ನುಗ್ಗಲು: ಲಘು ಲಾಠಿ ಪ್ರಹಾರ

ಬೆಂಗಳೂರು, ಅ. 29: ಅಭಿಮಾನಿಗಳನ್ನೇ ದೇವರು ಎಂದು ಪೂಜಿಸುತ್ತಿದ್ದ ನಟ ಪುನೀತ್ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದಾರೆ. ಅಪ್ಪು ಹೆಸರು ಕೂಗಿ ಗೋಳಾಡುವವರ ಅಕ್ರಂದನ ಮುಗಿಲು ಮುಟ್ಟಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಲಘು ಲಾಠಿ ಬೀಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.

ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಅವಕಾಶ ಕೊಟ್ಟ ಕ್ಷಣ ಕಂಠೀರವ ಕ್ರೀಡಾಂಗಣದ ಬಳಿ ಕಂಡು ಬಂದ ದೃಶ್ಯವಿದು. ಸದಾಶಿವನಗರದ ಪುನೀತ್ ಅವರ ಮನೆ ಮುಂದೆ ಕುಟುಂಬಸ್ಥರು ಅಂತಿಮ ದರ್ಶನ ಪಡೆದ ಬಳಿಕ ಕಂಠೀರವ ಸ್ಟೇಡಿಯಂ ಬಳಿ ಮೃತದೇಹವನ್ನು ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಗಣ್ಯರಿಗೆ ಅವಕಾಶ ನೀಡಿದ ಬೆನ್ನಲ್ಲೇ ಸಾವಿರಾರು ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲು ಕೂಗಾಡಿದರು. ಚೀರಾಡಿದರು. ಕನ್ನಡದ ಧ್ವಜ ಹಿಡಿದು ಅಭಿಮಾನ ಮೆರೆದರು.

ನೂಕು ನುಗ್ಗುಲು: ಅಂತಿಮ ದರ್ಶನಕ್ಕೆ ಅವಕಾಶ ಕೊಡುವಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅವಕಾಶ ಕಲ್ಪಿಸಲಾಯಿತು. ಈ ವೇಳೆ ನೂಕು ನುಗ್ಗಲು ಶುರುವಾಗಿ ತಳ್ಳಾಟ ಆರಂಭವಾಯಿತು. ಕಂಠೀರವ ಕ್ರಿಡಾಂಗಣದಲ್ಲಿ ಅಭಿಮಾನಿಗಳ ಜನ ಸಾಗರವೇ ಸೇರಿದ್ದು, ಸರತಿ ಸಾಲಿನಲ್ಲಿ ತೆರಳಿ ಅಂತಿಮ ನಮನ ಸಲ್ಲಿಸಿದರು. ರಾಜಕಾರಣಿಗಳು ಹಾಗೂ ಗಣ್ಯರಿಗೆ ಪ್ರತ್ಯೇಕವಾಗಿ ತೆರಳಿ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿತ್ತು.

Fans Throng to Kanteerava Stadium to pay last respect to Actor Puneeth Rajkumar

ಶನಿವಾರವೂ ಅಂತಿಮ ದರ್ಶನಕ್ಕೆ ಅವಕಾಶ: ಇನ್ನು ರಾಜ್ಯದ ನಾನಾ ಭಾಗದಿಂದ ಅಪ್ಪು ಅಭಿಮಾನಿಗಳು ಹರಿದು ಬರುತ್ತಿದ್ದು, ಶನಿವಾರ ಕೂಡ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಪುನೀತ್ ಅವರ ಅಂತ್ಯ ಸಂಸ್ಕಾರದ ತೀರ್ಮಾನ ತೆಗೆದುಕೊಳ್ಳಲಿದೆ. ಒಂದು ವೇಳೆ ಅಭಿಮಾನಿಗಳು ಜಾಸ್ತಿಯಾದಲ್ಲಿ ಭಾನುವಾರ ಬೆಳಗ್ಗೆ ಅಂತ್ಯ ಸಂಸ್ಕಾರ ನೆರವೇರಿಸಲು ಸರ್ಕಾರ ನಿರ್ಧರಿಸಿದೆ.

ಡಾ. ರಾಜ್ ಪಕ್ಕದಲ್ಲೇ ಸಮಾಧಿ: ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮನ ಅಚ್ಚುಮೆಚ್ಚಿನ ಪುತ್ರ ಪುನೀತ್ ರಾಜ್ ಕುಮರ್. ಅದರಲ್ಲೂ ರಾಜ್ ಕುಮಾರ್‌ಗಂತೂ ಪುನೀತ್ ಅಂದರೆ ಪಂಚ ಪ್ರಾಣ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಡಾ. ರಾಜ್ ನಿಧನದ ಬಳಿಕ ಪುನೀತ್ ನಟನೆಯಲ್ಲಿ ರಾಜ್‌ನನ್ನು ಅಭಿಮಾನಿಗಳು ಕಂಡುಕೊಂಡಿದ್ದರು. ಅಪ್ಪನ ಹಾದಿಯಲ್ಲೇ ಸಾಗುತ್ತಿದ್ದ ಪುನೀತ್ ಇಡೀ ಕುಟುಂಬ ನೋಡುವಂತಹ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರು ಬಿಟ್ಟರೆ, ಕತ್ತಿ, ಮಚ್ಚು, ರೌಡಿಸಂ ಸಿನಿಮಾಗಳಿಂದ ದೂರವೇ ಉಳಿದಿದ್ದರು. ಇನ್ನು ಅನಾಥ ಮಕ್ಕಳ ಹಾರೈಕೆ, ಬಡ ಮಕ್ಕಳ ವಿದ್ಯಾಭ್ಯಾಸ, ವೃದ್ಧಾಶ್ರಮಗಳನ್ನು ಪೋಷಣೆ ಮಾಡುವ ಮೂಲಕ ಉದಾರತೆ ಮೆರೆದು ರಾಜ್ ಕುಮಾರ್ ನ ಪ್ರತಿರೂಪದಂತೆ ಬದುಕನ್ನು ರೂಪಿಸಿಕೊಂಡಿದ್ದರು.

ಹೀಗಾಗಿ ಪುನೀತ್ ಅವರ ಸಮಾಧಿಯನ್ನು ಕೂಡ ಡಾ. ರಾಜ್ ಸಮಾಧಿ ಬಳಿಯೇ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಮೊದಲು ಬಿಡದಿ ರಸ್ತೆಯಲ್ಲಿರುವ ಪುನೀತ್ ಫಾರಂಹೌಸ್ ಬಳಿ ಅಂತಿಮ ಕ್ರಿಯೆ ನೆರವೇರಿಸಲು ಚಿಂತನೆ ಮಾಡಿದರೂ ಅಂತಿಮವಾಗಿ ನಂದಿನಿ ಬಡಾವಣೆ ಸಮೀಪ ಇರುವ ಕಂಠೀರವ ಸ್ಟುಡಿಯೋ ರಾಜ್ ಸ್ಮಾರಕ ಬಳಿಯೇ ಪುನೀತ್ ಅವರ ಅಂತ್ಯಕ್ರಿಯೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಅಧಿಕೃತ ಆದೇಶ ಕೂಡ ಸರ್ಕಾರ ಹೊರಡಿಸಿದೆ.

ಟ್ರಾಫಿಕ್ ಜಾಮ್: ಪುನೀತ್ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬೆನ್ನಲ್ಲೇ ಕಾರ್ಪೋರೇಷನ್ ವೃತ್ತದ ಸಮೀಪ ಟ್ರಾಫಿಕ್ ಜಾಮ್ ಆಗಿದೆ. ಕಂಠೀರವ ಕ್ರೀಡಾಂಗಣ ಸುತ್ತಲೂ ಅಭಿಮಾನಿಗಳು ಜಮಾಯಿಸಿದ್ದಾರೆ. ರಾಜ್ಯದ ನಾನಾ ಕಡೆಯಿಂದ ಅಭಿಮಾನಿಗಳ ದಂಡೇ ಆಗಮಿಸುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ.

Recommended Video

      ಪುನೀತ್ ಸಾವಿಗೆ ಕಾರಣವಾಗಿದ್ದು ಇದೇ... | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+