Breaking: ಬೆಂಗಳೂರಿನಲ್ಲಿ ಸಂಜೆ ಮಳೆ ಆರಂಭ, ವಾಹನ ಸವಾರರೇ ಎಚ್ಚರ
ಬೆಂಗಳೂರು, ಆಗಸ್ಟ್ 20: ಉದ್ಯಾನ ನಗರಿಯ ವಿವಿಧ ಭಾಗದಲ್ಲಿ ಮಂಗಳವಾರ ಸಂಜೆ ಮಳೆ ಆರಂಭವಾಗಿದೆ. ಕೆಲವು ರಸ್ತೆಗಳು ಜಲಾವೃತವಾದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಬರುತ್ತಿದೆ. ಕಛೇರಿ ಕೆಲಸ ಮುಗಿಸಿಕೊಂಡು ಹೋಗುವ ವಾಹನ ಸವಾರರು ಮಳೆ, ನೀರು ತುಂಬಿದ ರಸ್ತೆ, ಮರಗಳು ಧರೆಗುರುಳಿದ ಕುರಿತು ಮಾಹಿತಿ ತಿಳಿದು ಸಂಚಾರ ನಡೆಸುವುದು ಉತ್ತಮ.
ನಗರದಲ್ಲಿ ಮಳೆ ಆರಂಭವಾದ ಕುರಿತು ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಜಾಲಹಳ್ಳಿ ಮೇಲ್ಸೇತುವೆಯಲ್ಲಿ ಮಳೆ ನೀರು ನಿಂತಿರುವುದರಿಂದ ಗೊರಗುಂಟೆಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ವಾಹನ ಸವಾರರು ಸಹಕರಿಸಿ ಎಂದು ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಕಡೆ ಸದಾಶಿವನಗರ ಪೊಲೀಸ್ ಠಾಣೆ ಬಳಿ ಮರ ಬಿದ್ದ ಪರಿಣಾಮ ಎಂ. ಎಸ್. ರಾಮಯ್ಯ ಆಸ್ಪತ್ರೆ ಕಡೆಗೆ ರಸ್ತೆಯನ್ನು ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗವನ್ನು ಬಳಸಲು ಮನವಿ ಮಾಡಿದ್ದಾರೆ.
ಸೋಮವಾರ ಮಧ್ಯಾಹ್ನವೂ ಬೆಂಗಳೂರು ನಗರದಲ್ಲಿ ಮಳೆ ಸುರಿದಿತ್ತು. ಸುಮಾರು ಅರ್ಧ ತಾಸಿನ ಮಳೆಯ ಆರ್ಭಟಕ್ಕೆ ರಸ್ತೆಗಳು ಜಲಾವೃತವಾಗಿದ್ದವು. ಮಂಗಳವಾರ ಬೆಳಗ್ಗೆಯಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ವಿವಿಧ ಬಡಾವಣೆಯಲ್ಲಿ ಮಳೆ ಆರಂಭವಾಗಿದೆ.
ಸದ್ಯ ಜಯದೇವ ಜಂಕ್ಷನ್ ಬಳಿ ಮಳೆಯ ನೀರು ರಸ್ತೆ ಮೇಲೆ ನಿಂತಿದ್ದು, ವಾಹನ ಸಂಚಾರ ನಿಧಾನಗತಿಯಲ್ಲಿದೆ. ವಿವಿ ಪುರಂ, ಜಯನಗರ, ಕೆ. ಆರ್. ಮಾರ್ಕೆಟ್ ಪ್ರದೇಶದಲ್ಲಿ ಮಳೆಯಾಗುತ್ತಿರುವ ಮಾಹಿತಿ ಬಂದಿದೆ.
5.45 PM UPDATE: New TS over parts of Bengaluru
— Namma Karnataka Weather (@namma_vjy) August 20, 2024
New TS to the West and parts of South Bengaluru.
Reports of rain from VV Puram, City Market, Jayanagar areas.#BangaloreRains #BengaluruRains pic.twitter.com/1gwf5nOKXL
ವಿದ್ಯಾಪೀಠ ವೃತ, ಹನುಮಂತನಗರ ಭಾಗದಲ್ಲಿ ತುಂತುರು ಮಳೆಯಾಗಿದೆ. ಯಶವಂತಪುರದಲ್ಲಿ ಮಳೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪೀಣ್ಯ -2ನೇ ಹಂತದಲ್ಲಿಯೂ ಮಳೆಯಾಗಿದೆ.
ಈಗಾಗಲೇ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ರಾಜಾಜಿನಗರ, ಮಲ್ಲೇಶ್ವರ, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಸದಾಶಿವ ನಗರ, ವಿದ್ಯಾರಣ್ಯಪುರ, ಬಸವನಗುಡಿ, ಕೋರಮಂಗಲ ಪ್ರದೇಶದಲ್ಲಿಯೂ ಮಳೆಯಾಗುತ್ತಿದೆ.
ವಸಂತ ನಗರ, ಕಂಟೋನ್ಮೆಂಟ್, ಜೆ. ಪಿ. ನಗರ, ಮಹಾಲಕ್ಷ್ಮೀ ಲೇಔಟ್, ನಂದಿನಿ ಲೇಔಟ್, ವಿಜಯನಗರ, ನಾಯಂಡಹಳ್ಳಿ, ಪದ್ಮನಾಭನಗರ, ಜಯನಗರ ಭಾಗದಲ್ಲಿಯೂ ಮಳೆಯಾಗುತ್ತಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ತಂಪಾದ ಗಾಳಿ ಬೀಸುತ್ತಿದೆ. ಆದ್ದರಿಂದ ರಾತ್ರಿ ಮಳೆಯಾಗುವ ನಿರೀಕ್ಷೆಯೂ ಇದೆ.
ಭಾರತೀಯ ಹವಾಮಾನ ಇಲಾಖೆ ನಗರದಲ್ಲಿ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಈಗಾಗಲೇ ಮುನ್ಸೂಚನೆ ನೀಡಿದೆ. ದೇವನಹಳ್ಳಿ, ತುಮಕೂರು, ಹಿಂದೂಪುರದಲ್ಲಿಯೂ ಮಳೆಯಾಗುತ್ತಿದೆ ಎಂದು ಜನರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕಳೆದ ಭಾನುವಾರ ರಾತ್ರಿ, ಸೋಮವಾರ ಸುರಿದ ಮಳೆ ನಗರದಲ್ಲಿ ಅವಾಂತರ ಉಂಟು ಮಾಡಿತ್ತು. ಈ ವಾರ ಮಳೆಯ ಅಬ್ಬರ ಕಡಿಮೆ ಇದೆ. ಆದರೆ ಸಂಜೆಯ ವೇಳೆಗೆ ಮಳೆ ಬರುತ್ತಿದ್ದು, ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡುತ್ತಿದೆ.












Click it and Unblock the Notifications