Bengaluru weather: ಗಣೇಶ ಹಬ್ಬದ ಸಂಭ್ರಮ, ಖುಷಿ ಕಸಿದ ಮಳೆ, ಜನಜೀವನ ಅಸ್ತವ್ಯಸ್ತ
ಬೆಂಗಳೂರು ಆಗಸ್ಟ್ 30: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸುರಿದ ಭಾರಿ ಮಳೆಯು ಗೌರಿ ಗಣೇಶ ಹಬ್ಬದ ಸಂಭ್ರಮ, ಸಡಗರ ಕಿತ್ತುಕೊಂಡಿದೆ. ತಗ್ಗು ಪ್ರದೇಶದಲ್ಲಿನ ಬಡಾವಣೆಗಳು, ಮನೆಗಳು ಜಲಾವೃತಗೊಂಡಿವೆ. ಮನೆ ವಸ್ತುಗಳೆಲ್ಲ ಹಾಳಾಗಿವೆ. ಕೆಲವೆಡೆ ಮರ ಬಿದ್ದು ಹಾನಿ ಸಂಭವಿಸಿದೆ. ಕೆಲವೆಡೆ ರಸ್ತೆ ಸಂಚಾರ ಅಸ್ತವೆಸ್ತಗೊಂಡಿದೆ.
ಕೋವಿಡ್ ಕಡಿಮೆಯಾಗಿದೆ ಎಂದು ಗೌರಿ ಗಣೇಶ ಹಬ್ಬಕ್ಕೆ ಅದ್ಧೂರಿ ತಯಾರಿ ನಡೆಸುತ್ತಿದ್ದ ಬೆಂಗಳೂರು ಜನರಿಗೆ ವರುಣಾಘಾತ ಎದುರಾಗಿದೆ. ಸೋಮವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿಯಿತು. ಸಂಜೆ ನಂತರ ಜೋರಾಗಿ ಅಬ್ಬರಿಸಲು ಶುರುವಾಯಿತು. ಆರ್.ಆರ್.ನಗರ, ಮೆಜೆಸ್ಟಿಕ್, ಜಯನಗರ, ಹೆಬ್ಬಾಳ, ವಿಜಯನಗರ, ಹಂಪಿನಗರ, ರಾಜಾಜಿನಗರ, ಮಲ್ಲೇಶ್ವರ, ಬೊಮ್ಮನಹಳ್ಳಿ, ಸರ್ಜಾಪುರ ರಸ್ತೆ, ವಿದ್ಯಾರಣ್ಯಪುರ, ಯಶವಂತಪುರಗಳಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಜನ ತೊಂದರೆ ಅನುಭವಿಸಿದರು.
Gowri Habba 2022: ಗೌರಿ ಹಬ್ಬ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಹಬ್ಬದ ಮಹತ್ವ!
ಆರ್ ಆರ್ ನಗರದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಊರಿಗೆ ತೆರಳಲು ಮೆಜೆಸ್ಟಿಕ್ಗೆ ಬಂದಿದ್ದ ಸಾವಿರಾರು ಜನರು ಸಂಕಷ್ಟ ಅನುಭವಿಸಿದರು. ಮೆಜೆಸ್ಟಿಕ್ ಬಸ್ ನಿಲ್ದಾಣದ ಒಳಗೆ ನೀರು ತುಂಬಿಕೊಂಡಿತ್ತು. ಇದರಿಂದ ಪ್ರಯಾಣಿಕರು, ಬಸ್ ಚಾಲಕರು ಕಿರಿಕಿರಿ ಅನುಭವಿಸಿದರು. ಶಿವಾನಂದ ವೃತ್ತದ ಬಳಿ ಕಾರಿನ ಮೇಲೆ ಮರ ಬಿದ್ದು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.
ಸನ್ನಿ ಬ್ರೂಕ್ಸ್ ಬಡಾವಣೆಯಲ್ಲಿ 4ಅಡಿ ನೀರು
ಬೆಂಗಳೂರು ಸರ್ಜಾಪುರ ರಸ್ತೆಯ ಸನ್ನಿ ಬ್ರೂಕ್ಸ್ ಬಡಾವಣೆಯಲ್ಲಿ ಮಳೆಯಿಂದ ಸಾಕಷ್ಟು ಆವಾಂತರ ಸೃಷ್ಟಿಯಾಗಿವೆ. ಇಡಿ ಬಡಾವಣೆ ತುಂಬೆಲ್ಲ ನಾಲ್ಕು ಅಡಿಯಷ್ಟು ಮಳೆ ನೀರು ನಿಂತುಕೊಂಡಿದೆ. ಜನರು ಗಣೇಶ ಹಬ್ಬದ ಖುಷಿ ಮರೆತು ಮನೆಯಿಂದ ನೀರು ಹೇಗೆ ಹೊರಹಾಕಬೇಕು. ಹೇಗೆ ಬದುಕು ಸಾಗಿಸಬೇಕು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಹಬ್ಬದ ಖುಷಿಯನ್ನು ದಿಢೀರ್ ಮಳೆ ಕಸಿದಿದೆ. ಎಲ್ಲೆಡೆ ಜನ ಮನೆ ಒಳಗೆ ಇರಲಾರದೇ, ಹೊರ ಬರಲೂ ಆಗದೇ ತತ್ತರಿಸಿದ್ದಾರೆ.
ಇಲ್ಲಿನ ಸಾಕಷ್ಟು ಮನೆಗಳಿಗೆ, ವಿಲ್ಲಾಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಲ್ಲಿ ನಿಂತಿವೆ. ವಿಲ್ಲಾದ ನೆಲಮಹಡಿಗೆ ನೀರು ನುಗ್ಗಿದ್ದು, ಬಡಾವಣೆಯಲ್ಲಿ ರಸ್ತೆ ಯಾವುದು, ಒಳಚರಂಡಿ ಯಾವುದು ಎಂದು ತಿಳಿಯದಷ್ಟು ನೀರು ಆವರಿಸಿದೆ. ಇಲ್ಲಿನ ಜನ ಭಯದಲ್ಲಿ ಜೀವಿಸುವಂತಾಗಿದೆ.
ನದಿಯಂತಾದ ಅನುಗ್ರಹ ಬಡಾವಣೆ
ಅದೇ ರೀತಿ ಬೊಮ್ಮನಹಳ್ಳಿಯಲ್ಲಿ ರೈಲ್ವೆ ಸೇತುವೆ ಸುತ್ತಮುತ್ತ ನೀರು ತುಂಬಿಕೊಂಡಿದೆ. ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇಲ್ಲಿನ ಅನುಗ್ರಹ ಬಡಾವಣೆ ಸಹ ಜಲಾವೃತಗೊಂಡಿದೆ. ಮನೆಗಳ ವಸ್ತುಗಳು ಕೊಳಚೆ ಸಹಿತ ಒಳಗೆ ನುಗ್ಗಿದ ಮಳೆನೀರಿನಲ್ಲಿ ತೇಲಿವೆ. ಕೆಲವು ಮನೆಗಳಲ್ಲಿ ಆಹಾರ ಸಾಮಗ್ರಿಗಳು ಹಾಳಾಗಿವೆ. ಅಗ್ನಿ ಶಾಮಕದಳ ಸಿಬ್ಬಂದಿ ನೀರು ಹೊರಹಾಕುತ್ತಿದ್ದಾರೆ. ಮಳೆಯಿಂದಾಗಿ ಮಹಿಳೆಯರು, ಮಕ್ಕಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ಇದೇ ರೀತಿ ಸಮಸ್ಯೆ ಉಂಟಾಗುತ್ತಿದ್ದು, ಇದಕ್ಕೆ ಬಿಬಿಎಂಪಿ ಶಾಸ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಜಲಾವೃತಗೊಂಡ ಮೈಕೋ ಲೇಔಟ್ನಲ್ಲಿ ಆಕಸ್ಮಿಕ ಬೆಂಕಿ
ಬೆಂಗಳೂರಿನ ಮೈಕೋ ಲೇಔಟ್ ಸಂಪೂರ್ಣ ಜಲಾವೃತಗೊಂಡಿದೆ. ಹಬ್ಬದ ಆಚರಣೆಯಲ್ಲಿ ತೊಡಗಿಕೊಳ್ಳುತ್ತಿದ್ದ ಜನರ ಆಸೆಗೆ ಮಳೆ ನಿರಾಸೆ ಉಂಟು ಮಾಡಿದೆ. ಮಂಗಳವಾರವು ಸಹ ಮಳೆ ಬರುವ ನಿರೀಕ್ಷೆ ಇದ್ದು ಜನ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಮಧ್ಯೆ ಮೈಕೋ ಲೇಔಟ್ನಲ್ಲಿ ಬೆಂಕಿ ಕಾಣಿಸಿಕೊಂಡು ಮತ್ತಷ್ಟು ಭಯದ ವಾತಾವರಣ ಸೃಷ್ಟಿಯಾಗಿದೆ.
ಮಂಗಳವಾರ ಬೆಳಗ್ಗೆ ಇಲ್ಲಿನ ಐಶ್ವರ್ಯಾ ಫ್ರೆಶ್ ಅಂಗಡಿಯಾಲ್ಲಿ ಶಾಕ್ ಸರ್ಕ್ಯೂಟ್ನಿಂದ ದಿಢೀರನೇ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಬಾಗಿಲು ಮುಚ್ಚಿದ್ದ ಅಂಗಡಿಯಿಂದ ಹೊಗೆ ಆಚೆ ಬರುತ್ತಿದ್ದದ್ದನ್ನು ಸ್ಥಳಿಯರು ಗಮನಿಸಿದ್ದಾರೆ. ಮಳೆ ನಡುವೆ ಆಕಸ್ಮಿಕ ಬೆಂಕಿ ನಿವಾಸಿಗಳಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ವಿದ್ಯುತ್ ತಂತಿ ಮೇಲೆ ಬಿದ್ದ ಮರ: ವ್ಯಕ್ತಿ ಸಾವು
ಬೆಂಗಳೂರಿನ ಹೊಸಕೆರೆಹಳ್ಳಿ ಸಮೀಪದ ಇಟ್ಟಮಡುವಿನಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೋರೇಗೌಡ ಎಂಬುವವರು ಮನೆ ಪಕ್ಕದದಲ್ಲಿ ಬೃಹತ್ ಆಲದ ಮರ ಬಿದ್ದ ಪರಿಣಾಮ ಕುಟುಂಬಕ್ಕೆ ಆಧಾರವಾಗಿದ್ದ ಬೋರೇಗೌಡ ಅವರು ಮೃತಪಟ್ಟಿದ್ದಾರೆ. ಆಲದ ಮರ ಮೊದಲು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇದರಿಂದ ವಿದ್ಯುತ್ ತಂತಿಗಳು ಹರಿದು ನೆಲದ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಈ ವೇಳೆ ವಿದ್ಯುತ್ ಇಲ್ಲದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಒಂದು ವೇಳೆ ವಿದ್ಯುತ್ ಇದ್ದಿದ್ದರೆ ಇಡಿ ಕುಟುಂಬವೇ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಸದ್ಯ ಸಂಭವನೀಯ ಅವಘಡ ತಪ್ಪಿತು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಇನ್ನು ಮನೆ ಯಜಮಾನನ್ನು ಕಳೆದುಕೊಂಡು ಕುಟುಂಬಸ್ಥುರು ಕಣ್ಣೀರು ಹಾಕುತ್ತಿದ್ದಾರೆ.
ಬೆಂಗಳೂರಲ್ಲಿ 109ಮಿ.ಮೀ.ಮಳೆ
ಮಹದೇವಪುರ ವ್ಯಾಪ್ತಿಯಲ್ಲಿ ಅತ್ಯಧಿಕ ಭಾರಿ ಮಳೆ ದಾಖಲಾಗಿದೆ. ಈ ಭಾಗದ ದೊಡ್ಡಾನೆಕ್ಕುಂದಿಯಲ್ಲಿ 109 ಮಿ.ಮೀ.ಮಳೆ ಬಿದ್ದಿದೆ. ಹಗದೂರು 105 ಮಿ.ಮೀ, ಸಿಂಗಸಂದ್ರ 93 ಮಿ.ಮೀ, ಎಚ್.ಗೊಲ್ಲಹಳ್ಳಿ 91ಮಿ.ಮೀ, ಹೊರಮಾವು 90 ಮಿ.ಮೀ, ಎಚ್ಎಎಲ್ ಏರ್ಫೋರ್ಟ್ ಮತ್ತು ಯಲಹಂಕದಲ್ಲಿ ತಲಾ 85.5 ಮಿ.ಮೀ, ವರ್ತೂರು 82.5 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ, ಸಂಪಂಗಿರಾಮನಗರ ತಲಾ 81 ಮಿ.ಮೀ, ಶೆಟ್ಟಿಹಳ್ಳಿ, ರಾಹಮಹಲ್ ಗುಟ್ಟಹಳ್ಳಿ ತಲಾ 75 ಮಿ.ಮೀ, ಹೆಮ್ಮಿಗೆಪುರ ಹಾಗೂ ಬಾಗಲಗುಂಟೆ ತಲಾ 71 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಬೊಮ್ಮನಹಳ್ಳಿ, ಬಿಳೇಕಳಿ, ಹೆಮ್ಮಿಗೆಪುರ (1) ತಲಾ 69 ಮಿ.ಮೀ, ಅಟ್ಟೂರು 61ಮಿ.ಮೀ, ಮಳೆ ದಾಖಲಾಗಿದೆ. ಉಳಿದ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ)ದ ವರದಿ ತಿಳಿಸಿದೆ.
ಮಂಗಳವಾರವೂ ಜೋರು ಮಳೆ ನಿರೀಕ್ಷೆ
ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆಗಳ ಪರಿಣಾಮ ರಾಜ್ಯದಾದ್ಯಂತ ಜೋರು ಮಳೆ ಸುರಿಯುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲೂ ಸಹ ಮಳೆ ಮುಂದುವರಿಯಲಿದೆ. ಮಂಗಳವಾರ ಸಂಜೆ ನಗರದ ಹಲವು ಕಡೆಗಳಲ್ಲಿ ಜೋರು ಮಳೆ ಆಗಮಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮಾಹಿತಿ ನೀಡಿದೆ.