ವಿದ್ಯಾರ್ಥಿನಿಗೆ ವಂಚಿಸಿದ್ದ ನಕಲಿ ಜ್ಯೋತಿಷಿ ಬಂಧನ
ಬೆಂಗಳೂರು, ಅಕ್ಟೋಬರ್ 21 : ನೆನೆಪಿನ ಶಕ್ತಿ ಹೆಚ್ಚಾಗಲು ಔಷಧ ನೀಡುವುದಾಗಿ ಚಿನ್ನವನ್ನು ಪಡೆದು ವಂಚನೆ ಮಾಡಿದ ನಕಲಿ ಜ್ಯೋತಿಷಿಯನ್ನು ಬೆಂಗಳೂರಿನಲ್ಲಿ ಬುಧವಾರ ಬಂಧಿಸಲಾಗಿದೆ. ಜ್ಯೋತಿಷಿಯಿಂದ ವಂಚನೆಗೊಳಗಾದ ಪಿಯುಸಿ ವಿದ್ಯಾರ್ಥಿನಿ ಈತನ ಬಗ್ಗೆ ದೂರು ನೀಡಿದ್ದಳು.
ರಾಜಗೋಪಾಲನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಾಗಲಕೋಟೆ ಮೂಲದ ಗಣೇಶ್ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಭಾಗಿಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರೆದಿದೆ. [ಹಣ ದೋಚುತ್ತಿದ್ದ ನಕಲಿ ಸ್ವಾಮೀಜಿ ಸರೆ]

ಘಟನೆ ವಿವರ : ಬಂಧಿತ ಆರೋಪಿ ಗಣೇಶ್ ಪತ್ರಿಕೆಗಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವ ಔಷಧಿ ಕೊಡುತ್ತೇನೆ ಎಂದು ಜಾಹೀರಾತು ನೀಡುತ್ತಿದ್ದ. ಇದನ್ನು ನೋಡಿದ ಪಿಯಸಿ ವಿದ್ಯಾರ್ಥಿನಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಬರಬೇಕು ಎಂಬ ಕಾರಣಕ್ಕೆ ಗಣೇಶ್ ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಳು. [ಕೊಪ್ಪಳದಲ್ಲಿ ಸಿಕ್ಕಿಬಿದ್ದ ನಕಲಿ ಕಾಮಿ ಸ್ವಾಮಿ]
ಆಗ ಗಣೇಶ್ ಇದಕ್ಕೆ ಪೂಜೆ ಮಾಡಿಸಬೇಕು. ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ವಿದ್ಯಾರ್ಥಿನಿಗೆ ತಿಳಿಸಿದ್ದ. ಹಣವಿಲ್ಲವೆಂದು ಹೇಳಿದ್ದರಿಂದ ಮನೆಯಿಂದ ಚಿನ್ನವನ್ನು ತಂದುಕೊಡುವಂತೆ ಸೂಚಿಸಿದ್ದ. ಗಣೇಶ್ ಮಾತನ್ನು ನಂಬಿದ ವಿದ್ಯಾರ್ಥಿನಿ ಮನೆಯಿಂದ 80 ಗ್ರಾಂ ಚಿನ್ನವನ್ನು ತಾಯಿಗೆ ತಿಳಿಯದಂತೆ ತಂದು ಕೊಟ್ಟಿದ್ದಳು.
ಆದರೆ, ಯಾವುದೇ ಔಷಧ ಕೊಡದೇ ಗಣೇಶ್ ವಂಚಿಸಿದ್ದ. ಅಲ್ಲದೇ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ರಕ್ತಕಾರಿ ಸಾಯುತ್ತೀಯಾ ಎಂದು ವಿದ್ಯಾರ್ಥಿನಿಗೆ ಬೆದರಿಸಿದ್ದ. ವಿದ್ಯಾರ್ಥಿನಿ ಈ ವಿಚಾರವನ್ನು ತಾಯಿಗೆ ತಿಳಿಸಿದ್ದಳು.
ನಂತರ ತಾಯಿಯೊಂದಿಗೆ ಬಂದು ವಂಚನೆಗೊಳಗಾದ ವಿದ್ಯಾರ್ಥಿನಿ ರಾಜಗೋಪಾಲನಗರ ಪೊಲೀಸರಿಗೆ ದೂರು ಕೊಟ್ಟಿದ್ದಳು. ದೂರಿನ ಅನ್ವಯ ಪೊಲೀಸರು ಗಣೇಶ್ನನ್ನು ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.












Click it and Unblock the Notifications