"ಡಿಕೆ ಶಿವಕುಮಾರ್ ಸಿಎಂ ಆದ್ರೂ ಸಿದ್ದರಾಮಯ್ಯನವರೇ ಸೂಪರ್ ಸಿಎಂ''
ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಸಿಎಂ ಸಿದ್ದರಾಮಯ್ಯ ಮಧ್ಯ ಕುರ್ಚಿಗಾಗಿ ಫೈಟ್ ನಡೆಯುತ್ತಲೇ ಇರುತ್ತದೆ. ಸಿಎಂ ಸ್ಥಾನ ಬದಲಾವಣೆ ಬಗ್ಗೆ ಆಗಾಗ ಚರ್ಚೆ ಆಗುತ್ತಲೆ ಇದೆ. ಈ ಬಗ್ಗೆ ಡಿಕೆ ಶಿವಕುಮಾರ್ ಅವರು ತೆರೆಮರೆಯ ಹಿಂದೆ ಕಸರತ್ತು ನಡೆಸುತ್ತಲೇ ಇದ್ದಾರೆ ಎನ್ನಲಾಗಿದೆ. ಇದೀಗ ಡಿಕೆಶಿ ಅವರು ರಾಜ್ಯದ ಸಿಎಂ ಆದರೆ ಹೇಗೆ ಮುನ್ನಡೆಸುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಪ್ರಶ್ನಿಸಿದ್ದಾರೆ.
ಭಾನುವಾರ ವಿವಿಧ ವಿಚಾರ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಅವರು, ಚಲನಚಿತ್ರ ಕಲಾವಿದರಿಗೆ ನಟ್ಟು ಬೋಲ್ಟು ಟೈಟು ಮಾಡ್ತೀನಿ ಅನ್ನೋ ಧಮ್ಕಿ ಹಾಕೋಕೆ ಧೈರ್ಯ ಇದೆ. ಶಾಸಕರಿಗೆ ತಗ್ಗಿ-ಬಗ್ಗಿ ನಡೀಬೇಕು ಅಂತ ಧಮ್ಕಿ ಹಾಕೋ ಧೈರ್ಯ ಇದೆ. ಕಾರ್ಯಕರ್ತರಿಗೆ "ನಿಮ್ಮ ಛತ್ರಿ ಬುದ್ಧಿ ಗೊತ್ತು" ಅಂತ ಆವಾಜ್ ಹಾಕೋಕೆ ಧೈರ್ಯ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಈ ಕೆಲಸ ಮಾಡಲು ಧೈರ್ಯ ಇಲ್ಲ ಎಂದು ಕಾಲೆಳೆದಿದ್ದಾರೆ.

ಸಿಎಂ ಸ್ಥಾನದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಾಯಕತ್ವ ವಿಚಾರವಾಗಿ ಹೇಳಿಕೆ ನೀಡಿದ್ದ, ಈಗಲೂ ಬದ್ಧ ಎಂದಿರುವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಪಕ್ಷದ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರಿಗೆ ಒಂದು ನೋಟೀಸು ಕೊಡೋ ಧೈರ್ಯನೂ ಇಲ್ಲವಾ? ಎಂದು ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಪ್ರತಿ ವಿಚಾರ ಬಂದಾಗಲೂ ದೆಹಲಿ ಹೈಕಮಾಂಡ್ ಕಡೆ ಮುಖ ಮಾಡುವ ನೀವು ನಾಳೆ ಅಪ್ಪಿ ತಪ್ಪಿ ಮುಖ್ಯಮಂತ್ರಿ ಆದರೆ ರಾಜ್ಯವನ್ನು ಹೇಗೆ ಮುನ್ನಡೆಸುತ್ತೀರಿ ಡಿ.ಕೆ.ಶಿವಕುಮಾರ್ ಅವರೇ? ಎಂದು ಲೇವಡಿ ಮಾಡಿದರು.
ದಿವಂಗತ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆಗಿದ್ದರೂ ಸೋನಿಯಾ ಗಾಂಧಿ ಅವರೇ ತಮ್ಮ ಕೈಯಲ್ಲಿ ಕೀಲಿ ಇಟ್ಟುಕೊಂಡಿದ್ದಂತೆ. ಅಕಸ್ಮಾತ್ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆದರೂ ಸಿದ್ದರಾಮಯ್ಯನವರೇ ಸೂಪರ್ ಸಿಎಂ ಆಗಿ ಉಳಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ತಮ್ಮಂತಹ ದುರ್ಬಲ ನಾಯಕರು ರಾಜ್ಯದ ಮುಖ್ಯಮಂತ್ರಿ ಆದರೆ ಕನ್ನಡಿಗರಿಗೆ ಏನು ಪ್ರಯೋಜನ? ಎಂದು ವ್ಯಂಗ್ಯವಾಡಿದರು.
ರೀಲ್ಸ್ ಮಾಡಿದ್ರೆ ರಸ್ತೆಗುಂಡಿ ಸಮಸ್ಯೆ ಬಗೆಹರಿಯುತ್ತಾ
ಮೃತ್ಯುಕೂಪಗಳಾಗಿರುವ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರೇ ರಸ್ತೆಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಇಂದು ಬೆಳಿಗ್ಗೆ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ನಡೆದಿದೆ.
ನಿಮ್ಮ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಬೇವಾವಾಬ್ದಾರಿತನ, ಅಸಾಮರ್ಥ್ಯಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಸ್ವಾಮಿ? ಸಿಟಿ ರೌಂಡ್ಸ್ ಹೆಸರಿನಲ್ಲಿ ಟಿ-ಶರ್ಟು, ಕೂಲಿಂಗ್ ಗ್ಲಾಸು ಹಾಕಿಕೊಂಡು ಲಾಲ್ ಬಾಗ್, ಕಬ್ಬನ್ ಪಾರ್ಕುಗಳಲ್ಲಿ ಪೋಟೋ ಶೂಟ್, ರೀಲ್ಸ್ ಮಾಡಿಬಿಟ್ಟರೆ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ಸರಿಹೋಗುತ್ತಾ ಡಿ.ಕೆ.ಶಿವಕುಮಾರ್ ಅವರೇ?. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಬೆಂಗಳೂರನ್ನು ಹಾಳು ಮಾಡಿಬಿಟ್ಟರಲ್ಲ ಸ್ವಾಮಿ. ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಗುಡುಗಿದರು.












Click it and Unblock the Notifications