ಮೋಹನ್ ಭಾಗವತ್ ಹತ್ಯೆಗೆ ಸಂಚು: ಸದಾನಂದ ಗೌಡ, ಬಿ.ಸಿ ಪಾಟೀಲ್ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 9: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಕೇಂದ್ರ ಗುಪ್ತದಳದ ಅಧಿಕಾರಿಗಳು ರಾಜ್ಯ ಪೊಲೀಸರಿಗೆ ಸಂದೇಶ ರವಾನಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಆರ್ ಎಸ್ ಎಸ್ ಸಮಾವೇಶವನ್ನು ಉಗ್ರರು ಗುರಿಯಾಗಿಸಿದ್ದರು ಎಂಬ ಮಾಹಿತಿ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿತ್ತು. ನಂತರ ಕಾರ್ಯಕ್ರಮಕ್ಕೆ ಭದ್ರತೆ ಹೆಚ್ಚಿಸಿ ಯಾವುದೇ ಅನಾಹುತ ನಡೆಯದಂತೆ ಬೆಂಗಳೂರು ಪೊಲೀಸರು ನಿಗಾವಹಿಸಿದ್ದರು ಎನ್ನಲಾಗಿದೆ.

ಮೋಹನ್ ಭಾಗವತ್ ಕೊಲೆ ಯತ್ನದ ಬಗ್ಗೆ ಕೇಂದ್ರ ಸಚಿವ ಡಿವಿ ಸಂದಾನಂದ ಗೌಡ ಪ್ರತಿಕ್ರಿಯಿಸಿದ್ದು, 'ಕೇಂದ್ರ ಸರ್ಕಾರ ಅಂತವರನ್ನು ಸಮರ್ಪಕವಾಗಿ ಎದುರಿಸಲಿದೆ' ಎಂದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿವಿಎಸ್ ''ಮೋಹನ್ ಭಾಗವತ್ ಅವರ ಹತ್ಯೆಗೆ ಸಂಚು ರೂಪಿಸಿರೋದು ತಪ್ಪು. ಕೇಂದ್ರ ಸರ್ಕಾರ ಇಂತದಕ್ಕೆಲ್ಲಾ ಆದಷ್ಟು ಬೇಗ ಕಡವಾಣ ಹಾಕಲಿದೆ. ಇದು ಕೆಲವು ಸತ್ಯ ಇರಬಹುದು, ಇಲ್ಲ ಸುಳ್ಳು ಇರಬಹುದು. ಸದ್ಯ ಆ ರೀತಿಯಾಗಿ ರಾಜ್ಯದಲ್ಲಿ ಯಾವುದೂ ಹತ್ಯೆಗಳು ನಡೆದಿಲ್ಲ.. ಅಂತಹದನ್ನ ಖಂಡಿಸಲು ರಾಜ್ಯ ಮತ್ತು ಕೇಂದ್ರ ಸಮರ್ಥವಾಗಿದೆ'' ಎಂದು - ಡಿವಿ ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮುಂಚೆ ರಾಜ್ಯ ಕೃಷಿ ಸಚಿವ ಬಿಸಿ ಪಾಟೀಲ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹತ್ಯೆಗೆ ಸಂಚು ಮಾಡಲಾಗಿದೆ ಎನ್ನುವುದು ಖಂಡಿಸಿದ್ದಾರೆ. ವಿಧಾನಸಭೆ ಕಲಾಪಕ್ಕೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ''ರಾಷ್ಟ್ರೀಯವಾದಿಗಳ ಮೇಲಿನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ವಿಚಾರವನ್ನು ಗುಪ್ತಚರ ಇಲಾಖೆ ನೀಡಿದೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಗೃಹ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡುವುದಾಗಿ ಅವರು ಹೇಳಿದರು.
ಅಂದ್ಹಾಗೆ, ಭಾನುವಾರ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೇಲೆ ಉಗ್ರರು ಕಣ್ಣಿಟ್ಟಿದ್ದರು ಎಂಬ ಮಾಹಿತಿಯನ್ನು ಕೇಂದ್ರ ಗುಪ್ತದಳ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿತ್ತು.
ಗುಪ್ತಚರ ಮಾಹಿತಿಯಿಂದ ಎಚ್ಚೆತ್ತುಕೊಂಡ ಪೊಲೀಸರು, ತೀವ್ರ ನಿಗಾವಹಿಸಿದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ಮೋಹನ್ ಭಾಗವತ್ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಇಂದು ಕೂಡ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.












Click it and Unblock the Notifications