ಮೇಲಧಿಕಾರಿ ಮಾತು ಧಿಕ್ಕರಿಸಿ ಕರ್ತವ್ಯ ನಿರ್ವಹಿಸಿದ್ದ ಇನ್ಸ್ಪೆಕ್ಟರ್ ಅಮಾನತು
ಬೆಂಗಳೂರು, ಜೂನ್ 14: ಪರ್ಮಿಟ್ ಇಲ್ಲದ ಲಾರಿಗಳನ್ನು ಬಿಟ್ಟುಬಿಡುವಂತೆ ಹೇಳಿದ ತನ್ನ ಮೇಲಾಧಿಕಾರಿಗೆ ಆವಾಜ್ ಹೊಡೆದು ಸುದ್ದಿಯಾಗಿದ್ದ ದಕ್ಷ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರನ್ನು ಇಲಾಖೆ ಅಮಾನತು ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರು ಮೊನ್ನೆಯಷ್ಟೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಹಿಡಿದಿದ್ದರು.
ಆದರೆ ವಿಜಯಪುರ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ ಅವರು ತಮ್ಮದೇ ವೃತ್ತ ವ್ಯಾಪ್ತಿಗೆ ಒಳಪಡುವ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರಿಗೆ ಕರೆ ಮಾಡಿ ಲಾರಿಗಳನ್ನು ಬಿಟ್ಟುಬಿಡುವಂತೆ ಹೇಳಿದ್ದರು, ಇದರಿಂದ ಕೆರಳಿದ ಶ್ರೀನಿವಾಸ್ ತನ್ನ ಮೇಲಾಧಿಕಾರಿಗೆ ಆವಾಜ್ ಹೊಡೆದು ತಾನು ಲಾರಿಗಳನ್ನು ಬಿಡುವುದಿಲ್ಲ ಎಂದಿದ್ದರು.

ಶ್ರೀನಿವಾಸ್ ಅವರು ತಮ್ಮ ಮೇಲಾಧಿಕಾರಿಗೆ ಆವಾಜ್ ಹೊಡೆದ ವಿಡಿಯೋ ವೈರಲ್ ಆಗಿತ್ತು. ಅವರ ದಕ್ಷತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಘಟನೆ ನಡೆದ ಎರಡೇ ದಿನಕ್ಕೆ ಇಲಾಖೆಯು ಅವರನ್ನು ಅಮಾನತು ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಭೀಮಾಶಂಕರ್ ಗುಳೇದ್ ಅವರು ಪಿಎಸ್ಐ ಶ್ರೀನಿವಾಸ್ ಅವರನ್ನು ಇಂದು ಅಮಾನತು ಮಾಡಿದ್ದು, ಘಟನೆ ಬಗ್ಗೆ ಇಲಾಖೆ ವಿಚಾರಣೆ ನಡೆಯಲಿದೆ.
ಶ್ರೀನಿವಾಸ್ ಅವರು ನಿಷ್ಠಾವಂತ ಪೊಲೀಸ್ ಅಧಿಕಾರಿ ಎಂಬ ಹೆಸರು ಉಳ್ಳವರಾಗಿದ್ದು, ಈ ಹಿಂದೆ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು.












Click it and Unblock the Notifications