ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ನಿಲ್ಲಿಸಲು ಸರ್ಕಾರ ಸೂಚನೆ
ಬೆಂಗಳೂರು, ನವೆಂಬರ್ 29: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಿಸಲಾಗುತ್ತಿತ್ತು ಆದರೆ ಅದನ್ನು ನಿಲ್ಲಿಸಬೇಕೆಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರ ಈಗಾಗಲೇ ವಿತರಿಸಿರುವ ಸೈಕಲ್ಗಳ ಗುಣಮಟ್ಟ ಕಳಪೆಯಾಗಿದೆ ಎನ್ನುವ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆ, ಮೊದಲು ಗುಣಮಟ್ಟವನ್ನು ಪರಿಶೀಲಿಸಿ ಬಳಿಕ ವಿತರಣೆ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ. ಹಾಗಾಗಿ ಸದ್ಯಕ್ಕೆ ಸೈಕಲ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆದೇಶ ಹೊರಡಿಸಿದ್ದ ಇಲಾಖೆ ಸೈಕಲ್ ವಿತರಣೆಯನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಿದೆ. ಇಲಾಖೆ ಸೈಕಲ್ ಮತ್ತು ಹೊಲಿಗೆ ಯಂತ್ರ ಕೇಂದ್ರ ಲುಧಿಯಾನಾದಿಂದ ಗುಣಮಟ್ಟದ ತಪಾಸಣೆ ವರದಿ ತರಿಸಿಕೊಂಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ದೊರೆತಿರುವ ಮಾಹಿತಿ ಪ್ರಕಾರ ಈಗಾಗಲೇ ಶಾಲೆಗಳಿಗೆ ಶೇಕಡಾ 90ರಷ್ಟು ಸೈಕಲ್ ವಿತರಿಸಿಯಾಗಿತ್ತು. ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷ 5.4 ಲಕ್ಷ ಸೈಕಲ್ ತಯಾರಿಕೆಗೆ ಹೇಳಿ 4.11 ಲಕ್ಷ ವಿತರಣೆಯಾಗಿದೆ. ಇನ್ನು ಉಳಿದ ಸೈಕಲ್ ನ್ನು ಗುಣಮಟ್ಟ ಪರೀಕ್ಷೆ ಮಾಡಿ ಪೂರೈಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಸೈಕಲ್ ನ್ನು ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ತಲುಪಿಸುವ ಮುನ್ನ ಮೂರು ಹಂತಗಳಲ್ಲಿ ತಪಾಸಣೆ ಮಾಡಲಾಗುತ್ತದೆ. ಮೊದಲು ಉತ್ಪಾದನೆ ಸಮಯದಲ್ಲಿ 100 ಸೈಕಲ್ ಗಳನ್ನು, ಎರಡನೆಯದ್ದು ಕ್ರ್ಯಾಶ್ ಪರೀಕ್ಷೆ ಎಂದು 2500 ಸೈಕಲ್ ಗಳಲ್ಲಿ ಒಂದು, ಮೂರನೇ ಹಂತದಲ್ಲಿ ವಿತರಣೆ ಸಮಯದಲ್ಲಿ 40 ಸೈಕಲ್ ಗಳನ್ನು ತಪಾಸಣೆ ಮಾಡಲಾಗುತ್ತದೆ.












Click it and Unblock the Notifications