ನಮ್ಮ ಮೆಟ್ರೋ ಸೇವೆ ರಾತ್ರಿ 10ರ ತನಕ ವಿಸ್ತರಿಸಿ; ಸಂಸದರ ಮನವಿ
ಬೆಂಗಳೂರು, ಸೆಪ್ಟೆಂಬರ್ 16; ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ರೈಲು ಸೇವೆಯನ್ನು ರಾತ್ರಿ 10 ಗಂಟೆಯ ತನಕ ವಿಸ್ತರಣೆ ಮಾಡಬೇಕು ಎಂದು ಬಿಎಂಆರ್ಸಿಎಲ್ಗೆ ಮನವಿ ಮಾಡಲಾಗಿದೆ. ಶಾಸಕರು ಸಹ ರೈಲು ಸಂಚಾರದ ಅವಧಿ ವಿಸ್ತರಣೆ ಮಾಡಲು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ಗುರುವಾರ ಬಿಎಂಆರ್ಸಿಎಲ್ ಎಂಡಿಯನ್ನು ಭೇಟಿ ಮಾಡಿದರು. ಬೆಂಗಳೂರು ನಗರದಲ್ಲಿ ಅನೇಕ ಜನರು ಸಂಚಾರಕ್ಕಾಗಿ ನಮ್ಮ ಮೆಟ್ರೋ ರೈಲು ಸೇವೆಯನ್ನು ಅವಲಂಬಿಸಿದ್ದಾರೆ ಎಂದು ಚರ್ಚೆ ನಡೆಸಿದರು.
ಈ ನಿಟ್ಟಿನಲ್ಲಿ ನಮ್ಮ ಮೆಟ್ರೋ ರೈಲು ಸೇವೆಯ ಸಮಯವನ್ನು ಮುಂಜಾನೆ 5 ರಿಂದ ರಾತ್ರಿ 10 ರವರೆಗೆ ವಿಸ್ತರಿಸುವಂತೆ ಮನವಿಯನ್ನು ಸಲ್ಲಿಸಿದರು. ಪ್ರಸ್ತುತ ಮೆಟ್ರೋ ರೈಲು ರಾತ್ರಿ 9 ಗಂಟೆಯ ತನಕ ಮಾತ್ರ ಸಂಚಾರ ನಡೆಸುತ್ತಿದೆ.

ಪ್ರಸ್ತುತ ನಮ್ಮ ಮೆಟ್ರೋ ರೈಲು ಮುಂಜಾನೆ 7 ರಿಂದ ರಾತ್ರಿ 9 ರವರೆಗೆ ಸಂಚಾರ ನಡೆಸುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ರಾತ್ರಿ 10 ಗಂಟೆ ತನಕ ರೈಲು ಓಡಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಕೋವಿಡ್ ಪರಿಸ್ಥಿತಿಗೂ ಮೊದಲು ಮುಂಜಾನೆ 5 ರಿಂದ ರಾತ್ರಿ 11 ಗಂಟೆ ತನಕ ಮೆಟ್ರೋ ರೈಲು ಸಂಚಾರ ನಡೆಸುತ್ತಿತ್ತು. ಪ್ರತಿದಿನ ಸುಮಾರು 3 ಲಕ್ಷಕ್ಕೂ ಅಧಿಕ ಜನರು ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸುತ್ತಿದ್ದರು. ಆದರೆ ಈಗ ರೈಲು ಸಂಚಾರದ ಅವಧಿಯನ್ನು ಕಡಿತಗೊಳಿಸಲಾಗಿದೆ.
ಶಾಸಕರಿಂದಲೂ ಒತ್ತಾಯ; ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯುವಾಗಲೂ ನಮ್ಮ ಮೆಟ್ರೋ ವಿಚಾರ ಪ್ರಸ್ತಾಪವಾಗಿತ್ತು. ವಿವಿಧ ಪಕ್ಷಗಳ ಶಾಸಕರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಿರುವಾಗ ಜನರು ಸಾರ್ವಜನಿಕ ಸಾರಿಗೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಮೆಟ್ರೋ ರೈಲು ಸೇವೆಯ ಸಮಯವನ್ನು ವಿಸ್ತರಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.
ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, "ಮೆಟ್ರೋ ರೈಲು ರಾತ್ರಿ 10 ಗಂಟೆಯ ತನಕವಾದರೂ ಸಂಚಾರ ನಡೆಸಬೇಕು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿರುವಾಗ ಮೆಟ್ರೋ ರೈಲು ಸಂಚಾರದ ಅವಧಿ ಕಡಿತಗೊಳಿಸುವುದು ಸರಿಯಲ್ಲ" ಎಂದು ಹೇಳಿದ್ದರು.
ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, "ರಾತ್ರಿ ಕರ್ಫ್ಯೂ ಹಿನ್ನಲೆಯಲ್ಲಿ ಮೆಟ್ರೋ ರೈಲಿನ ಸಂಚಾರದ ಅವಧಿ ಕಡಿತಗೊಳಿಸಲಾಗಿತ್ತು. ಈಗ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ರೈಲು ಸಂಚಾರದ ಅವಧಿಯನ್ನು ಕನಿಷ್ಠ 2 ಗಂಟೆ ವಿಸ್ತರಣೆ ಮಾಡಬೇಕು" ಎಂದು ಸರ್ಕಾರವನ್ನು ಆಗ್ರಹಿಸಿದ್ದರು.
ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಹೆಬ್ಬಾಳ ಶಾಸಕ ಬೈರತಿ ಸುರೇಶ್, ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಬೇಕು. ಇದರಿಂದಾಗಿ ಕೆಲಸಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ ಎಂದು ಧ್ವನಿಗೂಡಿಸಿದ್ದರು.
ನಮ್ಮ ಮೆಟ್ರೋದ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ರೈಲುಗಳು ಸಂಚಾರ ನಡೆಸುತ್ತಿವೆ. ನೇರಳೆ ಮಾರ್ಗದಲ್ಲಿ ರೈಲು ಇಷ್ಟು ದಿನ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ತನಕ ಸಂಚಾರ ನಡೆಸುತ್ತಿತ್ತು. ಈಗ ಅದನ್ನು ಕೆಂಗೇರಿ ಬಸ್ ನಿಲ್ದಾಣದ ತನಕ ವಿಸ್ತರಣೆ ಮಾಡಲಾಗಿದೆ. ಆದರೆ ರಾತ್ರಿ 9 ಗಂಟೆಗೆ ರೈಲು ಸೇವೆ ಸ್ಥಗಿತಗೊಳ್ಳುತ್ತಿದೆ.
ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಯಲಚೇನಹಳ್ಳಿ ತನಕ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಜನದಟ್ಟಣೆ ಸಂದರ್ಭದಲ್ಲಿ 5 ನಿಮಿಷಕ್ಕೊಂದು ರೈಲು, ಸಾಮಾನ್ಯ ಅವಧಿಯಲ್ಲಿ 10 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತದೆ. ರೈಲು ಸಂಚಾರದ ಅವಧಿ ಹೆಚ್ಚಳ ಮಾಡಿದರೆ ರಾತ್ರಿ 8 ಗಂಟೆಯ ಬಳಿಕ ರೈಲುಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ.
ನಮ್ಮ ಮೆಟ್ರೋ ರೈಲು ಸೇವೆಯನ್ನು ವಿಸ್ತರಣೆ ಮಾಡುವ ಕುರಿತು ಸರ್ಕಾರ ಬಿಎಂಆರ್ಸಿಎಲ್ಗೆ ಯಾವುದೇ ಸೂಚನೆ ನೀಡಿಲ್ಲ. ಮುಂದಿನ ವಾರದಿಂದ ರೈಲು ಸಂಚಾರದ ಅವಧಿಯನ್ನು ವಿಸ್ತರಣೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications