ಆನೆ ಗರ್ಭದಲ್ಲೇ ಮರಿ ಸಾವು, ತಾಯಿಯೂ ಉಳಿಯಲಿಲ್ಲ
ಬೆಂಗಳೂರು: ಇಷ್ಟುದಿನ ಮೃಗಾಲಯಕ್ಕೆ ಬರುವವರ ಮನರಂಜಿಸುತ್ತಿತ್ತು ಆ ಆನೆ. ಯಾರಿಗೂ ತೊಂದರೆ ಮಾಡದೆ, ಎಲ್ಲರ ಜೊತೆಗೂ ಬೆರೆಯುತ್ತಿತ್ತು. ಹೀಗೆ ಎಲ್ಲರ ಪ್ರೀತಿಯ ಆನೆಗೆ ಆ ದೇವರು ಹೆಚ್ಚು ಆಯಸ್ಸನ್ನೇ ನೀಡಿರಲಿಲ್ಲ ಅಂತಾ ಕಾಣುತ್ತದೆ. ಹೊಟ್ಟೆಲ್ಲೇ ಕಂದಮ್ಮನನ್ನು ಕಿತ್ತುಕೊಂಡ ದೇವರು, ಕಡೆಗೆ ತಾಯಿ ಆನೆಯ ಉಸಿರನ್ನೂ ಕಸಿದಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ಬನ್ನೇರುಟ್ಟ (bannerghatta) ಉದ್ಯಾನದಲ್ಲಿ.
ಹೌದು, ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ. ಬೆಂಗಳೂರಿಗರ ಅಚ್ಚುಮೆಚ್ಚಿನ ಜಾಗ, ವನ್ಯಜೀವಿ ತಾಣ ಬನ್ನೇರುಘಟ್ಟದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ನಿನ್ನೆ ಭ್ರೂಣದಲ್ಲೇ ತನ್ನ ಕಂದಮ್ಮನನ್ನು ಕಳೆದುಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ತಾಯಿ ಆನೆ ಸುವರ್ಣ ಕೂಡ ಚಿಕಿತ್ಸೆ ಫಲಿಸದೆ ಇಂದು 12:13 ಕ್ಕೆ ಇಹಲೋಕ ತ್ಯಜಿಸಿದೆ. ಈ ಘಟನೆ ಇಡೀ ಬನ್ನೇರುಘಟ್ಟ ಸಿಬ್ಬಂದಿಗೆ ಆಘಾತ ತಂದಿದೆ. ಹಾಗೇ ಪ್ರೀತಿಯ ಸುವರ್ಣಳನ್ನು ಇಷ್ಟ ಪಡುತ್ತಿದ್ದ ಪ್ರಾಣಿ ಪ್ರಿಯರಿಗೂ ಈ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂಬುದೆ ಬೇಸರದ ಸಂಗತಿ.

ಅಂದಹಾಗೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಇಂದು ತನ್ನ ಮರಿಯ ಜೊತೆಗೆ ಸುವರ್ಣ ಆಟವಾಡಬೇಕಿತ್ತು. ಆದ್ರೆ ನಿನ್ನೆ ಪ್ರಸವ ವೇದನೆ ಮುಗಿದರೂ ಸುವರ್ಣ ತನ್ನ ಮರಿಗೆ ಜನ್ಮ ನೀಡದೇ ಇದ್ದಾಗ ಬನ್ನೇರುಘಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರು. ತಕ್ಷಣ ವೈದ್ಯರನ್ನ ಕರೆಸಿ ಆನೆ ಹೊಟ್ಟೆ ತಪಾಸಣೆ ನಡೆಸಲಾಗಿತ್ತು. ಆದರೆ ಮೊದಲ ಆಘಾತ ಸಿಕ್ಕಿದ್ದೇ ಆಗ. ಭ್ರೂಣದಲ್ಲೇ ಮರಿ ಆನೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂತು. ಆ ಕೂಡಲೇ ಹೇಗಾದರೂ ಮಾಡಿ ತಾಯಿ ಆನೆಯನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದ್ದಾರೆ ಅಧಿಕಾರಿಗಳು. ಇದಕ್ಕಾಗಿ ನೀಡಬೇಕಾದ ಚಿಕಿತ್ಸೆಗೂ ವೈದ್ಯರು ಮುಂದಾಗಿದ್ದರು.
ಮೃತಪಟ್ಟ ಮರಿಯಾನೆ ಹೊರಕ್ಕೆ
ಶಸ್ತ್ರಚಿಕಿತ್ಸೆ ನಡೆಸಿದ್ದ ತಜ್ಞ ವೈದ್ಯರು, ಸುವರ್ಣ ಆನೆಯ ಹೊಟ್ಟೆಯೊಳಗೇ ಮೃತಪಟ್ಟಿದ್ದ ಮರಿಯನ್ನು ಹೊರಗೆ ತೆಗೆದಿದ್ದರು. ನಂತರ ತಾಯಿ ಆನೆ ಸುವರ್ಣಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು. ತಜ್ಞ ವೈದ್ಯರು ಅಲ್ಲೇ ಬೀಡುಬಿಟ್ಟು ಚಿಕಿತ್ಸೆ ನೀಡುತ್ತಿದ್ದರು. ಆದರೆ ಸುವರ್ಣ ಆನೆಯ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿತ್ತು. ಇದನ್ನ ಕಂಡು ಬನ್ನೇರುಘಟ್ಟ ಸಿಬ್ಬಂದಿ ಕೂಡ ಭಯಗೊಂಡಿದ್ದರು. ಆದರೂ ಅತಿಹೆಚ್ಚು ಮರಿಗಳಿಗೆ ಜನ್ಮ ನೀಡಿದ್ದ ಸುವರ್ಣ ಆನೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೃತಪಟ್ಟಿದೆ.
ಹೊಟ್ಟೆಗೆ ಹರಡಿದ್ದ ಸೋಂಕು
ಹೌದು, ಮರಿ ಆನೆ ಸುವರ್ಣ ಹೊಟ್ಟೆಯಲ್ಲೇ ಮೃತಪಟ್ಟಿದ್ದ ಪರಿಣಾಮ ಸೋಂಕು ತಾಯಿ ಆನೆಯ ಹೊಟ್ಟೆಯಲ್ಲಿ ಬಹುಭಾಗ ಹರಡಿತ್ತು ಎನ್ನಲಾಗಿದೆ. ತಕ್ಷಣ ಚಿಕಿತ್ಸೆ ನೀಡಿದರೂ ಸೋಂಕು ಆನೆಯ ದೇಹದ ಬಹುಭಾಗಕ್ಕೆ ಹರಡಿದ್ದ ಪರಿಣಾಮ ಸುವರ್ಣ ಮೃತಪಟ್ಟಿದ್ದು, ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸುವರ್ಣ ಮೃತಪಟ್ಟ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
48 ವರ್ಷದ ಮೃತ ಸುವರ್ಣ ಜನಿಸಿದ್ದು 1975ರಲ್ಲಿ. ವಿಶೇಷವೆಂದರೆ ಹುಟ್ಟಿದ ಜಾಗದಲ್ಲೇ ಸುವರ್ಣ ಈಗ ಮಣ್ಣಾಗುತ್ತಿದ್ದಾಳೆ. ಕಳೆದ 48 ವರ್ಷದಿಂದಲೂ ಬನ್ನೇರುಘಟ್ಟ ಉದ್ಯಾನದ ವಾತಾವರಣಕ್ಕೆ ಸುವರ್ಣ ಮುದ ನೀಡಿದ್ದಳು. ಆನೆ ಎಲ್ಲರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುತ್ತಿತ್ತು. ಕಿರಿಕಿರಿ ಇಲ್ಲದ ಸುವರ್ಣ ಜೊತೆಗೆ ಸಿಬ್ಬಂದಿ ಕೂಡ ಅಷ್ಟೇ ಪ್ರೀತಿಯಿಂದ ಇದ್ದರು. ಆದರೆ ದಿಢೀರ್ ಸುವರ್ಣ ಜೀವ ಕಳೆದುಕೊಂಡಿದ್ದು, ಸಿಬ್ಬಂದಿಗೆ ನೋವು ತಡೆಯಲಾಗುತ್ತಿಲ್ಲ. ಇನ್ನು ಬನ್ನೇರುಘಟ್ಟ ಉದ್ಯಾನದ ಒಳಗೆ ಸುವರ್ಣ ಅಂತ್ಯ ಸಂಸ್ಕಾರ ನಡೆಸಲು ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications