ಲೇಖಕ ವಿಆರ್ ಭಟ್ ಮೇಲೆ ಗೂಂಡಾ ಕಾಯ್ದೆ ಪ್ರಯೋಗ
ಬೆಂಗಳೂರು, ಆ.3: ಸಾಮಾಜಿಕ ಜಾಲ ತಾಣ ಫೇಸ್ಬುಕ್ನಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ್ದ, ಬರಹಗಾರ ವಿ.ಆರ್.ಭಟ್ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ವಿಆರ್ ಭಟ್ ಅವರ ಮೇಲೆ ಗೂಂಡಾ ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗುವುದು ಎಂಡು ಹೆಚ್ಚುವತಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ. ವಿಆರ್ ಭಟ್ ಪ್ರಕರಣ ಸೈಬರ್ ಭಯೋತ್ಪಾದನೆಗೆ ಸಮಾನಾಗಿದೆ ಎಂದಿದ್ದಾರೆ.
ಸಾಮಾಜಿಕ ಹಾಗೂ ಮಹಿಳಾ ಹೋರಾಟಗಾರ್ತಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿಯಾದ ಪ್ರಭಾ ಎನ್ ಬಿ ಅವರ ಫೇಸ್ ಬುಕ್ ಪೋಸ್ಟ್ ವೊಂದಕ್ಕೆ ವಿಆರ್ ಭಟ್ ಅವರು ಅವಹೇಳನಕಾರಿ ಕಾಮೆಂಟ್ ಹಾಕಿದ್ದರು. ಇದರ ವಿರುದ್ಧ ಪ್ರಭಾ ಅವರು ಚಂದ್ರಾಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.
ಪ್ರಭಾ ಅವರು ತಮ್ಮ ವಿರುದ್ಧ ಫೇಸ್ಬುಕ್ನಲ್ಲಿ ಅತ್ಯಾಚಾರ ಬೆದರಿಕೆ ಮತ್ತು ಅತ್ಯಾಚಾರಕ್ಕೆ ಪ್ರಚೋದನೆ ನೀಡಿದ್ದ ಭಟ್ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಪತ್ತೆಯಾಗಿದ್ದ ಭಟ್ ಹುಡುಕಾಟಕ್ಕೆ ನಾಲ್ಕು ತಂಡಗಳನ್ನು ರಚಿಸಿದ್ದರು. ಶನಿವಾರ ಯಶವಂತಪುರದಲ್ಲಿ ಭಟ್ ಅವರನ್ನು ಬಂಧಿಸಿದ್ದಾರೆ.
'ಸನಾತನ ಧರ್ಮ ಉಪಯೋಗಕ್ಕಿಲ್ಲ ಎಂಬ ಪ್ರಭಾ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದ ಭಟ್, ಸನಾತನ ಧರ್ಮದ ಮಹತ್ವ ತಿಳಿಯದ ನಿಮ್ಮಂಥವರ ಜುಟ್ಟು ಹಿಡಿದು ಅತ್ಯಾಚಾರ ಮಾಡಿದರೆ ಸರಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಫೇಸ್ಬುಕ್ನಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆ ಕಾಮೆಂಟ್ ತೆಗೆದು ಹಾಕಿದ್ದರು.

ಪೊಲೀಸ್ ಪತ್ರಿಕಾ ಪ್ರಕಟಣೆ ಈ ರೀತಿ ಇದೆ:
ದಿನಾಂಕ:27/07/2014 ರಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿಯಾದ ಶ್ರೀಮತಿ ಎನ್.ಪ್ರಭಾ ಬೆಳವಂಗಲ ಎಂಬುವರು ಜನರಲ್ಲಿ ಮೂಡನಂಬಿಕೆ ಮತ್ತು ಕಂದಾಚಾರಗಳನ್ನು ತೊಡೆದು ಹಾಕಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಬಗ್ಗೆ ಫೇಸ್ಬುಕ್ ನಲ್ಲಿ ವೈಜ್ಞಾನಿಕ ಸಂಶೋಧನೆ, ವೈಜ್ಞಾನಿಕ ಚಿಂತನೆ ಮತ್ತು ಶ್ರಮ ಸಂಸ್ಕೃತಿಯ ಶೀರ್ಷಿಕೆ ಅಡಿ ಫೇಸ್ಬುಕ್ ನಲ್ಲಿ ನೀಡಿದ್ದ ಸ್ಟೇಟಸ್ ಗೆ ಸಂಬಂಧಿಸಿದಂತೆ ಆಕೆ ಸ್ಟೇಟಸ್ ನ ಬಗ್ಗೆ ಕಟುವಾಗಿ ಹಾಗೂ ಆಶ್ಲೀಲವಾಗಿ ಪ್ರತಿಕ್ರಯಿಸಿ ಅತ್ಯಾಚಾರಕ್ಕೆ ಪ್ರಚೋದನೆ ನೀಡಿದ್ದ ಮತ್ತು ಬೈದು ಬೆದರಿಕೆ ಹಾಕಿದ್ದ ಆರೋಪಿತನಾದ ವಿಷ್ಣು.ಆರ್.ಭಟ್ ಬಿನ್ ರಾಮಚಂದ್ರಭಟ್, 45ವರ್ಷ, ವಾಸ.ನಂ.388, 19ನೇ ಮೈನ್, 4ನೇಬ್ಲಾಕ್, ನಂದಿನಿಲೇಔಟ್, ಬೆಂಗಳೂರು-96 ಎಂಬುವನನ್ನು ಬಂಧಿಸುವಲ್ಲಿ ಚಂದ್ರಾಲೇಔಟ್ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿ ವಿ.ಆರ್.ಭಟ್ ಮೂಲತಃ ಹೊನ್ನಾವರ ತಾಲ್ಲೂಕಿನ ಹಡಿನಬಾಳ ಗ್ರಾಮದವನಾಗಿದ್ದು, ಈತನು ಬೆಂಗಳೂರಿನಲ್ಲಿ ವಾಸವಿದ್ದುಕೊಂಡು ಸ್ವತಃ ಬರಹಗಾರನಾಗಿ ಮತ್ತು ಪತ್ರಕರ್ತನಾಗಿ ಕೆಲಸ ಮಾಡುತ್ತಾ ಫೇಸ್ಬುಕ್ ನಲ್ಲಿ ಪ್ರಕಟವಾಗುವ ಸ್ಟೇಟಸ್ ಗಳಿಗೆ ಪ್ರತಿಕ್ರಯಿಸುವ ಹವ್ಯಾಸ ಹೊಂದಿರುತ್ತಾನೆ. ಶ್ರೀಮತಿ ಪ್ರಭಾ.ಎನ್.ಬೆಳವಂಗಲ ರವರು ನೀಡಿದ್ದ ಸ್ಟೇಟಸ್ ಗೆ ಅಸಭ್ಯವಾಗಿ ಪ್ರತಿಕ್ರಯಿಸಿ ಅತ್ಯಾಚಾರಕ್ಕೆ ದುಷ್ಪ್ರೇರಣೆ ನೀಡಿದ್ದರ ಬಗ್ಗೆ ಆಕೆಯು ದಿನಾಂಕ:28/07/2014 ರಂದು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ಈ ಬಗ್ಗೆ ಮೊಕದ್ದಮೆ ಸಂಖ್ಯೆ 234/2014 ಕಲಂ.66-(ಎ) ಐಟಿ ಆಕ್ಟ್ 2000 ರೆ/ವಿ 504, 506, 109, 354-A(1)(1V)&D(1)(II)
ಐಪಿಸಿ ರೀತ್ಯಾ ಕೇಸು ದಾಖಲಾಗಿತ್ತು.
ಈ ಆರೋಪಿಯ ವಿರುದ್ದ ಬೆಂಗಳೂರು ನಗರದ ಬಸವನಗುಡಿ ಪೊಲೀಸ್ ಠಾಣೆಯಲ್ಲಿಯೂ ಸಹ ಇದೇ ರೀತಿಯ ಕೃತ್ಯಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ಸಂಖ್ಯೆ:155/2014 ಕಲಂ.153(ಎ),295 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಇದಾದ ಮೇಲೆ ಆರೋಪಿಯು ತಲೆ ಮರೆಸಿಕೊಂಡಿದ್ದು, ಆತನ ಕೃತ್ಯದ ವಿರುದ್ದ ಹಲವಾರು ಸಾಮಾಜಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು ಪ್ರತಿಭಟನೆ ಮಾಡಿದ್ದು, ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಬೆಂಗಳೂರು ನಗರದ ಪಶ್ಚಿಮ ವಲಯದ ಉಪ ಪೊಲೀಸ್ ಕಮೀಷನರ್ ಲಾಬೂರಾಮ್ ಅವರ ಸೂಕ್ತ ನಿರ್ದೇಶನದಲ್ಲಿ, ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಸತ್ಯನಾರಾಯಣ.ಎನ್.ಕುದೂರು ರವರ ಉಸ್ತುವಾರಿಯಲ್ಲಿ ಚಂದ್ರಾಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪಿ.ಎಸ್.ಸುದರ್ಶನ್ ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.












Click it and Unblock the Notifications