ಪರಿಟೋ ತತ್ವದಡಿ ಲಸಿಕೆ ಅಭಿಯಾನ ಕೈಗೊಳ್ಳಲು ಡಾ. ಶ್ರೀನಿವಾಸ ದೊರಸಾಲ ಸಲಹೆ
ಬೆಂಗಳೂರು, ಮೇ. 24 : ರಾಜ್ಯದಲ್ಲಿ ಕೊರೊನಾ ಸೋಂಕನ್ನು ತ್ವರಿತರವಾಗಿ ನಿಯಂತ್ರಣ ಮಾಡಲು ತಜ್ಞ ವೈದ್ಯ ಡಾ. ಶ್ರೀನಿವಾಸ್ ದೊರಸಾಲ ಮಹತ್ವದ ಸಲಹೆಯನ್ನು ಸರ್ಕಾರಕ್ಕೆ ನೀಡಿದ್ದಾರೆ. ರಾಜ್ಯದಲ್ಲಿ ತ್ವರಿತವಾಗಿ ಕೊರೊನಾ ಸೋಂಕು ತಹಬಂದಿಗೆ ತರಬೇಕಾದರೆ ಲಸಿಕೆ ಅಭಿಯಾನವನ್ನು ಪರಿಟೋ ಪ್ರಿನ್ಸಿಪಾಲ್ ( 80/20 Rule ) ಪಾಲಿಸಬೇಕು. ಈ ಪರಿಟೋ ರೂಲ್ ಪಾಲನೆ ಮಾಡಿದರೆ ರಾಜ್ಯದಲ್ಲಿ ಶೇ. 20 ರಷ್ಟು ಮಂದಿಗೆ ಲಸಿಕೆ ನೀಡುವ ಮೂಲಕ ಶೇ. 80 ರಷ್ಟು ಕೊರೊನಾ ಸೋಂಕು ಹರಡದಂತೆ ನಿಯಂತ್ರಣಕ್ಕೆ ತರಬಹದು. ಪರಿಟೋ ಪ್ರಿನ್ಸಿಪಾಲ್ ಪಾಲನೆ ಮಾಡಿ ನಾಳೆಯಿಂದ ಲಸಿಕೆ ಅಭಿಯಾನವನ್ನು ಆರಂಭಿಸಿದಲ್ಲಿ ಮುಂದಿನ ಒಂದು ತಿಂಗಳಲ್ಲಿ ಕೊರೊನಾ ಸೋಂಕನ್ನು ಒಂದು ತಿಂಗಳಲ್ಲಿ ಶೇ. 80 ರಷ್ಟು ನಿಯಂತ್ರಣ ಮಾಡಬಹುದು. ಸರ್ಕಾರ ಈ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯೋನ್ಮುಖವಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಏನಿದು ಪರಿಟೋ ಪ್ರಿನ್ಸಿಪಾಲ್
ಯಾವುದೇ ಕೆಲಸವನ್ನು ಶೇ. 20 ರಷ್ಟು ಪರಿಶ್ರಮ ಹಾಕಿ ಶೇ. 80 ರಷ್ಟು ಸಾಧನೆ ಮಾಡಬಹುದು. ಆದರೆ, ಬಾಕಿ 20 ರ ಸಾಧನೆ ಮಾಡಲಿಕ್ಕೆ ಶೇ. 80 ರಷ್ಟು ಪರಿಶ್ರಮ ಮುಖ್ಯವಾಗುತ್ತದೆ. ಈ ಪ್ರಿನ್ಸಿಪಲ್ ಎಲ್ಲದಕ್ಕೂ ಅನ್ವಯ ಆಗುತ್ತದೆ. ಒಬ್ಬ ವಿದ್ಯಾರ್ಥಿ ತನ್ನ ಶೇ. 20 ಶ್ರಮ ಹಾಕುವ ಮೂಲಕ ಶೇ. 80 ರಷ್ಟು ಅಂಕ ಗಳಿಸಬಹುದು. ಆದರೆ ಬಾಕಿ 20 ರಷ್ಟು ಅಂಕ ಗಳಿಸಬೇಕಾದರೆ ಶೇ. 80 ರಷ್ಟು ಪರಿಶ್ರಮ ಅಗತ್ಯ. ಇದು ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯ ಆಗುತ್ತದೆ. ಕೊರೊನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಲಸಿಕೆ ಅಭಿಯಾನವನ್ನು ಕೂಡ ಈ ಪರಿಟೋ ಪ್ರಿನ್ಸಿಪಾಲ್ ಅಳವಡಿಸಿಕೊಂಡರೆ ರಾಜ್ಯದಲ್ಲಿ ಒಂದು ತಿಂಗಳಲ್ಲಿ ಕೊರೊನಾ ಸೋಂಕನ್ನು ಶೇ. 80 ರಷ್ಟು ನಿಯಂತ್ರಣ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಪರಿಟೋ ತತ್ವ ಪಾಲನೆ ಮೊದಲ ಹೆಜ್ಜೆ
ಕೊರೊನಾ ಸೂಪರ್ ಸ್ಪ್ರೆಡರ್ ಗೆ ಕಾರಣವಾಗುತ್ತಿರುವ ಜನರನ್ನು ಗುರುತಿಸುವುದು. ಆದ್ಯತೆ ಮೇರೆಗೆ ಅವರಿಗೆ ಲಸಿಕೆ ನೀಡುವುದು. ಕೊರೊನಾ ಸೋಂಕು ಸೂಪರ್ ಸ್ಪ್ರೆಡ್ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಮೊದಲು ಅವರಿಗೆ ಲಸಿಕೆ ನೀಡಬೇಕು. ಇದೇ ತತ್ವದಡಿ ಸರ್ಕಾರ ಈವರೆಗೂ ಮೊದಲು 65 ವರ್ಷ ಮೇಲ್ಟಟ್ಟವರಿಗೆ ಲಸಿಕೆ ನೀಡಿತು. ಆನಂತರ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಯಿತು. ಇದೀಗ ಆದ್ಯತಾ ಮೇರೆಗೆ ವ್ಯಾಕ್ಸಿನ್ ಕೊಡಬೇಕಾಗಿದೆ. ಅಂದರೆ ಯಾರು ಜನರೊಂದಿಗೆ ಹೆಚ್ಚಾಗಿ ನಿಕಟ ಸಂಪರ್ಕ ಹೊಂದುವ ಕಾರ್ಯದಲ್ಲಿ ಇರುತ್ತಾರೋ ಅ ಸಮುದಾಯದ ಜನರನ್ನು ಗುರುತಿಸಿಬೇಕು. ಅವರು ಇರುವಲ್ಲಿಗೆ ಹೋಗಿ ಲಸಿಕೆ ಕೊಡಲು ಸರ್ಕಾರ ವ್ಯವಸ್ಥೆ ಮಾಡಬೇಕು. ತ್ವರಿತವಾಗಿ ಅವರಿಗೆ ಪಾರರ್ಶಕವಾಗಿ ಲಸಿಕೆ ನೀಡಬೇಕು. ಇವತ್ತಿನಿಂದಲೇ ಲಸಿಕೆಯನ್ನು ಆದ್ಯತಾ ವಲಯಗಳಿಗೆ ನೀಡಿ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಬೇಕು ಎಂದು ಡಾ. ಶ್ರೀನಿವಾಸ್ ದೊರಸಾಲ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸರ್ಕಾರದಿಂದ ಪರಿಟೋ ತತ್ವ ಪಾಲನೆ
ರಾಜ್ಯದಲ್ಲಿ ಲಸಿಕೆ ಅಭಿಯಾನವನ್ನು ಪರಿಟೋ ಪ್ರಿನ್ಸಿಪಾಲ್ ಅಡಿಯಲ್ಲಿಯೇ ನೀಡಲಾಗುತ್ತಿದೆ. ಅದರ ಪ್ರಕಾರ ಮೊದಲ ಆದ್ಯತೆಯನ್ನು ಕೊರೊನಾ ಸೋಂಕಿನಿಂದ ಅತಿ ಹೆಚ್ಚು ಅಪಾಯಕ್ಕೆ ಒಳಗಾಗುವ 65 ವರ್ಷ ಮೇಲ್ಪಟ್ಟವರಿಗೆ ನೀಡಲಾಯಿತು. ಇದೀಗ ಎರಡನೇ ಆದ್ಯತೆಯನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡಲಾಯಿತು. ಸರ್ಕಾರದ ಈ ವೈಜ್ಞಾನಿಕ ಕ್ರಮ ಸರಿ, ಆದರೆ, ಲಸಿಕೆ ಹಾಕಿಸಿಕೊಳ್ಳಲು ಜನರು ಸರ್ಕಾರಿ ಆಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಂತಿದ್ದು ಬಹುದೊಡ್ಡ ಪ್ರಮಾದ ಆಗಿದೆ. ಇದರಿಂದ ಕೊರೊನಾ ಸೋಂಕು ಸೂಪರ್ ಸ್ಪ್ರೆಡರ್ ಅಗಲು ಕಾರಣವಾಗಿರಬಹುದು. ಆರೋಗ್ಯ ಸಿಬ್ಬಂದಿ ಹಿರಿಯರ ಮನೆಗಳಿಗೆ ಹೋಗಿ ಲಸಿಕೆ ಹಾಕಿದ್ದೇ ಆದಲ್ಲಿ ಕೊರೊನಾ ಸೋಂಕು ಈ ಪರಿ ಹರಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಆದ್ಯತಾ ಕ್ಷೇತ್ರಗಳ ಅನುಸಾರ ಲಸಿಕೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಆರೋಗ್ಯ ಮಂತ್ರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಲಸಿಕೆ ಹಾಕುವ ಕೇಂದ್ರಗಳೇ ಕೊರೊನಾ ಸೊಂಕು ಹರಡಿಸುವ ಕೇಂದ್ರಗಳಾಗಬಾರದು. ಜನರು ಇರುವಲ್ಲಿಗೆ ಹೋಗಿ ಲಸಿಕೆ ಹಾಕುವಂತಾಗಬೇಕು ಎಂದು ತಜ್ಞರು ಸಲಹೆ ಮಾಡಿದ್ದಾರೆ.

ನಗರ ಪ್ರದೇಶದಲ್ಲಿ ಏನು ಮಾಡಬೇಕು
ಬೆಂಗಳೂರು ಸೇರಿದಂತೆ ನಗರ ಪಟ್ಟಣಗಳಲ್ಲಿ ಮೊದಲ ಆದ್ಯತೆಯನ್ನಾಗಿ ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ವೈದ್ಯಕೀಯ ಸಿಬ್ಬಂದಿ, ಅಂಚೆ ಇಲಾಖೆ, ಸಿಲಿಂಡರ್ ವಿತರಣೆ ಮಾಡುವರು, ವಿಕಲಾಚೇತನರರು, ಮಾನಸಿಕ ಅಸ್ವಸ್ತರು ಹಾರೈಕೆದಾರರು, ಕೈದಿಗಳು, ಚಿತಾಗಾರ, ಸ್ಮಶಾನದಲ್ಲಿ ಕೆಲಸ ಮಾಡುವರು, ಆರೋಗ್ಯ ಕಾರ್ಯಕರ್ತರು ಮತ್ತು ನಿಕಟ ಕುಟುಂಬಗಳೂ, ಸರ್ಕಾರಿ ಸಾರಿಗೆ ಸಿಬ್ಬಂದಿ, ವಿದ್ಯುತ್ ಮತ್ತು ನೀರು ಸರಬರಾಜು ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು ಇತರರಿಗೆ ಪರಿಟೋ ತತ್ವದಡಿ ಲಸಿಕೆ ನೀಡುವಂತೆ ಬೆಂಗಳೂರು ಮಹಾನಗರ ಪಾಲಿಕೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಮುಖ್ಯಸ್ಥರು ಮೇ. 20 ರಂದು ಸಲಹೆ ಮಾಡಿದ್ದಾರೆ. ಇದರಲ್ಲಿ ಉಲ್ಲೇಖವಾಗಿರುವುದು ಇದೇ ಪರಿಟೋ ಪ್ರಿನ್ಸಿಪಾಲ್. ಲಸಿಕೆಯನ್ನು ಇವರು ಇರುವ ಕಡೆ ಹೋಗಿ ಕೊಡುವಂತಾಗಬೇಕು. ಮೊದಲು ಕೊರೊನಾ ಸೋಂಕು ಹರಡದಂತೆ ಮಾಡಬೇಕು. ಸೂಕ್ತ ಗುರುತಿನ ಚೀಟಿ ತೆಗೆದುಕೊಂಡು ಆದ್ಯತಾ ವಲಯಕ್ಕೆ ಲಸಿಕೆ ಹಾಕಿ ಮುಗಿಸಿದರೆ ಬಹುಬೇಗ ಕೊರೊನಾ ಸೋಂಕು ಹತೋಟಿಗೆ ಬರಲಿದೆ ಎಂದು ಡಾ. ಶ್ರೀನಿವಾಸ್ ದೊರಸಾಲ ಸಲಹೆ ಮಾಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಏನು ಮಾಡಬೇಕು
ಇನ್ನು ಗ್ರಾಮೀಣ ಭಾಗದಲ್ಲಿ ದಿನ ನಿತ್ಯ ಓಡಾಡುವರು, ಜನ ಸಂಪರ್ಕದಲ್ಲಿರುವ ಅಟೋ, ಸಾರಿಗೆ, ಶಿಕ್ಷಕರು, ಅಂಗನವಾಡಿ ನೌಕರರಿಗೆ ಮೊದಲು ಲಸಿಕೆ ನೀಡಬೇಕು. ಗ್ರಾಮಗಳಿಗೆ ತೆರಳಿ ಲಸಿಕೆ ಹಾಕಲು ಸರ್ಕಾರ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಗ್ರಾಮದಲ್ಲಿನ ಲಸಿಕೆಯ ಮೇಲುಸ್ತುವರಿಯನ್ನು ಶಾಲಾ ಶಿಕ್ಷಕರಿಗೆ ನೀಡಬೇಕು. ಯಾಕೆಂದರೆ, ಗ್ರಾಮಸ್ಥರು ಈಗಾಗಲೇ ಶಿಕ್ಷಕರಿಗೆ ಪರಿಚಿತರಾಗಿರುತ್ತಾರೆ. ಗ್ರಾಮದ ಇಡೀ ಪರಿಸ್ಥಿತಿ ಶಿಕ್ಷಕರಿಗೆ ಅರಿವು ಇರುವ ಕಾರಣ ಶಿಕ್ಷಕರೇ ಲಸಿಕೆ ಮೇಲುಸ್ತುವಾರಿ ನಿರ್ವಹಣೆಗೆ ಅರ್ಹ ವ್ಯಕ್ತಿಗಳು. ಪರಿಟೋ ಪ್ರಿನ್ಸಿಪಾಲ್ ಪಾಲನೆ ಮಾಡಿದ್ದೇ ಆದಲ್ಲಿ ಮುಂದಿನ ಒಂದು ತಿಂಗಳೊಳಗೆ ರಾಜ್ಯದಲ್ಲಿ ಶೇ. 80 ರಷ್ಟು ಕೊರೊನಾ ಸೋಂಕು ನಿಯಂತ್ರಣಕ್ಕೆ ತರಬಹುದು.
Recommended Video

ಲಸಿಕೆ ಅಭಿಯಾನ ವಿವರ
ಪರಿಟೋ ತತ್ವದ ಪ್ರಕಾರ ರಾಜ್ಯದಲ್ಲಿ ಶೇ. 20 ರಷ್ಟು ಮಂದಿಗೆ ಲಸಿಕೆ ಕೊಡುವ ಮೂಲಕ ಶೇ. 80 ರಷ್ಟು ಸೋಂಕು ಹರಡುವಿಕೆ ತಡಬಹುದಿತ್ತು. ಕೇಂದ್ರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ 94 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ. 26 ಲಕ್ಷ ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಒಟ್ಟಾರೆ 1.20 ಕೋಟಿ ಮಂದಿ ಲಸಿಕೆ ಪಡೆದಿದ್ದಾರೆ. ಪರಿಟೋ ರೂಲ್ ಪಾಲನೆ ಮಾಡಿ ಲಸಿಕೆ ನೀಡಿದ್ದಲ್ಲಿ ಇಷ್ಟೊತ್ತಿಗಾಗಲೇ ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಣ ಮಾಡಬಹುದಿತ್ತು. ಆದರೆ, ಲಸಿಕೆ ಹಾಕಿಸುವ ಕೇಂದ್ರಗಳೇ ಕೊರೊನಾ ಸೋಂಕು ಹರಡುವಿಕೆಯ ಹಾಟ್ಸ್ಪಾಟ್ ಗಳು ಆಗಿ ಬದಲಾದವು. ಲಕ್ಷಾಂತರ ಕೋಟಿ ವ್ಯಯಿಸಿ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಪರದಾಡುತ್ತಿದೆ. ಸದ್ಯ ವೈಜ್ಞಾನಿಕ ರೀತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಇರುವ ಏಕೈಕ ಹಾದಿ ಲಸಿಕೆ ಅಭಿಯಾನ. ಅದನ್ನು ಶಿಸ್ತುಬದ್ಧವಾಗಿ ಈ ತತ್ವದಡಿ ಅನುಷ್ಠಾನ ಮಾಡಿದ್ದೇ ಆದಲ್ಲಿ ಕೊರೊನಾ ಸೋಂಕಿನಿಂದ ಪಾರಾಗಬಹುದು ಎಂದು ತಜ್ಞ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications