ಸೋತಿದ್ದೀನಿ ನಿಜ, ಹಗಂತಾ ಓಡಿ ಹೋಗಲ್ಲ: ವೈಎಸ್ವಿ ದತ್ತ!
ಬೆಂಗಳೂರು: ವೈಎಸ್ವಿ ದತ್ತ ಮತ್ತೆ ಶಪಥ ಮಾಡಿದ್ದಾರೆ. ಜೆಡಿಎಸ್ ಟಿಕೆಟ್ ಪಡೆದು ಕಡೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು ದತ್ತ. ಆದರೆ ಈ ಬಾರಿ ಕಡೂರು ಕ್ಷೇತ್ರದ ಜನ ವೈಎಸ್ವಿ ದತ್ತ ಕೈಬಿಟ್ಟು, 'ಕೈ' ಅಭ್ಯರ್ಥಿ ಕೈಹಿಡಿದಿದ್ದಾರೆ. ಹೀಗಿದ್ದಾಗಲೇ ಸೋಲಿನ ಬಗ್ಗೆ ಮೊದಲ ಬಾರಿ ಬಹಿರಂಗವಾಗಿ ಪತ್ರ ಬರೆದು ತೊಡೆತಟ್ಟಿರುವ ವೈಎಸ್ವಿ ದತ್ತ, ಮತ್ತೆ ಬಂದೇ ಬರ್ತೀನಿ ಅಂತಿದ್ದಾರೆ.
ಕಡೂರು ಕ್ಷೇತ್ರದ ಮತದಾರರಿಗೆ ವಿಶೇಷ ಧನ್ಯವಾದ ಅರ್ಪಿಸಿರುವ ವೈಎಸ್ವಿ ದತ್ತ, ಕರ್ನಾಟಕ ವಿಧಾನಸಭೆ ಚುನಾವಣೆಯ ಸೋಲಿನಿಂದ ನಾನು ಕಂಗೆಟ್ಟಿಲ್ಲ ಎಂಬುದನ್ನ ಮನವರಿಕೆ ಮಾಡಿದ್ದಾರೆ. ಅಲ್ಲದೆ ಇದು ತಮ್ಮ ಕೊನೆಯ ಚುನಾವಣೆ ಎಂದು ಮೊದಲೇ ಘೋಷಿಸಿದ್ದರೂ, ಇದೀಗ ಚುನಾವಣಾ ರಾಜಕೀಯ ಬಿಟ್ಟು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವ ಮಾತು ಹೇಳಿದ್ದಾರೆ. ಇದರ ಜೊತೆಗೆ ಪ್ರತಿ ಊರಿಗೂ ಹೋಗಿ, ತಮ್ಮ ಸೋಲಿನ ಬಗ್ಗೆ ಚರ್ಚೆ ನಡೆಸುವುದಾಗಿ ಬಹಿರಂಗ ಪತ್ರ ಬರೆದಿದ್ದಾರೆ.

ತೆನೆ-ಕೈ-ತೆನೆ ಆಟಕ್ಕೆ ಕೊನೆ!
ಹೌದು, ಜೆಡಿಎಸ್ ಒಳಗೆ ಅಸಮಾಧಾನ ಭುಗಿಲೆದ್ದ ಪರಿಣಾಮ ವೈಎಸ್ವಿ ದತ್ತ ಕಾಂಗ್ರೆಸ್ ಸೇರಿದ್ದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದ ಟಿಕೆಟ್ ಸಿಗದ ಕಾರಣಕ್ಕೆ, ಕಾಂಗ್ರೆಸ್ಗೆ ಕೈಕೊಟ್ಟು ಮತ್ತೆ ಜೆಡಿಎಸ್ ಪಕ್ಷಕ್ಕೆ ಜೈ ಎಂದಿದ್ದರು. ಚುನಾವಣೆಗೆ ಇನ್ನೇನು ಕೆಲವೇ ದಿನ ಇರುವ ಮೊದಲು ಜೆಡಿಎಸ್ಗೆ ಜೈ ಎಂದು, ಟಿಕೆಟ್ ಪಡೆದಿದ್ದರು. ಆದರೆ ಮತದಾರರು ವೈಎಸ್ವಿ ದತ್ತ ಅವರ ಹಣೆಬರಹವನ್ನು ಬೇರೆಯದ್ದೇ ರೀತಿಯಲ್ಲಿ ಬರೆದಿದ್ದಾರೆ. ಸೋಲು ಕಂಡಿರುವ ವೈಎಸ್ವಿ ದತ್ತ ಹೊಸ ಶಪಥ ಮಾಡಿದ್ದಾರೆ.
ಕ್ಷೇತ್ರದಲ್ಲಿ ಪ್ರಾಯಶ್ಚಿತ ಪಾದಯಾತ್ರೆ!
ಇನ್ನೊಂದ್ಕಡೆ ಕಡೂರು ಕ್ಷೇತ್ರದಲ್ಲಿ ಪ್ರತಿ ಹಳ್ಳಿಗೆ ಪಾದಯಾತ್ರೆ ಮೂಲಕ ತೆರಳುವ ಬಗ್ಗೆ ಪ್ರತಿಜ್ಞೆ ಮಾಡಿದ್ದಾರೆ ವೈಎಸ್ವಿ ದತ್ತ. ನನಗೆ ಕ್ಷೇತ್ರದ ಜನತೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಕೊನೆಯುಸಿರು ಇರುವವರೆಗೂ ಎಲ್ಲರಲ್ಲೂ ಒಂದಾಗಿ ನನ್ನ ನೆಲದಲ್ಲಿಯೇ ಮಣ್ಣಾಗುತ್ತೇನೆ. ನನ್ನ ಹಲವಾರು ತಪ್ಪುಗಳಿಗೆ ಜನರು ಸರಿಯಾದ ಶಿಕ್ಷೆ ನೀಡಿದ್ದಾರೆ. ತಪ್ಪು ಮಾಡಿದ ನಾನು ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ. ಜೂನ್ 24 ನನ್ನ ಜನ್ಮದಿನ. ಅಂದಿನಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಪಾದಯಾತ್ರೆಯ ಮೂಲಕ ತೆರಳಿ ನನ್ನ ತಪ್ಪುಗಳಿಗಾಗಿ ಕ್ಷಮೆ ಕೋರುತ್ತೇನೆ ಎಂದು ದತ್ತ ತಿಳಿಸಿದ್ದಾರೆ.

ಪಾದಯಾತ್ರೆ ಜೊತೆ ಗ್ರಾಮ ವಾಸ್ತವ್ಯ!
ಇದಿಷ್ಟೇ ಅಲ್ಲ ತಮ್ಮ ಪಾದಯಾತ್ರೆಯಲ್ಲಿ ಹಳ್ಳಿಗಳಲ್ಲೆ ಗ್ರಾಮವಾಸ್ತವ್ಯ ಮಾಡುವ ಬಗ್ಗೆಯೂ ವೈಎಸ್ವಿ ದತ್ತ ತಿಳಿಸಿದ್ದಾರೆ. ಅಲ್ಲದೆ ಈ ಸಂಕಲ್ಪ ಯಾವುದೇ ಚುನಾವಣಾ ದೃಷ್ಟಿಯಿಂದ ಮಾಡಿಲ್ಲ. ಕೇವಲ ಆತ್ಮಾವಲೋಕನ ಮಾತ್ರ. ಎಲ್ಲ ವಿವರಗಳನ್ನು ತಮಗೆ ತಿಳಿಸುತ್ತೇನೆ ಎಂದು ವೈಎಸ್ವಿ ದತ್ತ ಕಡೂರು ಜನತೆಗೆ ಹೇಳಿದ್ದಾರೆ. ಈ ರೀತಿ ವೈಎಸ್ವಿ ದತ್ತ ತಮ್ಮ ಮನದಾಳದ ಮಾತು ಹಂಚಿಕೊಂಡಿರುವುದು ಕ್ಷೇತ್ರದಲ್ಲಿ ವೈರಲ್ ಆಗುತ್ತಿದೆ. ಹಾಗೇ ಕಾರ್ಯಕರ್ತರ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ ಮಾಜಿ ಶಾಸಕ ದತ್ತ.
ಒಟ್ನಲ್ಲಿ ಕಡೂರು ಕ್ಷೇತ್ರದಲ್ಲಿ ಸೋಲು ಕಂಡಿರುವುದು ಜೆಡಿಎಸ್ ಪಕ್ಷಕ್ಕೆ ಮಾತ್ರ ಹಿನ್ನಡೆ ಉಂಟುಮಾಡಿಲ್ಲ. ಈ ಸೋಲು ವೈಎಸ್ವಿ ದತ್ತ ಅವರಿಗೂ ದೊಡ್ಡ ಹಿನ್ನಡೆ ಎನ್ನಬಹುದು. ಈ ಹಿಂದೆ ಇದೇ ಕ್ಷೇತ್ರದಲ್ಲಿ ಶಾಸಕ ಸ್ಥಾನ ಪಡೆದು, ಜನರಿಗೆ ಹತ್ತಿರವಾಗಿದ್ದ ದತ್ತ ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್ ನಾಯಕರು ಟಿಕೆಟ್ ಕೊಡದ ಕಾರಣಕ್ಕೆ ಪುನಃ ಜೆಡಿಎಸ್ ಕೈಹಿಡಿದು ಚುನಾವಣೆ ಎದುರಿಸಿದ್ದರು. ಆದರೆ ಈ ಬಾರಿ ಕಡೂರಿನಲ್ಲಿ ಗೆಲುವು ಸಾಧಿಸುವಲ್ಲಿ ಕಾಂಗ್ರೆಸ್ ಸಕ್ಸಸ್ ಆಗಿದ್ದು, ಮುಂಬರುವ ಲೋಕಸಭಾ ಚುನಾವಣೆ ಜೆಡಿಎಸ್ ಪಾಲಿಗೆ ನಿರ್ಣಾಯಕವಾಗಿದೆ.












Click it and Unblock the Notifications