Congress Guarantee: ಅಡುಗೆ ಮನೆಯಲ್ಲೇ ಕಾಂಗ್ರೆಸ್ ಗೆಲುವು ಡಿಸೈಡ್?
ಬೆಂಗಳೂರು: ಇದಕ್ಕೇ ಅಲ್ವಾ ಹೇಳೋದು ಆಡಳಿತ ವಿರೋಧಿ ಅಲೆ ಅಪ್ಪಳಿಸಿದರೆ ಯಾವುದೇ ಪಕ್ಷವಾದರೂ ಸೋಲು ಕಟ್ಟಿಟ್ಟ ಬುತ್ತಿ ಅಂತಾ. ಈಗ ಕಾಂಗ್ರೆಸ್ ಗೆದ್ದಿದೆ, ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲು ಕಾಂಗ್ರೆಸ್ ತಯಾರಿ ಕೂಡ ನಡೆಸಿದೆ. ಹಾಗಾದ್ರೆ ಕಾಂಗ್ರೆಸ್ ಗೆಲುವು ಡಿಸೈಡ್ ಆಗಿದ್ದೆಲ್ಲಿ? ಅಡುಗೆ ಮನೆಯಲ್ಲೇ ಕಾಂಗ್ರೆಸ್ ಗೆಲುವು ನಿರ್ಧಾರ ಆಯ್ತಾ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಕರ್ನಾಟಕದ ಮತದಾರ ಪ್ರಭು ಯಾವುದೇ ಪಕ್ಷವನ್ನೂ ಈವರೆಗೂ ಓಲೈಕೆ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಎಡವಿದ್ದಾಗಲೂ ಕನ್ನಡಿಗರು ತಕ್ಕಪಾಠ ಕಲಿಸಿದ್ದಾರೆ. ಈಗ ಬಿಜೆಪಿ ಸರ್ಕಾರ ಎಡವಟ್ಟಿಗೆ ಬೆಲೆಯನ್ನ ತೆರುತ್ತಿದೆ. ಈ ಮೂಲಕ ಕನ್ನಡಿಗರಿಗೆ ಪಕ್ಷ ಮುಖ್ಯವಲ್ಲ, ಅಭಿವೃದ್ಧಿಯೇ ಪ್ರಥಮ ಅನ್ನೋ ಸಂದೇಶ ದಿಲ್ಲಿ ಬಾಗಿಲು ತಲುಪಿದೆ. ಇದು ಯಾವ ನಾಯಕನ ಕಾಲಕ್ಕೂ ಬದಲಾಗಲ್ಲ, ಹಿಂದೆ ಇಂದಿರಾ ಗಾಂಧಿ ಸರ್ಕಾರದ ತಪ್ಪಿಗೂ ಉತ್ತರ ನೀಡಿದ್ದರು ಕನ್ನಡಿಗರು. ಈಗ ಬಿಜೆಪಿ ಸರದಿ ಎನ್ನಬಹುದು. ಹಾಗಾದರೆ 2023ರ ಕರ್ನಾಟಕ ಚುನಾವಣೆ ಹೇಳಿದ ರಾಜಕೀಯ ಪಾಠವೇನು? ಮುಂದೆ ಓದಿ.

ಕಾಂಗ್ರೆಸ್ ಗೆಲುವಿಗೆ ಕಾರಣವೇನು?
ಈ ಪ್ರಶ್ನೆಗೆ ವಿಪಕ್ಷ ನಾಯಕರ ಒನ್ಲೈನ್ ಆನ್ಸರ್ 'ಉಚಿತ ಉಡುಗೊರೆ' ಎಂದು. ಆದರೆ ಒಳಗೆ ಬೇರೆಯದ್ದೇ ತಂತ್ರ ನಡೆದಿತ್ತು, ಉಚಿತ ಉಡುಗೊರೆ ವಿಚಾರವನ್ನ ಪ್ರಸ್ತಾಪ ಮಾಡಿ ಬಿಜೆಪಿ ನಾಯಕರು ವಾಗ್ದಾಳಿ ನಡೆಸಲು ಮುಂದಾದಾಗ ಕಾಂಗ್ರೆಸ್ ನಾಯಕರು ಜಾಣ ನಡೆ ಅನುಸರಿಸಿದ್ದರು. ಉಚಿತ ಉಡುಗೊರೆ ವಿಚಾರ ನೆಗೆಟಿವ್ ಆಗ್ತಿದೆ ಎಂದಾಗ, ಖುದ್ದು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಉಚಿತ ಉಡುಗೊರೆಗಳ ಅಗತ್ಯತೆ ಪ್ರಸ್ತಾಪ ಮಾಡಿದರು. ಅಂದರೆ ಉಚಿತ ಉಡುಗೊರೆ ಯಾಕೆ ಅಗತ್ಯ ಎಂಬುದನ್ನ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಡಿಸಿ ಬಿಡಿಸಿ ಹೇಳಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರಿ ಶಕ್ತಿ ತುಂಬಿತ್ತು.
ಅಡುಗೆ ಮನೆಯಲ್ಲಿ ಡಿಸೈಡ್ ಆಯ್ತಾ ಗೆಲುವು?
ಅಷ್ಟಕ್ಕೂ ಈ ಮಾತಿನ ಅರ್ಥ ಮಹಿಳಾ ಮತದಾರರ ಮೇಲೆ ಕಾಂಗ್ರೆಸ್ ಘೋಷಿಸಿದ ಯೋಜನೆಗಳು ಪ್ರಭಾವ ಬೀರಿವೆ ಎಂಬುದು. ಹಗಂತಾ ಮಹಿಳೆ ಅಡುಗೆ ಮನೆಗೆ ಸೀಮಿತವಲ್ಲ, ಇಡೀ ಜಗತ್ತನ್ನೇ ಆಳುವ ಮಟ್ಟಕ್ಕೆ ಈ ನವಯುಗದ ಭಾರತೀಯ ನಾರಿ ಬೆಳೆದಿದ್ದಾಳೆ. ಅದರಲ್ಲೂ ಕನ್ನಡ ನಾಡಿನ ಹೆಣ್ಣು ಮಕ್ಕಳು ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ. ಆದರೆ ಬಡವರ ಮನೆ ಮಕ್ಕಳು? ಹೌದು ಜೀವನ ನಡೆಸಲು ಕೂಡ ಪರದಾಡು ಪರಿಸ್ಥಿತಿ ಎದುರಾಗುತ್ತಿದೆ. ಅದರಲ್ಲೂ ಬೆಲೆ ಏರಿಕೆ ಬಿಸಿ, ಆಕ್ರೋಶ ಈಬಾರಿ ಅಡುಗೆ ಮನೆಯಲ್ಲೇ ಸ್ಫೋಟವಾಗಿತ್ತು. ಇದನ್ನೇ ಕಾಂಗ್ರೆಸ್ ತನ್ನ ಪ್ರಥಮ ಅಸ್ತ್ರ ಮಾಡಿಕೊಂಡಿತ್ತು.

ಅಡುಗೆ ಮನೆಯಿಂದ ಮತದಾನದ ತನಕ!
ಮೊದಲೇ ಹೇಳಿದಂತೆ ಬೆಲೆ ಏರಿಕೆ ಬಿಸಿಯನ್ನ ಕಾಂಗ್ರೆಸ್ ನಾಯಕರು ಸರಿಯಾಗಿ ಬಳಸಿಕೊಂಡರು. ಅದ್ರಲ್ಲೂ ಸಿಲಿಂಡರ್ ಬಗ್ಗೆ ಬರುತ್ತಿದ್ದ ಜಾಹೀರಾತುಗಳನ್ನ ನೀವು ಕೂಡ ಯುಟ್ಯೂಬ್ ತೆರೆದಾಗ, ನ್ಯೂಸ್ ಚಾನೆಲ್ ನೋಡುವಾಗ ನೋಡಿರ್ತೀರಿ. ಹೀಗೆ ಜನರ ಆಕ್ರೋಶವನ್ನ ಸರಿಯಾದ ಸಮಯಕ್ಕೆ ಕಾಂಗ್ರೆಸ್ ಬಳಸಿಕೊಂಡಿದೆ. ಹಿಂದೆ ಅಂದ್ರೆ ಯುಪಿಎ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ ಎಷ್ಟಿತ್ತು, ಈಗ ಯಾಕೆ ಡಬಲ್ ಆಗುತ್ತಿದೆ ಎಂಬ ಪ್ರಶ್ನೆ ಮುಂದಿಟ್ಟು ಮತದಾರನನ್ನೇ ಪ್ರಶ್ನೆ ಕೇಳಿತ್ತು. ಈಗ ಕನ್ನಡಿಗರು ಕೊಟ್ಟ ಉತ್ತರ ದೇಶದ ಮುಂದಿದೆ.
ರಾಜ್ಯಕ್ಕೆ ಉಚಿತ ಉಡುಗೊರೆ ಬೇಕಾ?
ಅರೆರೆ ಎಲ್ಲೆಲ್ಲೂ ಚರ್ಚೆ ಆಗುತ್ತಿರುವ ವಿಚಾರ ಇದೇ ಅಂಶ. ಹಾಗಾದರೆ ನೀವೆ ಹೇಳಿ ಕರ್ನಾಟಕಕ್ಕೆ ಉಚಿತ ಉಡುಗೊರೆಗಳು ಬೇಕಾ? ಹೌದು ಬೇಕು ಎಂದಿತ್ತು ಕಾಂಗ್ರೆಸ್. ಉಚಿತ ಉಡುಗೊರೆ ಯಾವಾಗ ಬೇಕು ಅಂದರೆ ಸಮಾಜದಲ್ಲಿ ಸಮಾನತೆ ಮರೆಯಾದಾಗ, ಸಮಾಜದಲ್ಲಿ ಬಡವನ ಬದುಕು ಹೀನಾಯವಾದಾಗ, ಸಮಾಜದಲ್ಲಿ ಸಾಮಾನ್ಯ ಜೀವನ ನಡೆಸುವುದಕ್ಕೂ ಜನ ಪರದಾಡುವಾಗ ಉಚಿತ ಉಡುಗೊರೆ ಬೇಕೆ. ಹಗಂತಾ ಉಚಿತಗಳ ಪರಿಣಾಮ ಸಮಾಜ ನಾಶವಾಗಲ್ಲ ಎಂಬ ಸತ್ಯ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದರು ಕಾಂಗ್ರೆಸ್ ಲೀಡರ್ಸ್.
40% ಆರೋಪ VS ಉಚಿತ ಉಡುಗೊರೆ
ಕಾಂಗ್ರೆಸ್ ಘೋಷಿಸಿದ್ದ ಉಚಿತ ಉಡುಗೊರೆ ವಿರುದ್ಧ ಬಿಜೆಪಿ ಮಾತನಾಡುವಾಗ ಕೈ ನಾಯಕರು ಮತ್ತೊಂದು ಬಾಣ ರೆಡಿಯಾಗಿ ಇಟ್ಟುಕೊಂಡಿದ್ದರು. ಅದೇ 40% ಕಮಿಷನ್ ಆರೋಪ, ಹೀಗೆ ಬಿಜೆಪಿ ನಾಯಕರು 'ಇಷ್ಟು ಹಣ ಎಲ್ಲಿಂದ ತಂದು ಉಚಿತ ಉಡುಗೊರೆ ಕೊಡ್ತೀರಿ?' ಎಂದು ಪ್ರಶ್ನಿಸಿದಾಗ '40% ಕಮಿಷನ್ಗೆ ಬ್ರೇಕ್ ಹಾಕಿ ಜನರಿಗೆ ಅಕ್ಕಿ, ಸಹಾಯಧನ, ಉಚಿತ ವಿದ್ಯುತ್ ನೀಡುತ್ತೇವೆ' ಎಂದು ಉತ್ತರಿಸಿದ್ದರು ಕಾಂಗ್ರೆಸ್ ನಾಯಕರು. ಇಂತಹ ಪ್ರತಿಕ್ರಿಯೆಗಳು ಕರ್ನಾಟಕ ಜನರಲ್ಲಿ ಕಾಂಗ್ರೆಸ್ನ ಉಚಿತ ಉಡುಗೊರೆ ಬಗ್ಗೆ ಭರವಸೆ ಮೂಡುವಂತೆ ಮಾಡಿತ್ತು.
ನಂದಿನಿ VS ಅಮುಲ್ ಹೋರಾಟ!
ಹೌದು.. ಈ ವಿಚಾರ ಪ್ರಸ್ತಾಪ ಮಾಡದೆ ಕಾಂಗ್ರೆಸ್ ಗೆಲುವಿನ ಬಗ್ಗೆ ಮಾತು ಮುಗಿಸಲು ಸಾಧ್ಯವೇ ಇಲ್ಲ. ಈ ವಿಚಾರ ಪ್ರಸ್ತಾಪ ಆದಾಗ ಮೊದಲು ಆಂದೋಲನ ಶುರುವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ. ನಂತರ ಈ ಬಗ್ಗೆ ದೊಡ್ಡ ಫೈಟ್ ಶುರುವಾಗಿತ್ತು. ಆಗ ಅಧಿಕೃತವಾಗಿ ಕಾಂಗ್ರೆಸ್ ಲೀಡರ್ಸ್ ಎಂಟ್ರಿಯಾದ್ರು, ಅದ್ರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ನಂದಿನಿ ಬ್ರ್ಯಾಂಡ್ ವಿಚಾರದಲ್ಲಿ ಪೋಸ್ಟ್ ಮಾಡುತ್ತಿದ್ದ ಪ್ರತಿಯೊಂದು ಟ್ವೀಟ್ ಕೂಡ ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಒದಗಿಸಿಕೊಟ್ಟಿತ್ತು.
ಬ್ಯಾಂಕುಗಳ ವಿಲೀನ ವಿಚಾರ ಪ್ರಸ್ತಾಪ
ನಂದಿನಿ ಬ್ರ್ಯಾಂಡ್ ವಿಚಾರದಲ್ಲಿ ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಆರೋಪ ಮಾಡುವಾಗ, ಮತ್ತೊಂದು ಅಸ್ತ್ರ ಪ್ರಯೋಗಿಸಿದ್ರು. ಕೇಂದ್ರಸರ್ಕಾರ ಕರ್ನಾಟಕ ಮೂಲದ ಬ್ಯಾಂಕ್ಗಳನ್ನ ವಿಲೀನ ಮಾಡಿದ ವಿಚಾರವನ್ನ ಸರಿಯಾಗಿ ಬಳಸಿಕೊಂಡರು. ಕನ್ನಡಿಗರ ಹೆಮ್ಮೆ ನಮ್ಮ ಕರಾವಳಿಯಲ್ಲಿ ಹುಟ್ಟಿದ್ದ ಬ್ಯಾಂಕ್ಗಳ ವಿಲೀನ ಮಾಡಿ ಕನ್ನಡಿಗರ ಸಂಪತ್ತನ್ನ ನಷ್ಟದಲ್ಲಿದ್ದ ಬ್ಯಾಂಕ್ಗಳಿಗೆ ಸುರಿದಿದ್ದಾರೆಂದು ಆರೋಪ ಮಾಡಿದ್ರು.
ಅಲ್ಲದೆ ಕನ್ನಡಿಗರ ಬ್ಯಾಂಕ್ಗಳನ್ನ ಮುಳುಗಿಸಿದ ನಂತರ ಕನ್ನಡಿಗರ ಮತ್ತೊಂದು ಬ್ರ್ಯಾಂಡ್, ರೈತನ ಮನೆಯ ಹಸಿವು ನೀಗಿಸುತ್ತಿರುವ ನಂದಿನಿ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಕೊಟ್ಟ ಮಾತು ಪೂರೈಸುತ್ತಾ ಕಾಂಗ್ರೆಸ್?
ಉಚಿತ ಉಡುಗೊರೆ ವಿಚಾರಕ್ಕಿಂತ ಕರ್ನಾಟಕದಲ್ಲಿ ಬೆಲೆ ಏರಿಕೆ ಬಿಸಿ, ಆಡಳಿತ ವಿರೋಧಿ ಅಲೆ & ನಂದಿನಿ VS ಅಮುಲ್ ಆಂದೋಲನ ಕಾಂಗ್ರೆಸ್ಗೆ ದೊಡ್ಡ ಗಿಫ್ಟ್ ಕೊಟ್ಟಂತೆ ಕಾಣುತ್ತಿದೆ. ಅಂಡರ್ ಕರೆಂಟ್ ಎಂದು ಕರೆಯುವ ಮತದಾರರ ಗುಪ್ತ ಗಾಮಿನಿಯಂತಹ ನಿರ್ಧಾರ ಸರ್ಪ್ರೈಸ್ ನೀಡಿದೆ. ಇದೆಲ್ಲದರ ಜೊತೆಗೆ ಕಾಂಗ್ರೆಸ್ ನಾಯಕರು ತಾವು ಕೊಟ್ಟ ಮಾತನ್ನ ಮೊದಲು ಪೂರೈಸಬೇಕಿದೆ, ಅದರ ಜತೆ ರಾಜ್ಯದಲ್ಲಿ ತಾವೇ ಆರೋಪ ಮಾಡಿದಂತೆ ತಾಂಡವ ಆಡುತ್ತಿರುವ ಕಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ. ಹಾಗಿದ್ದರೆ ಮಾತ್ರ ಕಾಂಗ್ರೆಸ್ ಮುಂದೆ ಮತ್ತಷ್ಟು ಬಲಗೊಳ್ಳಲು ಸಾಧ್ಯ, ಇಲ್ಲವಾದರೆ ಕನ್ನಡಿಗರ ನಿರ್ಧಾರ ಬದಲಾಗಬಹುದು. ಯಾಕಂದ್ರೆ ಮೊದಲೇ ಹೇಳಿದಂತೆ ಇಲ್ಲಿ ಕನ್ನಡಿಗರಿಗೆ ಪಕ್ಷನಿಷ್ಠೆ ಅಲ್ಲ ನಿಜವಾದ ಅಭಿವೃದ್ಧಿ ಮುಖ್ಯ.












Click it and Unblock the Notifications