ಯಡಿಯೂರಪ್ಪ-ಈಶ್ವರಪ್ಪ ಮುನಿಸು ತಗ್ಗಿಸಲು ಆರೆಸ್ಸೆಸ್ ಕೂಡಾ ವಿಫಲ
ಬಿಜೆಪಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಭಣವಾಗುತ್ತಲೇ ಇದೆ. ಪಕ್ಷದ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರಿಗೆ ಶಿಸ್ತಿನ ಪಾಠ ಹೇಳಲು ಯತ್ನಿಸಿದ ಆರೆಸ್ಸೆಸ್ ಕೂಡಾ ಕೈಚೆಲ್ಲಿದೆ.
ಬೆಂಗಳೂರು, ಜನವರಿ 18: ಬಿಜೆಪಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಭಣವಾಗುತ್ತಲೇ ಇದೆ. ಪಕ್ಷದ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರಿಗೆ ಶಿಸ್ತಿನ ಪಾಠ ಹೇಳಲು ಯತ್ನಿಸಿದ ಆರೆಸ್ಸೆಸ್ ಕೂಡಾ ಕೈಚೆಲ್ಲಿ ಕೂರುವ ಪರಿಸ್ಥಿತಿ ಉಂಟಾಗಿದೆ.
ಬೆಂಗಳೂರಿನ ಕೇಶವ ಕೃಪಾದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಅತ್ತ ತುಮಕೂರಿನಲ್ಲಿ ಸೊಗಡು ಶಿವಣ್ಣ ಅವರ ಮನೆಯಲ್ಲಿ ಈಶ್ವರಪ್ಪ ಅವರು ಭಿನ್ನಮತೀಯರ ಜತೆ ರಾಯಣ್ಣ ಬ್ರಿಗೇಡ್ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದ್ದಾರೆ.[ಮುನಿಸಿಕೊಂಡವರ ಜತೆ ಯಡಿಯೂರಪ್ಪ ಮಾತುಕತೆ]
ಯಡಿಯೂರಪ್ಪ ಒಂದು ದಾರಿಯಾದರೆ, ಈಶ್ವರಪ್ಪ ಒಂದು ದಾರಿ ಹಿಡಿದಿದ್ದು, ಆರೆಸ್ಸೆಸ್ ಮುಖಂಡರು ನಡೆಸಿದ ಸಂಧಾನ ಯತ್ನ ವಿಫಲವಾಗಿದೆ.
ಯಡಿಯೂರಪ್ಪ ಹಾಗೂ ಕೆಎಸ್ ಈಶ್ವರಪ್ಪ ಇಬ್ಬರು ಕೂಡಾ ಮಂಗಳವಾರ ನಡೆದ ಸಮನ್ವಯ ಸಭಗೆ ಗೈರು ಹಾಜರಾಗಿದ್ದರು. ರಾಯಣ್ಣ ಬ್ರಿಗೇಡ್ ಕುರಿತಂತೆ ಚರ್ಚಿಸಲು ತುಮಕೂರಿಗೆ ತೆರಳುತ್ತಿರುವುದಾಗಿ ಈಶ್ವರಪ್ಪ ಹೇಳಿದ್ದರು. ಅದರಂತೆ ಸೊಗಡು ಶಿವಣ್ಣ ಅವರ ಮನೆಯಲ್ಲಿ ಚರ್ಚೆ ಕೂಡಾ ನಡೆಸಿದರು.

ಯಡಿಯೂರಪ್ಪರಿಂದ ನಿಧಾನಗತಿ ನಡೆ
24 ಮಂದಿ ಭಿನ್ನಮತೀಯರಿದ್ದು, ಎಲ್ಲರೂ ಪತ್ರ ಮುಖೇನ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು. ಅತೃಪ್ತರ ಜತೆ ಮಾತುಕತೆ ನಡೆಸಲು ಯಡಿಯೂರಪ್ಪ ಅವರು ಮುಂದಾಗುವುದಕ್ಕೂ ಮುನ್ನವೇ ಈಶ್ವರಪ್ಪ ಬಣ ಬುಧವಾರದಂದು ತುಮಕೂರಿನಲ್ಲಿ ಸಭೆ ಸೇರಿದೆ. ಸೊಗಡು ಶಿವಣ್ಣ ಮನೆಯಲ್ಲಿ ರಾಯಣ್ಣ ಬ್ರಿಗೇಡ್ ಮುಂದಿನ ಚಟುವಟಿಕೆ ಮಾತ್ರ ಚರ್ಚೆಯಾಗಿದೆ ಎಂದು ಹೇಳಲಾಗದು.

ಹೈಕಮಾಂಡ್ ನಿಂದ ಕಾದು ನೋಡುವ ತಂತ್ರ
ಹೈಕಮಾಂಡ್ ನಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಬಿಜೆಪಿಯಲ್ಲಿ ಅತೃಪ್ತ ಶಾಸಕರಿಂದ ಯಾವುದೇ ಪತ್ರ ಬಂದಿಲ್ಲ ಎಂದಿದ್ದಾರೆ. ಯಡಿಯೂರಪ್ಪ ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಶಾಸಕ ಭಾನುಪ್ರಕಾಶ್ ಅವರು ನೇರವಾಗಿ ಆರೋಪಿಸಿದ್ದರು. ಜನವರಿ 19ರಂದು ಅತೃಪ್ತರನ್ನು ಭೇಟಿ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಆದರೆ, ಹೈಕಮಾಂಡ್ ಮಾತ್ರ ಇನ್ನೂ ಮೌನ ಮುರಿದಿಲ್ಲ.

ದಲಿತ ಪರ ಇಮೇಜ್
ದಲಿತ ಪರ ಇಮೇಜ್ ಉಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದ್ದು, ಬ್ರಿಗೇಡ್ ವಿರುದ್ಧ ಯಾವುದೇ ಹೇಳಿಕೆ ನೀಡಲು ಮುಂದಾಗುತ್ತಿಲ್ಲ. ವೋಟ್ ಬ್ಯಾಂಕ್ ರಾಜಕೀಯ ದಾಳ ಉರುಳಿಸುತ್ತಿರುವ ಬಿಜೆಪಿ ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ರಾಯಣ್ಣ ಬ್ರಿಗೇಡ್ ಗೆ ಭರ್ಜರಿ ಯಶಸ್ಸು ಸಿಗುತ್ತದೆ ಎಂದು ಬಿಜೆಪಿ ಕೂಡಾ ಎಣಿಸಿರಲಿಲ್ಲ. ಮುಂಬರುವ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಕುರುಬ ಹಾಗೂ ಲಿಂಗಾಯತ ಮತಗಳ ನಡುವೆ ಬಿಜೆಪಿ ತನ್ನ ಬಾವುಟ ಹಾರುವ ಯೋಜನೆಯಲ್ಲಿದೆ.

ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊಸದೇನಲ್ಲ
ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊಸದೇನಲ್ಲ, ಅವರು ಸಿಎಂ ಆಗಿದ್ದ ಕಾಲದಲ್ಲೂ ಜನಾರ್ದನ ರೆಡ್ಡಿ ಬಣ ತಿರುಗಿ ಬಿದ್ದಿತ್ತು. ದೆಹಲಿ ತನಕ ಶಾಸಕರ ಗುಂಪು ಹೋಗಿ ಬಂದಿತ್ತು. ಆದರೆ, ಈಗ ಪರಿಸ್ಥಿತಿ ಬೇರೆ ಇದೆ, ಅರೆಸ್ಸೆಸ್ ಜತೆ ಬಲವಾಗಿ ಗುರುತಿಸಿಕೊಂಡಿರುವ ಶಾಸಕರೇ ಈಗ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿರುವುದು ಹೈಕಮಾಂಡ್ ಗೆ ತಲೆಬಿಸಿಯಾಗಿದೆ.












Click it and Unblock the Notifications