ಬೆಂಗಳೂರು ದಕ್ಷಿಣ ಲೋಕಸಭೆಯಲ್ಲಿ ಯಾರು ಗೆಲ್ತಾರೆ?
ಹದಿನಾರನೇ ಲೋಕಸಭಾ ಚುನಾವಣೆಯಲ್ಲಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದ ಕ್ಷೇತ್ರ ಬೆಂಗಳೂರು ದಕ್ಷಿಣ. ಇದಕ್ಕೆ, ಸತತ ಐದು ಬಾರಿ ಗೆದ್ದಿರುವ ಬಿಜೆಪಿಯ ಅನಂತ್ ಕುಮಾರ್ 6ನೇ ಬಾರಿಯೂ ಸಿಕ್ಸರ್ ಹೊಡೀತಾರಾ ಅನ್ನುವುದು ಒಂದು ಕಾರಣವಾದರೆ, ನಂದನ್ ನಿಲೇಕಣಿ ಅವರಂಥ ಸಮರ್ಥ ಹುರಿಯಾಳನ್ನು ಅನಂತ್ ವಿರುದ್ಧ ಕಾಂಗ್ರೆಸ್ ಇಳಿಸಿದ್ದು ಮತ್ತೊಂದು ಕಾರಣ. ತಕ್ಕಡಿಯಲ್ಲಿ ಇಬ್ಬರನ್ನೂ ಅಕ್ಕಪಕ್ಕ ಇಟ್ಟರೆ ಯಾರು ಹೆಚ್ಚು ತೂಗುತ್ತಾರೆ ಎಂದು ಊಹಿಸುವುದು ಬಲುಕಷ್ಟ. ಈ ಕ್ಷೇತ್ರದಲ್ಲಿ ಯಾರ ಕೈ ಮೇಲಾಗಬಹುದು ಎಂಬುದರ ವಿಶ್ಲೇಷಣೆ ಇಲ್ಲಿದೆ.
***
ಬೆಂಗಳೂರು... ಬೆಂಗಳೂರು ಬಿಸಿ ಬಿಸಿ! ಬಿಸಿಲಿನ ಬಿಸಿಗಿಂತಲೂ ಮತದಾನದ ಬಿಸಿ ಈ ಬಾರಿಯ ಕಡುಬೇಸಗೆಯನ್ನ ಅಸಹನೀಯವಾಗಿ ಮಾಡಿಬಿಟ್ಟಿದೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ ಕೊತಕೊತನೆ ಕುದಿಯುತ್ತಿವೆ ಜಯಭೇರಿ ಪಡೆಯಬಲ್ಲವರ ನಸೀಬು. ಪರಾಜಿತವಾಗಿ ರಾಜ್ಯಸಭೆಗೆ ಜಾತಕ ಪಕ್ಷಿಯಂತೆ ಕಾಯಬೇಕಾದವರು ಯಾರು ಅನ್ನೋದು ಮೇ ತಿಂಗಳ ಹದಿನಾರಕ್ಕೆ ಜಗಜ್ಜಾಹೀರು.
ಆದರೆ ಆಗಿರುವ ಮತದಾನ ವೈಖರಿ (trends) ಮತ್ತು ಮತದ ಅಲೆ(drifts)ಗಳನ್ನ ಅಭ್ಯಸಿಸಿ ಬೆಂಗಳೂರು ದಕ್ಷಿಣದಲ್ಲಿ ಫಲಿತಾಂಶ ಏನಾಗಬಹುದು ಎನ್ನುವರ ಜಿಜ್ಞಾಸೆಗಾಗಿ ಈ ಲೇಖನ.

ಯಾವ ವಿಧಾನಸಭಾ ಸೆಗ್ಮೆಂಟು ಯಾರಿಗೆ ಒಲಿದಿದೆ
ಹಿಂದಿನ ಮತದಾನಗಳಲ್ಲಿ ಈ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಯಾವ ವಿಧಾನಸಭಾ ಸೆಗ್ಮೆಂಟು ಒಲಿದಿದೆ ಅನ್ನೋದು ನೋಡಿ:

ಅನಂತ್ ಕುಮಾರಗಿರೋ ಸೂಪರ್ ಲಕ್ಕು
ಬಿಜೆಪಿ ಮತ್ತು ಕಾಂಗ್ರೆಸ್ಸು ಇಲ್ಲಿ ಆಲ್ಮೋಸ್ಟ್ ಸಮಬಲದ ಹೋರಾಟ ನಡೆಸಿವೆ. ಅನಂತ್ ಕುಮಾರಗಿರೋ ಲಕ್ಕು ಅವರನ್ನ ಯಾವಾಗಲೂ ದಡ ಮುಟ್ಟಿಸಿದೆ. 2008 ಮತ್ತು 2009ರ ಚುನಾವಣೆಗಳಲ್ಲಿ ಜಿದ್ದಿಗೆ ಬಿದ್ದವರಂತೆ ಟಕ್ಕರ್ ಇತ್ತು ಈ ಎರಡೂ ಪಕ್ಷಗಳಲ್ಲಿ.

ಲೋಕಸಭೆಯಲ್ಲಿ ಸೋಮಣ್ಣನದೇ ದರ್ಬಾರು
ಜಾತಿ, ಪ್ರತಿಷ್ಠೆಗಳ ಭರ್ಜರಿ ಪ್ರದರ್ಶನವಾಗುವ ಬೆಂಗಳೂರು ದಕ್ಷಿಣ ಸುಲಭಕ್ಕೆ ಅಂದಾಜಿಗೆ ಸಿಗೋ ಕ್ಷೇತ್ರವಂತೂ ಅಲ್ಲ. ಪ್ರಿಯಾಕೃಷ್ಣ ಮತ್ತು ಅವರಪ್ಪ ಇಲ್ಲಿನ ಗೋವಿಂದರಾಜ ನಗರ ಮತ್ತು ವಿಜಯನಗರದ ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರೂ ಲೋಕಸಭೆ ಚುನಾವಣೆಗಳಲ್ಲಿ ಸೋಮಣ್ಣನದೇ ದರ್ಬಾರು.

ಅಶೋಕನ ಸಾಮ್ರಾಜ್ಯದಲ್ಲಿ ಅನಂತ್ ಅಧಿಪತ್ಯ
ಬಸವನಗುಡಿ ಮತ್ತು ಪದ್ಮನಾಭ ನಗರಗಳಲ್ಲಿ ಅಶೋಕನ ಸಾಮ್ರಾಜ್ಯವಿರೋದ್ರಿಂದ ಅನಂತ ಕುಮಾರರಿಗೆ 'ಆಸೆಯೇ ದುಃಖಕ್ಕೆ ಮೂಲ'. ಅಲ್ಲಿ ಬಿಜೆಪಿ ಸತತವಾಗಿ ಗೆಲ್ಲುತ್ತದೆ. ಇನ್ನು ಜಯನಗರದಲ್ಲಿ ಮಾರ್ಜಿನಲ್ ಛೇಂಜು ಪ್ರತಿ ಚುನಾವಣೆಯಲ್ಲೂ ಮಾಮೂಲು. ಬಿ.ಟಿ.ಎಂ ಕಾಂಗ್ರೆಸ್ಸಿಗೆ ನಿಷ್ಠ. ಈ ಎಲ್ಲಾ ಕ್ಷೇತ್ರದ್ದೇ ಒಂದು ತೂಕವಾದರೆ ಬೋಮ್ಮನಹಳ್ಳಿಯದೇ ಮತ್ತೊಂದು ತೂಕ. ಆದರೆ ಅದು ಬಿಜೆಪಿಗೆ ಇದುವರೆಗೂ ಒಲಿದುನಿಂತಿದೆ.

ಈ ಬಾರಿಯ ವೋಟಿಂಗ್ ಪ್ಯಾಟರ್ನ್ ನೋಡಿ
ಹೋಗ್ಲಿ ಬಿಡಿ, ಹಿಸ್ಟರಿ ತಗೋಂಡು ಏನು ಮಾಡೋದು ಅಂತೀರಾ? ಹಾಗಾದರೆ ಈ ಬಾರಿಯ ವೋಟಿಂಗ್ ನೋಡಿ.

ಮತ ಬಿದ್ದಿರೋದು ಮೋದಿ ಅಲೆಗೋ, ನಿಲೇಕಣಿಗೋ
ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಹೊಸ ಮತಗಳು ಈ ಬಾರಿ ಚಲಾವಣೆಯಾಗಿವೆ. ಬೊಮ್ಮನಹಳ್ಳಿಯಲ್ಲಿ ಚಲಾವಣೆಯಾಗಿರೋದು ಅಜಮಾಸು ಐವತ್ತೇಳು ಸಾವಿರ ಹೆಚ್ಚಿನ ಮತಗಳು. ಅತಿ ಹೆಚ್ಚಿನ ಡ್ರಿಫ್ಟ್ ಸಿಕ್ಕಿರೋದೆ ಇಲ್ಲಿ. ಆದರೆ ಈ ಮತಗಳು ಚಲಾವಣೆಯಾಗಿರೋದು ಬಿಜೆಪಿಯ ಮೋದಿ ಅಲೆಗೋ ಅಥವಾ ವಿನೂತನ ರಾಜಕಾರಣಿ ನಿಲೇಕಣಿಯ ಅಲೆಗೋ?

ಹೊಸ ಮತದಾರರೇ ಇಲ್ಲಿ ನಿರ್ಣಾಯಕ
ವಿಧಾನಸಭೆಯಲ್ಲಿ ಚಲಾವಣೆಯಾದಕ್ಕಿಂತಲೂ ಒಂದೂ ಕಾಲು ಲಕ್ಷ ಹೆಚ್ಚಿನ ಮತ ಚಲಾವಣೆಯಾಗಿರೋದು ನೋಡಿದರೆ ರಾಜ್ಯ ರಾಜಕಾರಣಕ್ಕಿಂತಲೂ ಹೆಚ್ಚಿನ ರಾಷ್ಟ್ರೀಯ ವಿದ್ಯಮಾನದ ಬಗ್ಗೆ ತಲೆ ಕೆಡಿಸಿಕೊಳ್ಳೋ ಮಂದಿ ವೋಟು ಹಾಕಿರೋದು ಸ್ಪಷ್ಟ. ಇವರ ಮತಗಳೇ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸೋದು ಖಾಯಂ. ಕಳೆದ ವಿಧಾನಸಭೆಯ ವೋಟರ್ಸ್ ನಂದನ್ ಮತ್ತು ಅನಂತಗೆ ಸಮಬಲವನ್ನು ತಂದು ಕೊಟ್ಟರೆ, ಹೊಸ ಮತದಾರ ನಿರ್ಧಾರಿತ ಮತಗಳನ್ನ ಹಾಕಿ ಇಲ್ಲಿನ ಫಲಿತಾಂಶವನ್ನ ಕಟ್ಟಿಕೊಡಲಿದ್ದಾನೆ.

ಹದಿನೆಂಟು ವರ್ಷಗಳಿಂದ ಸೋಲೇ ಕಂಡಿಲ್ಲ
ಇಲ್ಲಿ ಕಳೆದ ಹದಿನೆಂಟು ವರ್ಷಗಳಿಂದಲೂ ಅನಂತ್ ಸೋಲೇ ಕಂಡಿಲ್ಲ. ಗೆಲುವಿನ ಮಟ್ಟವನ್ನ ಡಿಸೈಡು ಮಾಡಿರೋದು ಎದುರಾಳಿ ಮಾತ್ರ. ಹೇಗೆ ಗೆದ್ದಿದ್ದಾರೆ ನೋಡಿ ಅನಂತ್ ಇದುವರೆಗೆ.

ಅನಂತ್ ಗೆಲುವಿನ ಅಂತರ ಕಡಿಮೆಯಾಗುತ್ತ ಬಂದಿದೆ
ವರಲಕ್ಷಿ ಗುಂಡೂರಾವರನ್ನ ಇಪ್ಪತ್ತೇಳು ಸಾವಿರದ ಅಂತರದಲ್ಲಿ ಸೋಲಿಸಿ ಮೊದಲ ಗೆಲುವು ಸಾಧಿಸಿದ್ದ ಅನಂತ್, ತೊಂಬತ್ತಾರರಲ್ಲಿ ಭರ್ಜರಿ ಜಯ ಸಾಧಿಸಿದ್ದರು. ನಂತರದ ಮೂರು ಚುನಾವಣೆಗಳಲ್ಲಿ ಅನಂತ್ ಗೆದ್ದರೂ ಗೆಲುವಿನ ಅಂತರ ಕಡಿಮೆಯಾಗುತ್ತಲೇ ಬಂದಿದೆ. ಈ ಬಾರಿ ಎದುರಾಳಿ ಕೂಡ ವಿನೂತನವಾದ ನಿಯೋ ರಾಜಕಾರಣಿ. ಏನಾಗಬಹುದು ಫಲಿತಾಂಶ?

ಇನ್ನು ಇಲ್ಲಿಯ ವೋಟಿಂಗ್ ಪ್ಯಾಟರ್ನ್ ನೋಡಿ
ಐವತ್ತಕ್ಕಿಂತ ಹೆಚ್ಚಿನ ವೋಟಿಂಗ್ ನಡೆಯೋದು ಬಿಜಿಪಿಯಂತಹ ಪಕ್ಷಕ್ಕೆ ಆಶಾದಾಯಕವೇ. ಆದರೆ ಎದುರಾಳಿ ನಂದನ್ ಕೂಡ ಹೊಸಬರನ್ನ ಸೆಳೆಯಬಲ್ಲ ಮಾಂತ್ರಿಕನಾಗಿರೋದು ಕೂಡ ಅಷ್ಟೇ ಸತ್ಯ. ಅದರಲ್ಲೂ ಬೊಮ್ಮನಹಳ್ಳಿಯಂತಹ ಕ್ಷೇತ್ರ.

ಬೊಮ್ಮನಹಳ್ಳಿಯಲ್ಲಿ ಹೆಚ್ಚು ಮತ ಪಡೀತಾರಾ ನಂದನ್
ಹತ್ತಿರಹತ್ತಿರ ಎರಡು ಲಕ್ಷ ಮತದಾನವಾಗಿರೋ ಈ ಸೆಗ್ಮೆಂಟು ಪರಂಪರಾಗತವಾಗಿ ಬಿಜೆಪಿಯ ಪಾಲಿನದ್ದಾದರೂ, ಅಲ್ಲಿನ ಐಟಿ ಕ್ರೌಡು ನಂದನ್ ಮನೆಯಂಗಳ ಮತ್ತು ಹಿತ್ತಲಿನಂತೆಯೇ! ಹಾಗಾಗಿ ಬೊಮ್ಮನಹಳ್ಳಿಯಲ್ಲಿ ಲೀಡ್ ಪಡೆಯೋರು ಬೆಂಗಳೂರು ಕ್ಷೇತ್ರದಲ್ಲಿ ಗೆಲ್ಲಬಹುದೇನೋ! ನೀವೇನಂತಿರೀ? [ಕೃಪೆ : ಶೈಲಾಬಾನು ಬ್ಲಾಗ್]












Click it and Unblock the Notifications