ಮಾಕ್ಸಿಂ ಗಾರ್ಕಿಯ' ಈ ಕೆಳಗಿನವರು' ನಾಟಕ ನೋಡಿ
ಬೆಂಗಳೂರು, ಸೆ.20 : 'ಅಭಿನಯ, ರಂಗವಿನ್ಯಾಸ ಹಾಗು ಶಿಕ್ಷಣದಲ್ಲಿ ರಂಗಭೂಮಿ' - ಈ ವಿಷಯಗಳಲ್ಲಿ ರಾಷ್ಟ್ರೀಯ ನಾಟಕ ಶಾಲೆ ತರಬೇತಿ ಶಿಬಿರ ನಡೆಸಿಕೊಂಡು ಬಂದಿದ್ದು ಈಗ ಮುಕ್ತಾಯ ಹಂತದಲ್ಲಿದೆ. ಈ ಶಿಬಿರದಲ್ಲಿ ರಾಜ್ಯದ 20 ಜನ ಪ್ರಸ್ತುತ ತರಬೇತಿಯ ಮೂಸೆಯಿಂದ "ಈ ಕೆಳಕಗಿನವರು" ಎಂಬ ನಾಟಕ ನಿರ್ಮಿಸಲಾಗಿದೆ. ಮೂಲತ : ಮಾಕ್ಸಿಂ ಗಾರ್ಕಿಯ ರಶಿಯನ್ ಕೃತಿ ಲೋಯರ್ ಡೆಪ್ತ್ ನ ಕನ್ನಡ ರೂಪಾಂತರ "ಈ ಕೆಳಗಿನವರು." ಈ ನಾಟಕವನ್ನು ಬಿ.ಟಿ. ದೇಸಾಯಿಯವರು ಕನ್ನಡಕ್ಕೆ ವಿಶಿಷ್ಟವಾಗಿ ಭಾವಾಂತರಿಸಿದ್ದಾರೆ.
ಚಿದಂಬರ ರಾವ್ ಜಂಬೆ ನಿರ್ದೇಶನದ ಈ ನಾಟಕದ ಮೊದಲ ಪ್ರದರ್ಶನಗಳು ಸೆಪ್ಟೆಂಬರ್ 20 ರಿಂದ 22 ರವರೆಗೆ ಬೆಂಗಳೂರಿನ ಗುರುನಾನಕ್ ಭವನದಲ್ಲಿ ನಡೆಯಲಿದೆ. ನಂತರ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 15, 2013 ರವರೆಗೆ ಕರ್ನಾಟಕ ರಾಜ್ಯದಾದ್ಯಂತ ಈ ನಾಟಕ ಪ್ರದರ್ಶನಗಳು ನಡೆಯಲಿವೆ.

ದೇಶದ ಬೇರೆ ಭಾಗಗಳಿಗೂ ರಾಷ್ಟ್ರೀಯ ನಾಟಕ ಶಾಲೆಯನ್ನು ವಿಸ್ತರಿಸಬೇಕು ಎನ್ನುವ ಆಶಯದ ಮೊದಲ ಪ್ರಯತ್ನವಾಗಿ ಶುರುವಾದ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಅಧ್ಯಾಯವು ಈವರೆಗೆ 'ಅಭಿನಯ, ರಂಗವಿನ್ಯಾಸ ಹಾಗು ಶಿಕ್ಷಣದಲ್ಲಿ ರಂಗಭೂಮಿ' - ಈ ವಿಷಯಗಳಲ್ಲಿ ಹಲವಾರು ಶಿಬಿರಗಳನ್ನು ನಡೆಸಿಕೊಂಡು ಬಂದಿದೆ.
ಪ್ರಸ್ತುತ 6 ತಿಂಗಳ "ರಂಗ ಪ್ರದರ್ಶನ ಮತ್ತು ಕೌಶಲಗಳಲ್ಲಿ ಪರಿಣಿತ ತರಬೇತಿ" ಶಿಬಿರವನ್ನು ನಾಟಕ ನಿರ್ಮಿತಿಯ ಪ್ರಕ್ರಿಯೆಗಳನ್ನು ಕೂಲಂಕುಶವಾಗಿ ಹಾಗು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಮುಖಾಂತರ ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನು ಹಾಗೂ ಜ್ಞಾನವನ್ನು ಸಾಧಿಸಬೇಕೆಂಬ ಯುವ ಕನಸುಗಳಿಗೆ ಈ ಶಿಬಿರ ಮುನ್ನುಡಿ ಬರೆದಿದೆ.
ಈ ಶಿಬಿರದಲ್ಲಿ ದೇಶದ ನುರಿತ ರಂಗತಜ್ಞರು, ಸಾಹಿತಿಗಳು, ಕವಿಗಳು ಮತ್ತು ವಿಮರ್ಶಕರುಗಳಾದ ಡಾ: ಕೆ. ಮರುಳಸಿದ್ದಪ್ಪ, ಏ.ಎಲ್. ನಾಗಭೂಷಣ್, ಎಸ್.ಜಿ. ಸಿದ್ದರಾಮಯ್ಯ, ಹೆಚ್.ಎಸ್. ವೆಂಕಟೇಶಮೂರ್ತಿ, ಪ್ರತಿಭಾ ನಂದಕುಮಾರ್, ಹೆಚ್. ಎಲ್. ಪುಷ್ಪಾ. ಜಿ.ಕೆ. ಗೋವಿಂದರಾವ್, ರಂಗತಜ್ಞರುಗಳಾದ ಅನಾಮಿಕ ಅಕ್ಸರ್, ರಘುನಂದನ್, ಅನಿರುದ್ಧ ಕುರುವಾಡ್, ಮಲ್ಲಿಕಾಪ್ರಸಾದ್, ಎಂ.ಎಸ್. ಸತ್ಯು, ಸುರೇಶ್ ಅನಗಳ್ಳಿ, ಚನ್ನಕೇಶವ ಜಿ. ಅಶೋಕ್ ಸಾಗರ್, ಭಗತ್ ಅಮಿತೇಶ್ ಗ್ರೋವರ್, ಸಂತೋಷ್ ಪೈ, ಪ್ರಸನ್ನ ಡಿ. ಅಂಬಾ ಸನ್ಯಾಲ್ ತರಬೇತಿ ನೀಡಿ ಶಿಬಿರಾರ್ಥಿಗಳಿಗೆ ಹೊಸ ದರ್ಶನಗಳನ್ನು ತೆರೆದಿರಿಸಿದ್ದಾರೆ.

ಸಿ.ಐ.ಈ.ಎಫ್.ಎಲ್. ನಿಂದ ಇಂಗ್ಲೀಷ್ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವ ಬಿ.ಟಿ. ದೇಸಾಯಿ ಪ್ರಸ್ತುತ ಹೈದರಾಬಾದಿನಲ್ಲಿ ನೆಲೆಸಿದ್ದಾರೆ.ಧಾರವಾಡದಲ್ಲಿ ಕಿಟೆಲ್ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದಾಗ ಗೆಳೆಯರಾದ ಗಿರಡ್ಡಿ ಗೋವಿಂದರಾಜ, ಸಿದ್ದಲಿಂಗಪಟ್ಟಣ ಶೆಟ್ಟಿ, ಚಂದ್ರಶೇಖರ ಪಾಟೀಲರೊಡಗೂಡಿ ಅಂತರಂಗವೆಂಬ ಅಮೇಚೂರ್ ನಾಟಕ ಕೂಟವನ್ನು ಕಟ್ಟಿ ಆ ಕೂಟದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಮ್ಯಾಕ್ಸಿಂ ಗಾರ್ಕಿ : ಮ್ಯಾಕ್ಸಿಂ ಗಾರ್ಕಿ ಅನ್ನುವುದು ಅಲೆಕ್ಸಿ ಮಾಕ್ಸಿಮೋವಿಚ್ ಪೆಶ್ಕೋವ್ ನ ಕಾವ್ಯ ನಾಮ. ಮಾರ್ಚ್ 16, 1868ರಿಂದ ಜೂನ್ 14, 1936ರ ವರೆಗೆ ಜೀವಿಸಿದ್ದ. ವೋಲ್ಗಾ ನದಿಯ ಡೆಯಲ್ಲಿದ್ದ ನಿಝಿನಿ ನೋವ್ಗೊರಾದ್ ಎಂಬ ಊರಿನ ಬಡ ರಶಿಯನ್ ಕುಟುಂಬದಲ್ಲಿ ಹುಟ್ಟಿದ ಗಾರ್ಕಿ ಎಳೆವಯಸ್ಸಿನಲ್ಲೇ ತಂದೆ ತಾಯಿಯನ್ನೂ ಕಳೆದುಕೊಂಡು ಅನಾಥನಾದ. ಅಜ್ಜಿಯ ಆರೈಕೆಯಲ್ಲಿ ಬೆಳೆದ ಅಜ್ಜ ಕಥೆ ಹೇಳುವ ಕಲೆಯೊಂದಿಗೆ ಚಪ್ಪಲಿ ಹೊಲಿಯುವ, ವಿಗ್ರಹಗಳಿಗೆ ಬಣ್ಣಬಳಿಯುವ ಕಸುಬುಗಳನ್ನೂ ಕರಗತ ಮಾಡಿಕೊಂಡ ಹಡಗಿನ ಅಡುಗೆಯವನ ಸಹಾಯಕನಾಗಿಯೂ ಕೆಲಸ ಮಾಡಿದ್ದು ಹನ್ನೆರಡನೆಯ ವಯಸಿನಲ್ಲೇ ಮನೆಯಿಂದ ಓಡಿ ಹೋಗಿ, ಸಿಕ್ಕ ಸಿಕ್ಕ ಕೆಲಸ ಮಾಡುತ್ತ ಹಸಿವು, ಸಂಕಟಗಳನ್ನು ಅನುಭವಿಸಿದ.
ಬದುಕಿನ ಕಹಿ ತಾಳಲಾರದೆ ಆತ್ಮಹತ್ಯೆಗೆ ಪ್ರಯತ್ನಿಸಿಯೂ ಬದುಕಿ ಉಳಿದ. ಆ ಕಾರಣದಿಂದಲೇ ಕಹಿ ಎಂಬ ಅರ್ಥದ ಗಾರ್ಕಿ ಎಂಬ ಕಾವ್ಯನಾಮ ಇರಿಸಿಕೊಂಡ. ವಿಶ್ವವಿದ್ಯಾಲಯಕ್ಕೆ ಸೇರಿಯೂ ಓದು ಮುಗಿಸದೆ ರಶಿಯಾದಲ್ಲೆಲ್ಲ ಅಲೆದಾಡುತ್ತ ಮಾರಾಟಗಾರ, ರೇಲ್ವೆ ಕೆಲಸಗಾರ, ಉಪ್ಪು ತೆಗೆಯುವ ಕಾರ್ಮಿಕ, ವಕೀಲನ ಸಹಾಯಕ ಎಂದೆಲ್ಲ ದುಡಿಯುತ್ತ ಕೊನೆಗೆ ಪತ್ರಿಕೋದ್ಯಮಿಯಾದ. ಅವನ ಈ ಅನುಭವಗಳೆಲ್ಲ ‘ನನ್ನ ವಿಶ್ವವಿದ್ಯಾಲಯಗಳು' ಎಂಬ ಆತ್ಮಚರಿತ್ರೆಯ ಬರಹದಲ್ಲಿ, ಇತರ ಬರಹಗಳಲ್ಲಿ ವ್ಯಕ್ತವಾಗಿವೆ. ರಶಿಯಾದ ಮಹಾನ್ ಲೇಖಕರಾದ ಚೆಕಾವ್ ಮತ್ತು ಟಾಲ್ಸ್ ಟಾಯ್ ರ ಗೆಳೆತನ ದೊರೆಯಿತು.

ರಶಿಯಾದ ಚಕ್ರವರ್ತಿಗಳ ಆಳ್ವಿಕೆಯಲ್ಲಿ ಕಷ್ಟ ಅನುಭವಿಸುತಿದ್ದ ಬಡವರು, ಅನಾಥರು, ಸಾಮಾನ್ಯರು, ಅಲೆಮಾರಿಗಳು, ಜಿಪ್ಸಿಗಳು, ಹೊಸ ಸಮಾಜದ ಕನಸುಗಾರರ ಬಗ್ಗೆ ಬರೆಯುತಿದ್ದರಿಂದ ಸೆರೆವಾಸವನ್ನೂ ಅನುಭವಿಸಿದ. ಮುಂದೆ ರಶಿಯನ್ ಕ್ರಾಂತಿ ನಂತರ ಲೆನಿನ್ ಮತ್ತು ಕಮ್ಯುನಿಸ್ಟ್ ಪಕ್ಷದ ಟೀಕೆ ಮಾಡಿದನೆಂಬ ಕಾರಣಕ್ಕೆ ಸ್ಟಾಲಿನ್ನ ಕೋಪಕ್ಕೆ ಗುರಿಯಾದ. ಅವನು 1936ರಲ್ಲಿ ತೀರಿಕೊಂಡದ್ದರ ಹಿಂದೆ ಸ್ಟಾಲಿನ್ ಕೈವಾಡವಿತ್ತು ಅನ್ನುವ ಊಹೆಗಳು ಹುಟ್ಟಿಕೊಂಡವು.
ಈ ಕೆಳಗಿನವರು ನಾಟಕದ ವಿವರ : "ಈ ಕೆಳಗಿನವರು" ಅನ್ನುವ ನಾಟಕ 1902ರಲ್ಲಿ ಮಾಸ್ಕೋ ಆರ್ಟ್ ಥಿಯೇಟರ್ ನ ಮೂಲಕ, ಸ್ಟಾನಿಸ್ ಲಾವ್ಸ್ ಕಿಯ ನಿರ್ದೇಶನದಲ್ಲಿ ಮೊದಲು ಪ್ರದರ್ಶನಗೊಂಡಿತು.
ಇದಕ್ಕೆ ‘ರಶಿಯನ್ ಬದುಕಿನ ದೃಶ್ಯಗಳು' ಎಂಬ ಉಪ ಶೀರ್ಷಿಕೆ ಇದೆ. ವೋಲ್ಗಾ ದಂಡೆಯ ಛತ್ರವೊಂದರಲ್ಲಿ ಕಾಲ ದೂಡುತ್ತಿರುವ ರಶಿಯಾದ ಕಡುಬಡವರ ಬದುಕು ಮೈತಳೆದಿದೆ. ಈ ಕೃತಿಯು ರಶಿಯನ್ ಸಾಮಾಜಿಕ ವಾಸ್ತವತೆಯ ಮೊಟ್ಟಮೊದಲ ಮುಖ್ಯ ಕೃತಿ ಎಂದು ಪ್ರಸಿದ್ಧಿ ಪಡೆದಿದೆ. ಸ್ಪಷ್ಟ ನೈತಿಕ ಪ್ರತಿಪಾದನೆಯಿಲ್ಲದ, ಶಾವಾದವನ್ನು ಎತ್ತಿಹಿಡಿಯುವ ಕೃತಿ ಎಂದು ಮೊದಲು ಈ ನಾಟಕ ಟೀಕೆಗೆ ಗುರಿಯಾಯಿತು.












Click it and Unblock the Notifications