ಇಜ್ಞಾನ ಟ್ರಸ್ಟ್ ನಿಂದ 'ಕನ್ನಡ: ನಿನ್ನೆ, ಇಂದು ಮತ್ತು ನಾಳೆ' ವಿಚಾರಸಂಕಿರಣ
ಬೆಂಗಳೂರು, ನವೆಂಬರ್ 15: ಕನ್ನಡ ಭಾಷೆಯ ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ಕುರಿತ 'ಕನ್ನಡ: ನಿನ್ನೆ, ಇಂದು ಮತ್ತು ನಾಳೆ' ವಿಚಾರಸಂಕಿರಣ ಬರುವ ನವೆಂಬರ್ 19ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದೆ.
ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಈ ವಿಚಾರಸಂಕಿರಣ ನಡೆಯಲಿದ್ದು ಕಾರ್ಯಕ್ರಮ ನವೆಂಬರ್ 19, 2017ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ.

ಹಿರಿಯ ವಿದ್ವಾಂಸರಾದ ಟಿ. ವಿ. ವೆಂಕಟಾಚಲ ಶಾಸ್ತ್ರೀ, ಲೇಖಕರಾದ ಎಸ್. ದಿವಾಕರ್ ಹಾಗೂ ವಸುಧೇಂದ್ರ ಕನ್ನಡದ ನಿನ್ನೆ, ಇಂದು ಹಾಗೂ ನಾಳೆಗಳ ಕುರಿತು ತಮ್ಮ ವಿಚಾರ ಮಂಡಿಸಲಿದ್ದಾರೆ. ಇವರೊಡನೆ ಚಿಂತಾಮಣಿ ಕೊಡ್ಲೆಕೆರೆ, ಜಿ. ಎಂ. ಕೃಷ್ಣಮೂರ್ತಿ ಹಾಗೂ ಮಂಜುನಾಥ ಕೊಳ್ಳೇಗಾಲ ಅವರೂ ವಿಚಾರಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ನವಕರ್ನಾಟಕ ಪ್ರಕಾಶನದ ಎ. ರಮೇಶ ಉಡುಪ, ಇಜ್ಞಾನ ಟ್ರಸ್ಟ್ನ ಟಿ. ಎಸ್. ಗೋಪಾಲ್ ಹಾಗೂ ಎರಡೂ ಸಂಸ್ಥೆಗಳ ಸದಸ್ಯರು ಉಪಸ್ಥಿತರಿರಲಿದ್ದಾರೆ.
ನವಕರ್ನಾಟಕ ಪ್ರಕಾಶನದ 'ನವಕರ್ನಾಟಕ ಕನ್ನಡ ಕಲಿಕೆ' ಮಾಲಿಕೆಯ 18 ಕೃತಿಗಳನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಗುವುದು. ಈ ಪುಸ್ತಕಗಳನ್ನು ರಾಜ್ಯದೆಲ್ಲೆಡೆಯ 150ಕ್ಕೂ ಹೆಚ್ಚು ಶಾಲೆಗಳಿಗೆ ಉಚಿತವಾಗಿ ವಿತರಿಸುವ ಇಜ್ಞಾನ ಟ್ರಸ್ಟ್ ಕಾರ್ಯಕ್ರಮ 'ಕಲಿಕೆಗೆ ಕೊಡುಗೆ' ಹಾಗೂ ಇಜ್ಞಾನ ಟ್ರಸ್ಟ್ ಜಾಲತಾಣವನ್ನೂ ಅತಿಥಿಗಳು ಲೋಕಾರ್ಪಣೆ ಮಾಡಲಿದ್ದಾರೆ. ಪುಸ್ತಕ ವಿತರಣೆಗಾಗಿ ಶಾಲೆಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು ಆಯ್ಕೆಯಾದ ಶಾಲೆಗಳಿಗೆ ಈ ಕಾರ್ಯಕ್ರಮದ ನಂತರ ಪುಸ್ತಕಗಳನ್ನು ತಲುಪಿಸಲಾಗುವುದು.
ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ಕನ್ನಡ ಜಾಲತಾಣ 'ಇಜ್ಞಾನ ಡಾಟ್ ಕಾಮ್' ಅನ್ನು ನಡೆಸುತ್ತಿರುವ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ವಿವಿಧ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಇಜ್ಞಾನ ಟ್ರಸ್ಟ್ ರೂಪಿಸಿರುವ 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ' ಇತ್ತೀಚೆಗೆ ಬಿಡುಗಡೆಯಾಗಿದೆ.












Click it and Unblock the Notifications